ಕ್ಷಯರೋಗ ಮುಕ್ತ ಭಾರತಕ್ಕೆ ಎಲ್ಲರ ಸಹಕಾರ ಅಗತ್ಯ : ಸುಮಿತ್ರಾ ನಾಯಕ್

ಉಡುಪಿ, ಮಾರ್ಚ್ 24 (ಕವಾ): ಕ್ಷಯರೋಗಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ ,ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ಮೂಲಕ , ಭಾರತವನ್ನು
ಕ್ಷಯರೋಗ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು.

ಅವರು ಇಂದು ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ,ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಸಹಯೋಗದಲ್ಲಿ ನಡೆದ ವಿಶ್ವ
ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದೆ ಕ್ಷಯರೋಗ ಎಂದರೆ ಅಂಟು ರೋಗ ಎಂಬ ಭಾವನೆ ಹಾಗೂ ಕ್ಷಯರೋಗಿಗಳನ್ನು ಕುಟುಂಬದಿoದ ಪ್ರತ್ಯೇಕವಾಗಿ ಇಡಲಾಗುತ್ತಿತ್ತು
ಆದರೆ ಪ್ರಸ್ತುತ ಕ್ಷಯರೋಗವನ್ನು ನಿರಂತರ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದ್ದು, ಸರ್ಕಾರಿ ಆಸ್ಪತೆಗಳಲ್ಲಿ ಉಚಿತ
ಚಿಕಿತ್ಸೆ ಕೂಡಾ ಲಭ್ಯವಿದೆ. ಅನೇಕ ಮಂದಿ ಕ್ಷಯರೋಗಿಗಳು ಸಂಪೂರ್ಣ ಗುಣಮುಖವಾಗಿ ಸ್ವಸ್ಥ ಜೀವನ ನಡೆಸುತ್ತಿದ್ದಾರೆ , ರೋಗಿಗಳಿಗೆ
ಪೌಷ್ಠಿಕ ಆಹಾರ ಸೇವನೆಯ ಜೊತೆಗೆ ಕುಟುಂಬದವರ ಸಾಂತ್ವನ ಮತ್ತು ಸಹಕಾರ ಕೂಡಾ ಅಗತ್ಯವಿದೆ ಎಂದರು.

ವಿಶ್ವದಲ್ಲಿ ಪ್ರತಿ 3 ಗಂಟೆಗೆ ಒಬ್ಬ ಕ್ಷಯರೋಗಿಯ ಸಾವು ಆಗುತ್ತಿದ್ದು, ಇದರಲ್ಲಿ ಭಾರತದ ಕೊಡುಗೆ ಶೇ.26 ರಷ್ಟಿದೆ ಎಂದ ಅವರು 2025
ರೊಳಗೆ ವಿಶ್ವವನ್ನು ಕ್ಷಯರೋಗದಿಂದ ಮುಕ್ತಗೊಳಿಸಲು ಪ್ರತಿಯೊಬ್ಬರೂ ಸಹಕಾರ ನೀಡಬೇಕು , ಈ ರೋಗದ ಕುರಿತಂತೆ ಸಾರ್ವಜನಿಕರಿಗೆ
ಹೆಚ್ಚಿನ ಜಾಗೃತಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಜಿಲ್ಲಾ ಮಲೇರಿಯ ಅಧಿಕಾರಿ ಡಾ.ಪ್ರಶಾಂತ್ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಗರಸಭೆಯ ಉಪಾಧ್ಯಕ್ಷೆ ಲಕ್ಷ್ಮೀ  ಮಂಜುನಾಥ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ
ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಆಹಾರ ಸುರಕ್ಷಾ ಅಂಕಿತ ಅಧಿಕಾರಿ ಡಾ.ಪ್ರೇಮಾನಂದ್ , ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ
ಸುಬ್ರಹ್ಮಣ್ಯ ಶೇರಿಗಾರ್ ಮತ್ತಿತರರು ಹಾಜರಿದ್ದರು.
ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ವೈದ್ಯರು, ಸಿಬ್ಬಂದಿಗಳು ಮತ್ತು ಆಶಾ
ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಕ್ಷಯರೋಗದ ಕುರಿತು ಜನಜಾಗೃತಿ ಮೂಡಿಸಲು ಮರಳು ಶಿಲ್ಪ ರಚನೆ, ಗಾಳಿಪಟ ಪ್ರದರ್ಶನ, ಯಕ್ಷಗಾನ ಮತ್ತು ಬೀದಿ ನಾಟಕ
ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದಿತು.
ಸುರೇಶ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿ,ವಂದಿಸಿದರು.

 
 
 
 
 
 
 
 
 
 
 

Leave a Reply