ಮೆಟ್ರೋ ರೈಲು ಹಳಿಗೆ ಧುಮುಕಿ ಯುವಕ ಆತ್ಮಹತ್ಯೆಗೆ ಯತ್ನ!

ಮೆಟ್ರೋ ರೈಲು ಮುಂದೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಮೆಟ್ರೋ ರೈಲು ಹಳಿಗೆ ಧುಮುಕಿದ ಯುವಕನ ಗುರುತು ಪತ್ತೆಯಾಗಿದೆ. ಕೇರಳ ಮೂಲದ 23 ವರ್ಷದ ಶಾರೋನ್‌ ರಾತ್ರಿ 7.12ರ ವೇಳೆಗೆ ರೈಲು ಬಂದಾಗ ಉದ್ದೇಶಪೂರ್ವಕವಾಗಿಯೇ ರೈಲು ಹಳಿಗೆ ಹಾರಿದ್ದಾನೆ ಎನ್ನಲಾಗಿದೆ.

ಜಾಲಹಳ್ಳಿ ನಿಲ್ದಾಣದಲ್ಲಿ ಘಟನೆ ನಡೆದ ಕಾರಣ ಈ ಸಮಯದಲ್ಲಿ ಇತರ ನಿಲ್ದಾಣದ ಪ್ಲಾಟ್‌ ಫಾರ್ಮ್‌ ಗಳಲ್ಲಿ ಸ್ಥಗಿತಗೊಂಡ 4 ರೈಲುಗಳಿಂದ ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಹೊರತರಲಾಯಿತು.

ಕೇರಳ ಮೂಲದ ಯುವಕ ಶಾರೋನ್‌ ಸ್ನೇಹಿತನ ಜೊತೆ ಜಾಲಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ. ಮೆಜೆಸ್ಟಿಕ್ ಗೆ ಹೋಗಲು ಟಿಕೆಟ್ ಸಹ ಪಡೆದುಕೊಂಡಿದ್ದ. ಆದರೆ ಮೆಟ್ರೋ ಟ್ರೈನ್ ಬಂದಾಗ ಏಕಾಏಕಿ ಹಳಿಗೆ ಧುಮುಕಿದ್ದಾನೆ, ಈ ವೇಳೆ ಮೆಟ್ರೊ ಟ್ರೈನ್ ಶಾರೋನ್‌ಗೆ ಡಿಕ್ಕಿ ಹೊಡೆದಿದೆ. ಸ್ನೇಹಿತನ ಜೊತೆ ಬಂದು ಉದ್ದೇಶಪೂರ್ವಕವಾಗಿ ಹಳಿಗೆ ಧುಮುಕಿದ ಯುವಕನ ಸ್ಥಿತಿ ಗಂಭೀರವಾಗಿದೆ. ಘಟನೆ ನಡೆದ ತಕ್ಷಣ ಯುವಕನನ್ನು ಮೆಟ್ರೋ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸದ್ಯ ಸಪ್ತಗಿರಿ ಆಸ್ಪತ್ರೆಯ ಐಸಿಯುವಿನಲ್ಲಿ ಯುವಕ ಶಾರೋನ್‍ಗೆ ಚಿಕಿತ್ಸೆ ನೀಡುತ್ತಿದ್ದಾರೆ. ರೈಲು ಡಿಕ್ಕಿಯಾದ ಹಿನ್ನೆಲೆಯಲ್ಲಿ ಯುವಕನ ಕಾಲು ಫ್ರ್ಯಾಕ್ಚರ್ ಆಗಿದ್ದು, ತಲೆಗೆ ಕರೆಂಟ್ ಶಾಕ್ ತಗುಲಿದೆ.

ಘಟನೆಯಿಂದಾಗಿ ಸುಮಾರು 45 ನಿಮಿಷಗಳ ಕಾಲ ಯಶವಂತಪುರ ಮತ್ತು ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಹಸಿರು ಮಾರ್ಗದ ಕಾರ್ಯಾಚರಣೆ ನಡೆಸಲಾಯಿತು. ರಾತ್ರಿ 8.00 ಗಂಟೆಯಿಂದ ಸಂಪೂರ್ಣ ಹಸಿರು ಮಾರ್ಗದಲ್ಲಿ ಕಾರ್ಯಾಚರಣೆ ಪುನರಾರಂಭಿಸಲಾಗಿದೆ ಎಂದು ನಮ್ಮ ಮೆಟ್ರೋ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್‌ ಚೌಹಾಣ್‌ ಹೇಳಿದ್ದಾರೆ. 

ಅಬ್ಬಿಗೆರೆ ಬಳಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡ್ತಿದ್ದ ಯುವಕನಿಗೆ ಕಂಪನಿಯವರೇ ವಾಸ್ತವ್ಯಕ್ಕೆ ರೂಂ ಸಹ ಮಾಡಿಕೊಟ್ಟಿದ್ರು. ಪೀಣ್ಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 
 
 
 
 
 
 
 
 
 
 

Leave a Reply