ದ.ಕ- ಬಿಜೆಪಿ ಯುವಮೋರ್ಚಾ ಮುಖಂಡ ನದಿ ತೀರದಲ್ಲಿ ಶವವಾಗಿ ಪತ್ತೆ!

ಜುಲೈ 10ರ ಸೋಮವಾರ ಸಂಜೆ ವೇಳೆ ಕುಂಬಳೆ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ರಾಜೇಶ್ (26) ನಾಪತ್ತೆಯಾಗಿದ್ದರು. ನಾಪತ್ತೆಯಾಗಿದ್ದ ಬಿಜೆಪಿ ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿಯ ಮೃತದೇಹ ತೊಕ್ಕೊಟ್ಟು ಬಳಿಯ ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಯುವಶಕ್ತಿ ಸೇವಾ ಪಥದ ಮೂಲಕ ಅನೇಕ ಮಂದಿಗೆ ನೆರವಾ. ಬಂಬ್ರಾಣ ಸ್ವಾಗತ್ ಫ್ರೆಂಡ್ಸ್ ನ ಮಾಜಿ ಕಾರ್ಯದರ್ಶಿಯಾಗಿದ್ದಲ್ಲದೆ ಬಿಜೆಪಿ ಯುವಮೋರ್ಚಾ ಕುಂಬಳೆ ಮಂಡಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೃತ ರಾಜೇಶ್ ಸಾರಣೆ ಕೆಲಸ ಮಾಡುತ್ತಿದ್ದರು. ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರಲ್ಲದೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.

ಮೊನ್ನೆ ಸೋಮವಾರ ಸಂಜೆ 5.45 ರ ಹೊತ್ತಿಗೆ ಮನೆಯಿಂದ ಬೈಕಿನಲ್ಲಿ ತೆರಳಿದವರು ಮತ್ತೆ ಮರಳಿ ಹಿಂದಿರುಗಿ ಬಾರದ ಹಿನ್ನೆಲೆಯಲ್ಲಿ ಮನೆಯವರ ಜೊತೆಗೆ ಗೆಳೆಯರು ಮೊಬೈಲ್ ಸಂಪರ್ಕಿಸಿದಾಗ ಸ್ವಿಚ್ ಆಫ್ ಬಂದ ಹಿನ್ನೆಲೆ ಮನೆಯವರಿಗೆ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ತಕ್ಷಣವೇ ಮನೆಯವರು ಕುಂಬಳೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಇದೀಗ, ಇಂದು ಬೆಳಗ್ಗೆ 6 ಗಂಟೆ ವೇಳೆಗೆ ತೊಕ್ಕೊಟ್ಟು ನೇತ್ರಾವತಿ ನದಿ ತೀರವಾದ ಬೆಂಗರೆಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಇಂದು ಬೆಳಗ್ಗೆ ಸ್ಥಳೀಯರು ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹೀಗಾಗಿ, ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತದೇಹದ ಪ್ಯಾಂಟ್ ಕಿಸೆಯಲ್ಲಿ ಲಭಿಸಿದ ಮೊಬೈಲ್ ಫೋನ್ ನ ಸಿಮ್ ನ್ನು ಬೇರೊಂದು ಮೊಬೈಲ್ ಗೆ ಇಟ್ಟಾಗ ರಾಜೇಶ್ ರ ಸಂಬಂಧಿಕರು ಕರೆ ಮಾಡಿದ್ದಾರೆ. ತಕ್ಷಣವೇ ಪೊಲೀಸರು ಸಂಬಂಧಿಕರಿಗೆ ವಿಷಯವನ್ನು ತಿಳಿಸಿದ್ದು ಮನೆ ಮಂದಿ ಆಸ್ಪತ್ರೆಗೆ ತೆರಳಿ, ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ.

 
 
 
 
 
 
 
 
 
 
 

Leave a Reply