ಡಾ. ಭ್ರಮರಿ ಶಿವಪ್ರಕಾಶ್ ರವರಿಗೆ ಅಭಿನಂದನೆ

ಮಂಗಳೂರಿನ ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ನ ನಿರ್ದೇಶಕಿ,  ನೃತ್ಯಕಲಾವಿದೆ ಹಾಗೂ ಸಂಯೋಜಕಿ ಆಗಿರುವ ಡಾ ಭ್ರಮರಿ ಶಿವಪ್ರಕಾಶ್ ಇವರನ್ನು ಅಂತಾರಾಷ್ಟ್ರೀಯ ಮಹಿಳಾದಿನದ ಅಂಗವಾಗಿ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಇದರ ಆಶ್ರಯದಲ್ಲಿ ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಹಲವಾರು ವರ್ಷಗಳಿಂದ ನೃತ್ಯ ನಿರ್ದೇಶನ, ಪ್ರಾಧ್ಯಾಪನ ಹಾಗೂ ನೃತ್ಯಕಲೆಯಲ್ಲಿ ತೊಡಗಿರುವ ಡಾ ಭ್ರಮರಿ ಶಿವಪ್ರಕಾಶ್ ಇವರು ಇತ್ತೀಚಿಗಷ್ಟೇ ‘ಸಮೂಹ’ ತಂಡದ ರಂಗ ಪ್ರಯೋಗಗಳ ಕುರಿತು ಪಿಎಚ್ ಡಿ ಪದವಿಯನ್ನು ಪಡೆದಿದ್ಧಾರೆ. ‘ರಾಧೆ ಎಂಬ ಗಾಥೆ’, ‘ಊರ್ವಶಿ’, ‘ಪಾಂಚಾಲಿ’, ‘ಸೀತೆಯ ಸ್ವಗತ’ ಇವು ಅವರ ಪ್ರಮುಖ ಏಕವ್ಯಕ್ತಿ ಪ್ರಯೋಗಗಳಾದರೆ, ‘ನೆನಪಾದಳು ಶಕುಂತಲೆ’, ‘ಅಹಲ್ಯೆ’, ‘ಶಬರಿಗಾಯಿತು ಶ್ರೀ ರಾಮ ದರ್ಶನ’  ಇವು ಅವರ ಮುಖ್ಯ ನೃತ್ಯ ನಿರ್ದೇಶನಗಳು.

 

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಇವರು ಡಾ ಭ್ರಮರಿ ಶಿವಪ್ರಕಾಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ನಂತರ ಡಾ ಭ್ರಮರಿ ಇವರ ನರ್ತನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕು.ಗೌತಮಿ ಮತ್ತು ಪ್ರೊ. ಕೌಸ್ತುಭಾ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು. ಇದೆ ಸಂದರ್ಭದಲ್ಲಿ ವಿಭಾಗದ ಎಲ್ಲಾ ಮಹಿಳಾ ಉದ್ಯೋಗಿಗಳನ್ನೂ ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply