ಧರ್ಮಸ್ಥಳ: ಪುತ್ತಿಗೆಶ್ರೀ ಮಂಜುನಾಥನ ದರ್ಶನ

ಧರ್ಮಸ್ಥಳ :  18 ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಸುಗುಣೇಂದ್ರತೀರ್ಥ ಸ್ವಾಮೀಜಿ ಮತ್ತು ಅವರ ಶಿಷ್ಯ ಕಿರಿಯ ಸ್ವಾಮೀಜಿ ಪೂಜ್ಯ ಸುಶ್ರೀಂದ್ರತೀರ್ಥ ಸ್ವಾಮೀಜಿ ಗುರುವಾರ ಸಂಜೆ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಸ್ವಾಮೀಜಿದ್ವಯರು ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿ ಬಳಿಕ  ಆಶೀರ್ವಚನ ನೀಡಿದರು.

ಕ್ಷೇತ್ರದ ಸಂಪ್ರದಾಯದಂತೆ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಲಾಯಿತು. ಧರ್ಮಾ ಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರಿಗೆ ಭಕ್ತಿಪೂರ್ವಕ ಸ್ವಾಗತ ಕೋರಿ ಪೂಜ್ಯರ ಪರ್ಯಾಯ ಪೀಠಾರೋಹಣ ಹಾಗೂ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ನಡೆಯುವಂತೆ ಶ್ರೀ ಮಂಜುನಾಥ ಸ್ವಾಮಿಯನ್ನು ಪ್ರಾರ್ಥಿಸಿ ಅವರ ಅನುಗ್ರಹವನ್ನು ಕೋರಿದರು.

ತಮಗೂ ಪೂಜ್ಯ ಸ್ವಾಮೀಜಿಯವರಿಗೂ ಕಳೆದ 40 ವರ್ಷಗಳಿಂದ ಇರುವ ಅವಿನಾಭಾವ ಸಂಬಂಧವನ್ನು ಸ್ಮರಿಸಿ ಪರ್ಯಾಯ ಸಮಿತಿಯ ಗೌರವಾಧ್ಯಕ್ಷರಾಗಿ ಸೇವೆ ಮಾಡಲು ತಮಗೆ ಅವಕಾಶ ದೊರಕಿರುವುದು ವಿಶೇಷ ಸಂತೋಷ ಮತ್ತು ಧನ್ಯತಾಭಾವವನ್ನು ಮೂಡಿಸಿದೆ ಎಂದರು. ಧರ್ಮಸ್ಥಳದ ವತಿಯಿಂದ ಸ್ವಾಮೀಜಿಯವರನ್ನು ಹೆಗ್ಗಡೆಯವರು ಗೌರವಿಸಿದರು.

ಆಶೀರ್ವಚನ ನೀಡಿದ ಪೂಜ್ಯ ಸುಗುಣೇಂದ್ರತೀರ್ಥ ಸ್ವಾಮೀಜಿಯವರು ಮಾತನಾಡಿ ಹೆಗ್ಗಡೆಯವರ ದಕ್ಷ ನೇತೃತ್ವದಲ್ಲಿ ಧರ್ಮಸ್ಥಳದ ಭವ್ಯ ಪರಂಪರೆ ಮತ್ತು ಸಂಪ್ರದಾಯವನ್ನು ಉಳಿಸಿಕೊಂಡು ಇಲ್ಲಿನ ಆಚಾರ-ವಿಚಾರಗಳು, ನಂಬಿಕೆ-ನಡವಳಿಕೆಗಳು, ಶಿಸ್ತು, ಸ್ವಚ್ಛತೆ ಮತ್ತು ದಕ್ಷತೆ ಹಾಗೂ ಅನುಪಮ ಸೇವಾಕಾರ್ಯಗಳಿಂದಾಗಿ ಇಂದು ಧರ್ಮಸ್ಥಳ ಎಲ್ಲಾ ತೀರ್ಥಕ್ಷೇತ್ರಗಳಿಗೂ ಮಾದರಿ ಕ್ಷೇತ್ರವಾಗಿ ಬೆಳೆದಿದೆ. ವಿಶ್ವದೆಲ್ಲೆಡೆ ಬೆಳಗುತ್ತಿದೆ ಎಂದು ಸ್ವಾಮೀಜಿ ಶ್ಲಾಘಿಸಿ ಹೆಗ್ಗಡೆಯವರನ್ನು ಅಭಿನಂದಿ ಸಿದರು.

 
 
 
 
 
 
 
 
 
 
 

Leave a Reply