ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯರಿಗೆ ಕಡೆ ಕ್ಷಣದಲ್ಲಿ ಕಾಂಗ್ರೆಸ್ನ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷದಿಂದ ಮುನಿಸಿಕೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹಾಕಿದ್ದ ನಾಮಪತ್ರವನ್ನು ಇಂದು ಹಿಂದಕ್ಕೆ ಪಡೆದಿದ್ದಾರೆ. ಎರಡು ದಿನ ಉಡುಪಿ ಜಿಲ್ಲೆಯಲ್ಲಿ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವ ಕುಮಾರ್ ಅವರು ನಿನ್ನೆ ಮತ್ತು ಇಂದು ಅವರೊಂದಿಗೆ ಮಾತುಕತೆ ನಡೆಸಿದ್ದರು.
ಇಂದು ನಡೆದ ಕೊನೆ ಕ್ಷಣದ ಮಾತುಕತೆಯಲ್ಲಿ ಕೃಷ್ಣಮೂರ್ತಿ ಅವರ ಕೆಲವೊಂದು ಬೇಡಿಕೆಗಳಿಗೆ ಒಪ್ಪಿದ ಡಿಕೆ ಶಿವಕುಮಾರ್ ನಾಮಪತ್ರ ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.