ಭಾರಿ ಮಳೆಯಲ್ಲಿಯೇ ಗದ್ದೆಯನ್ನು ಉಳುಮೆ ಮಾಡಿದ ಜಿಲ್ಲಾ ಪಂಚಾಯತ್ ಸಿಇಒ 

ಜಿಲ್ಲೆಯಾದ್ಯಂತ ಮತ್ತೊಮ್ಮೆ ಮಳೆಯು ಚುರುಕುಗೊಂಡಿದ್ದು, ಭಾರಿ ಮಳೆ ಆಗುತ್ತಿದೆ. ಈ ಬಾರಿ ಮಳೆಯು ವಿಳಂಬವಾದ ಕಾರಣ ತಡವಾಗಿ ಆರಂಭಗೊಂಡ ಭತ್ತದ ಕೃಷಿಯ ಚಟುವಟಿಕೆಗಳು, ಪ್ರಸ್ತುತ ಮಳೆಯ ನಡುವೆಯೂ ಚುರುಕಾಗಿ ನಡೆಯುತ್ತಿವೆ.

*ಹಡಿಲು ಭೂಮಿ ಕೃಷಿಗೂ ತೊಂದರೆ ಯಾಗದ ಮಳೆ*
ಜಿಲ್ಲೆಯಲ್ಲಿ, ಚಿಕ್ಕ ಹಿಡುವಳಿ, ಕೂಲಿಕಾರರ ಸಮಸ್ಯೆ ಹಾಗೂ ಲಾಭದಾಯಕವಲ್ಲದ ಕಾರಣದಿಂದಾಗಿ ಜನರು ಕೃಷಿಯಿಂದ ವಿಮುಖರಾಗಿ ಸಾವಿರಾರು ಎಕರೆ ಭತ್ತದ ಗದ್ದೆಗಳನ್ನ ಹಡಿಲು ಬಿಟ್ಟಿರುವುದನ್ನ ಗಮನದಲ್ಲಿರಿಸಿ ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳಾದ ಶ್ರೀ ಪ್ರಸನ್ನ ರವರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ ಹಾಗೂ ಕೃಷಿ ಇಲಾಖೆಗಳ ಮೂಲಕ ಹಡಿಲು ಭೂಮಿ ಯನ್ನು ಕೃಷಿ ಮಾಡುವ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಒತ್ತು ನೀಡಿ, ಗ್ರಾಮ ಪಂಚಾ ಯತ್ ವಾರು ಗುರಿಯನ್ನು ನಿಗದಿಗೊಳಿಸಿ , ಅಧೀನ ಸಿಬ್ಬಂದಿಗಳಿಗೆ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ಕಳೆದ ಎರಡು ತಿಂಗಳು ಗಳಿಂದ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಈ ಮೂಲಕ ಈಗಾಗಲೇ 1034 ಎಕ್ರೆ ಭೂಮಿಯನ್ನು ಜಿಲ್ಲೆಯಲ್ಲಿ ಗುರುತಿಸಿ ಸಂಜೀವಿನಿ ಸದಸ್ಯರು ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಈ ಮೂಲಕ ಸುಸ್ಥಿರ ಅಭಿವೃದ್ಧಿಯ, ಸ್ವಾವಲಂಬನೆಯ ಹಾಗೂ ಪರಿಸರ ಪೂರಕವಾದ ಮಹತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಹಲವಾರು ಕಡೆ ಈಗಾಗಲೇ ನೇರ ಬಿತ್ತನೆ ಮೂಲಕ ಹಾಗೂ ನಾಟಿಯ ಮೂಲಕ ಬೇಸಾಯ ಆರಂಭವಾಗಿದೆ.

ಇವತ್ತು ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಾಳಿ ಯಲ್ಲಿ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿಯ ನಾಟಿ ಮಾಡುವ ಕಾರ್ಯ ಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಖುದ್ದಾಗಿ ಭಾಗವಹಿಸಿದ್ದರು .

ಕುಂದ ನಾಡು ರೈತ ಉತ್ಪಾದಕ ಸಂಸ್ಥೆ ಹಾಗೂ ಅಂಪಾರು ರೋಟರಿ ಕ್ಲಬ್ ರವರ ಸಹ ಯೋಗದಲ್ಲಿ ವನಶ್ರೀ ಸಂಜೀವಿನಿ ಒಕ್ಕೂಟದ ನೂರಾರು ಸದಸ್ಯರು ಭತ್ತದ ನಾಟಿ ಕಾರ್ಯ ದಲ್ಲಿ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮವನ್ನು ಭತ್ತದ ನೇಜಿಯ ಕಟ್ಟನ್ನು ಬಿಚ್ಚಿ ವಿತರಿಸುವುದರ ಮೂಲಕ ಸಿಇಒ ರವರು ಉದ್ಘಾಟಿಸಿದರು.

ಸಮಾರಂಭದಲ್ಲಿ ಸ್ಥಳೀಯ ಕೃಷಿಕರನ್ನು ಸನ್ಮಾನಿಸಲಾಯಿತು. ಸಿಇಒ ರವರು ಹಡಿಲು ಭೂಮಿ ಕೃಷಿಯ ಮಹತ್ವದ ಬಗ್ಗೆ ವಿವರಿಸಿ, ಈ‌ ಉತ್ತಮವಾದ ಕಾರ್ಯದಲ್ಲಿ ಪಾಲ್ಗೊಂಡ ವರನ್ನು ಶ್ಲಾಘಿಸಿದರು. ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಸಂತೋಷ್ ಬಲ್ಲಾಡಿರವರು ರೈತ ಉತ್ಪಾದಕ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಹಡಿಲು ಭೂಮಿ ಕೃಷಿಯ ಕಾರ್ಯದ ಬಗ್ಗೆ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪದ್ಧತಿಗಳ ಅನಾವರಣವೂ ಆಯಿತು.
ಆನಂತರ ಮಳೆಯ ನಡುವೆಯೇ ಗದ್ದೆಗೆ ಇಳಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ
ರವರು ಭಾರಿ ಮಳೆಯ‌ನ್ನು ಲೆಕ್ಕಿಸದೇ ಗದ್ದೆಯಲ್ಲಿ ಕೋಣಗಳ ಮೂಲಕ ಉಳುಮೆ ಮಾಡುವುದರ ಮೂಲಕ ಹಾಗೂ ಭತ್ತದ ನೇಜಿಯನ್ನು ನೆಡುವುದರ ಮೂಲಕ ಹಡಿಲು ಭೂಮಿ ಕೃಷಿಯ ಮಾದರಿ ಕಾರ್ಯಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವ ಹಣಾಧಿಕಾರಿ ಶ್ರೀಮತಿ ಭಾರತಿ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ರೂಪ, ಕುಂದನಾಡು ರೈತ ಉತ್ಪಾದಕ ಸಂಸ್ಥೆಯ ಕಾರ್ಯದರ್ಶಿ, ಶ್ರೀ ಉಮೇಶ್ ಶಾನ್ಕಟ್, ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಶೆಟ್ಟಿ , ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜಯಲಕ್ಷ್ಮಿ ಶೆಟ್ಟಿ , ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ರೋಷನಿ ಶೆಟ್ಟಿ, ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳು, ಗ್ರಾಮ ಪಂಚಾಯತ್ ನ ಸದಸ್ಯರು, ಸಂಜೀವಿನಿ ಸದಸ್ಯರು, ರೈತ ಉತ್ಪಾದಕ ಸಂಸ್ಥೆಯ ಸದಸ್ಯರು ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದು, ನೇಜಿಯನ್ನು ನೆಟ್ಟರು. ಕಾರ್ಯಕ್ರಮವನ್ನು ಗ್ರಾಮೀಣ ಸೊಗಡಿನ ಸಾಂಪ್ರದಾಯಿಕ ಶೈಲಿಯಲ್ಲಿ ವಿಶಿಷ್ಟವಾಗಿ ಆಯೋಜಿಸಲಾಗಿತ್ತು.

ಹಡಿಲು ಭೂಮಿ‌ ಕೃಷಿ – ಎಲ್ಲೆಲ್ಲಿ ಎಷ್ಟು
ತಾಲೂಕು
ಬೈಂದೂರು – 70.5 ಎಕರೆ
ಕುಂದಾಪುರ – 186.23 ಎಕ್ರೆ
ಬ್ರಹ್ಮಾವರ – 202.9 ಎಕ್ರೆ
ಉಡುಪಿ – 125 ಎಕ್ರೆ
ಕಾಪು – 139.34 ಎಕ್ರೆ
ಕಾರ್ಕಳ – 225.67 ಎಕ್ರೆ
ಹೆಬ್ರಿ – 84.53 ಎಕ್ರೆ
ಉಡುಪಿ ಜಿಲ್ಲೆ ಒಟ್ಟು -‌1034 ಎಕ್ರೆ

 
 
 
 
 
 
 
 
 
 
 

Leave a Reply