‘ಆತ್ಮಹತ್ಯೆ: ಮಾನಸಿಕ ಅಂಶಗಳು’ ವಿಷಯದ ಕುರಿತು ಕಾರ್ಯಾಗಾರ

ಉಡುಪಿ, ಸೆ.9: ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರ ಈವರೆಗೆ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರದಿರುವುದು ಖೇದಕರ. ಆತ್ಮಹತ್ಯೆಗೆ ಕಾರಣವಾಗಿರುವ ಮಾನಸಿಕ ಕಾಯಿಲೆ ಹಾಗೂ ಮದ್ಯ ವ್ಯಸನಕ್ಕೆ ಸಂಬಂಧಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಸರಿಯಾದ ಚಿಕಿತ್ಸೆ ಸಿಗುವಂತಾಗ ಬೇಕು. ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಬೇಕು. ಆಗ ಮಾತ್ರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಮತ್ತು ಉಡುಪಿ ಹಾಗೂ ಮಂಗಳೂರು ಮನೋವೈದ್ಯರ ಸೊಸೈಟಿ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆತ್ಮಹತ್ಯೆೆ ತಿಳುವಳಿಕೆ ಕುರಿತು ಜಿಲ್ಲೆಯ ಪತ್ರಕರ್ತರಿಗೆ ಶುಕ್ರವಾರ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ‘ಆತ್ಮಹತ್ಯೆ: ಮಾನಸಿಕ ಅಂಶಗಳು’ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಭಾರತದಲ್ಲಿ ಪ್ರತಿ ವರ್ಷ 28ಲಕ್ಷ ಮಂದಿ ಆತ್ಮಹತ್ಯೆಗೆ ಯತ್ನ ಮಾಡುತ್ತಾರೆ. ಇಂದು ಸರಕಾರಿ ಶಾಲೆಗಳು ಕೂಡ ಶೇ.100 ಫಲಿತಾಂಶದ ಹಿಂದೆ ಹೋಗುತ್ತಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸ್ಪರ್ಧೆ, ಹೋಲಿಕೆ, ಹೆಚ್ಚಿನ ನಿರೀಕ್ಷೆ, ಪರೀಕ್ಷೆ ಅನುರ್ತ್ತೀ ಸೇರಿದಂತೆ ವಯೋ ಸಹಜ ಸಮಸ್ಯೆಗಳಿಂದಾಗಿ ಪ್ರತಿದಿನ 28 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರ್ಬಲ ವ್ಯಕ್ತಿತ್ವದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬುದು ಶುದ್ಧ ಸುಳ್ಳು ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಪಿ.ಕೆ.ಕಿರಣ್ ಕುಮಾರ್ ಮಾತನಾಡಿ, ಇಂದು ಬಹುತೇಕ ಆತ್ಮಹತ್ಯೆಗಳಿಗೆ ಕಾರಣ ಖಿನ್ನತೆ. ಈ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ವರ್ತನೆ, ಮಾತುಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವರನ್ನು ಗುರುತಿಸಬಹುದಾಗಿದೆ. ಅದನ್ನು ಅರ್ಥ ಮಾಡಿಕೊಂಡರೆ ಆತ್ಮಹತ್ಯೆ ಯನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಮನೋರೋಗ ತಜ್ಞ ಡಾ.ವಾಸುದೇವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ.ರವೀಂದ್ರ ಮುನೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆೆಯ ಮನಶಾಸ್ತ್ರಜ್ಞ ನಾಗರಾಜ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ನಿರೂಪಿಸಿದರು.
ಬಳಿಕ ನಡೆದ ಕಾರ್ಯಾಗಾರದಲ್ಲಿ ‘ಆತ್ಮಹತ್ಯೆ: ಆರ್ಥಿಕ -ಸಾಮಾಜಿಕ ಅಂಶ ಗಳು’ ಕುರಿತು ಹಿರಿಯ ಪತ್ರಕರ್ತ ರಾಜರಾಮ್ ತಲ್ಲೂರು ಮತ್ತು ‘ಆತ್ಮಹತ್ಯೆ ಮತ್ತು ಮಾಧ್ಯಮ ವರದಿ’ ಕುರಿತು ಮನೋವೈದ್ಯ ಡಾ.ದೀಪಕ್ ಮಲ್ಯ ಮಾತ ನಾಡಿದರು. ಬಳಿಕ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು

 
 
 
 
 
 
 
 
 
 
 

Leave a Reply