ಬಿಎಂಟಿಸಿ ಬಸ್ ಹರಿದು ನಾಲ್ಕೂವರೆ ವರ್ಷದ ಬಾಲಕಿ ಸಾವು

ಶಾಲೆಗೆ ತೆರಳುತ್ತಿದ್ದ ವೇಳೆ ಬಿಎಂಟಿಸಿ ಬಸ್ ಹರಿದು ನಾಲ್ಕೂವರೆ ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯರಸ್ತೆಯ ಬಳಿ ನಡೆದಿದೆ.

ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ಘಟನೆ ನಡೆದಿದ್ದು, ನಾಲ್ಕೂವರೆ ವರ್ಷದ ಪೂರ್ವಿ ರಾವ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ತಂದೆ ಪ್ರಸನ್ನ ಮಗಳು ಪೂರ್ವಿಯನ್ನು ಶಾಲೆಗೆ ಬಿಡಲು ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ತಂದೆ ಪ್ರಸನ್ನ ಬೈಕ್‌ನ ಎಡಬದಿಗೆ ಬಿದ್ದಿದ್ದಾರೆ. ಪೂರ್ವಿ ಬಲಬದಿಗೆ ಬಿದ್ದಿದ್ದು, ಈ ವೇಳೆ ಆಕೆಯ ಮೇಲೆ ಬಿಎಂಟಿಸಿ ಬಸ್ ಹರಿದು ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. 

ಪೂರ್ವಿ ಖಾಸಗಿ ಶಾಲೆಯೊಂದರಲ್ಲಿ ಪ್ರೀ ಕೆಜಿ ಓದುತ್ತಿದ್ದು, ತಂದೆ ಪ್ರಸನ್ನ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗ ಹೊಂದಿದ್ದಾರೆ. ಪ್ರಸನ್ನ ಪ್ರತಿನಿತ್ಯ ಮಗಳನ್ನು ಶಾಲೆಗೆ ಬಿಟ್ಟು ಬಳಿಕ ಕೆಲಸಕ್ಕೆ ತೆರಳುತ್ತಿದ್ದರು. ಇಂದು ಸಹಾ ಮಗಳನ್ನು ಶಾಲೆಗೆ ಬಿಡಲು ತೆರಳುತ್ತಿದ್ದ ವೇಳೆ ಅಪಘಾತವಾಗಿ ದುರ್ಘಟನೆ ಸಂಭವಿಸಿದೆ.

ಘಟನೆ ಕುರಿತು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 

 
 
 
 
 
 
 
 
 
 
 

Leave a Reply