ಯಕ್ಷಗಾನ ಕಲಾರಂಗದ ನೂತನ ಕಟ್ಟಡದಲ್ಲಿ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾಪೋಷಕ್ ವಿದ್ಯರ್ಥಿಗಳಿಗೆ ಐದು ದಿನಗಳ ಸನಿವಾಸ ಶಿಬಿರ ನಡೆಯುತ್ತಿದ್ದು, ದಿನಾಂಕ ೦೯.೦೫.೨೦೨೪ರಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮತ್ತು ಸಹಾಯಕ ಆಯುಕ್ತರಾದ ರಶ್ಮಿ ಎಸ್. ಆರ್. ಭೇಟಿ ನೀಡಿ ನೂತನ ಕಟ್ಟಡ ವೀಕ್ಷಿಸಿ ಸಂತೋಷ ವ್ಯಕ್ತಪಡಿಸಿದರು.
ಅನಂತರ ಐವೈಸಿ ಸಭಾಂಗಣದಲ್ಲಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು ತಾನು ಕನ್ನಡ ಮಾಧ್ಯಮದಲ್ಲಿ ಓದಿದವಳು. ಮಾಧ್ಯಮ ಯಾವುದೇ ಇರಲಿ, ಸಾಧಿಸುವ ಛಲ ಇದ್ದರೆ ಕಠಿಣ ಪರಿಶ್ರಮದಿಂದ ಅದನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲಿ ವಿದ್ಯಾರ್ಥಿನಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ನಾರೀಶಕ್ತಿಯ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.
ಸಹಾಯಕ ಆಯುಕ್ತರಾದ ರಶ್ಮಿ ಎಸ್. ಆರ್. ಅವರು ಉಡುಪಿಯ ಯಕ್ಷಗಾನ ಕಲಾರಂಗ ಸಮಾಜ ಮತ್ತು ಸಂಸ್ಕೃತಿಗಾಗಿ ದೊಡ್ಡ ಅಭಿಯಾನವನ್ನೇ ಆರಂಭಿಸಿದೆ ಎಂದರು.
ಉಭಯರನ್ನೂ ಸಂಸ್ಥೆಯ ಉಪಾಧ್ಯಕ್ಷ ಎಸ್. ವಿ. ಭಟ್, ಜತೆಕಾರ್ಯದರ್ಶಿ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ್ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು. ಸಂಸ್ಥೆಯ ಕಾರ್ಯಕರ್ತರಾದ ಭುವನ ಪ್ರಸಾದ್ ಹೆಗ್ಡೆ, ಎಚ್. ಎನ್. ಶೃಂಗೇಶ್ವರ, ಎಸ್. ಗಣರಾಜ್ ಭಟ್, ಪೃಥ್ವಿರಾಜ್ ಕವತ್ತಾರ್, ದಿನೇಶ ಪೂಜಾರಿ, ಅನಂತರಾಜ ಉಪಾಧ್ಯ, ಕೃಷ್ಣಮೂರ್ತಿ
ಭಟ್, ನಟರಾಜ ಉಪಾಧ್ಯಾಯ, ಮಂಜುನಾಥ, ವಿಶ್ವನಾಥ ಹಾಗೂ ಶಿಬಿರದ ನಿರ್ದೇಶಕ ಪ್ರವೀಣ್ ಗುಡಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಸಂಸ್ಥೆಯ ಕಾರ್ಯಚಟುವಟಿಕೆಯನ್ನು ಪರಿಚಯಿಸಿ, ಕಾರ್ಯಕ್ರಮವ ನಿರೂಪಿಸಿದರು.