ಕೆನರಾ ಬ್ಯಾಂಕಿನಲ್ಲಿ ಪಿಂಚಣಿ ಪಡೆಯುತ್ತಿರುವ ಸರಕಾರಿ ನಿವೃತ್ತ ನೌಕರರಿಗೆ ಕೆನರಾ ಜೀವನ್ ಧಾರಾ ಎಂಬ ಹೆಸರಿನ ನೂತನ ಉಳಿತಾಯ ಖಾತೆಯನ್ನು ಬ್ಯಾಂಕ್ ಜಾರಿಗೊಳಿಸಿದೆ ಎಂದು ಕೆನರಾ ಬ್ಯಾಂಕ್ನ ಪ್ರಾದೇಶಿಕ ಕಛೇರಿಯ ಅಧಿಕಾರಿಗಳಾದ ಗಿರೀಶ್ ಹೆಜಮಾಡಿ ಮತ್ತು ಅಯ್ಯಪ್ಪ ಗೌಡ ಅವರು ಹೇಳಿದರು. ಅವರು ಉಡುಪಿ ಜಿಲ್ಲಾ ಸರಕಾರಿ ನಿವೃತ್ತ ನೌಕರರ ಸಂಘದ ಕಾರ್ಯಕಾರೀ ಮಂಡಳಿಯ ಸಭೆಯಲ್ಲಿ ಮಾತನಾಡುತ್ತಾ ಕೆನರಾ ಜೀವನ್ ಧಾರಾದ ಅಡಿಯಲ್ಲಿ ಪಿಂಚಣಿದಾರರಿಗೆ ಪ್ಲಾಟಿನಂ ಮತ್ತು ಡೈಮಂಡ್ ಉಳಿತಾಯ ಯೋಜನೆಗಳನ್ನು ಪರಿಚಯಿಸಿ ಅವುಗಳಿಂದ ದೊರಕುವ ವಿಶೇಷ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಪಿಂಚಣಿದಾರರಿಗೆ ಸಾಲ ಸೌಕರ್ಯ, ಓವರ್ಡ್ರಾಫ್ಟ್ ಸವಲತ್ತು, ಅಪಘಾತ ವಿಮೆ, ಆರೋಗ್ಯವಿಮೆ, ಔಷಧದ ಬೆಲೆಯಲ್ಲಿ ರಿಯಾಯಿತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾ 80 ವರ್ಷ ದಾಟಿದ ಸೂಪರ್ ಸೀನಿರ್ಸ್ಗೆ ಈ ತಿಂಗಳಿನಿಂದಲೇ ಜೀವನ್ ಪ್ರಮಾಣ್ ಪತ್ರ ನೀಡುತ್ತಿದ್ದು ಉಳಿದವರಿಗೆ ನವೆಂಬರ್ ತಿಂಗಳಿನಲ್ಲಿ ನೀಡಲಾಗುವುದು ಎಂದರು ಬ್ಯಾಂಕಿಗೆ ಖುದ್ದಾಗಿ ಹೋಗಲಾಗದ ಅಶಕ್ತರಿಗೆ ಬ್ಯಾಂಕಿನ ಅಧಿಕಾರಿಗಳೇ ಮನೆಗೆ ಬಂದು ಜೀವನ್ ಪ್ರಮಾಣ್ ಪತ್ರ ನೀಡುವರು ಎಂದು ತಿಳಿಸಿದರು.