ಶ್ರೀ ಶೋಭನಕೃತ್ ನಾಮ ಸಂವತ್ಸರ~ ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ

ಶ್ರೀಶೋಭನಕೃತ್ ನಾಮ ಸಂವತ್ಸರದ ಹಾರ್ದಿಕ ಶುಭಾಶಯಗಳು

ನಾರಾಯಣಾಯ ಪರಿಪೂರ್ಣ ಗುಣಾರ್ಣಾವಾಯ ವಿಶ್ವೋದಯಸ್ಥಿತಿಲಯೋನ್ನಿಯತಿಪ್ರಧಾಯ|
ಜ್ಞಾನ ಪ್ರಧಾಯ ವಿಭುಧಾಸುರಸೌಖ್ಯದುಖಃ ಸತ್ಕಾರಣಾಯ ವಿತತಾಯ ನಮೋ ನಮಸ್ತೆ ||

ಶ್ರೀಶೋಭನಕೃತ್ ನಾಮ ಸಂವತ್ಸರ ಎಲ್ಲರಿಗೂ ಮಂಗಳ ವನ್ನುಂಟು ಮಾಡಲಿ. ನಮ್ಮೆಲ್ಲರ ಜೀವನದಲ್ಲಿ ಶ್ರೀಹರಿ ಶುಭ ತರುವುದರ ಜತೆ, ಆರೋಗ್ಯ, ಸುಖ, ಸಂತೋಷ ಹಾಗೂ ಸಂಪತ್ತನ್ನು ಕರುಣಿಸಲಿ.

ಈ ಸಂವತ್ಸರದಲಿ ಉತ್ತಮ ಮಳೆಯಾಗಿ ಇಳೆ ತಣಿದು ಸಸ್ಯ ಶ್ಯಾಮಲೆಯಾಗಲಿ. ಗೋ ಸಂಪತ್ತು ಹೆಚ್ಚಲಿ, ಚಂದನ ಅಗರು ವೃದ್ಧಿಸಲಿ. ಪಾಂಡಿತ್ಯ ಪ್ರವರ್ಧಮಾನಕ್ಕೆ ಬರಲಿ. ಕಷ್ಟ ನಷ್ಟದಲ್ಲಿರುವ ಜನರ ಅನಿಷ್ಟ ನಿವಾರಣೆಯಾಗಲಿ. ರೋಗ ರುಜಿನ ತೊಲಗಲಿ, ಸರ್ವರೂ ಆರೋಗ್ಯವಂತರಾಗಲಿ. ನಿರ್ದೋಷನಾದ ಶ್ರೀಹರಿ ಸಕಲ ಜನರಲ್ಲಿನ ದೋಷ ನಿರ್ದೋಷಗೊಳಿಸಲಿ.

ಯುಗಾದಿ ಪುರಾಣದ ಪ್ರಕಾರ ಬ್ರಹ್ಮದೇವರು ಮೊದಲನೇ ಯುಗವಾದ ಕೃತ ಯುಗವನ್ನು ಆರಂಭಿಸಿದ ದಿನ. ಹಾಗಾಗಿ ಈ ಯುಗಾದಿ ದಿನದಿಂದಲೇ ಚಾಂದ್ರಮಾನ ಪದ್ಧತಿಯ ಕಾಲಗಣನೆ ಆರಂಭವಾಗುತ್ತದೆ.ಚಂದ್ರ ಭೂಮಿಯ ಸುತ್ತ ಸುತ್ತುವ ವೇಗದ ಗತಿಯನ್ನು ಆಧರಿಸಿ ಚಾಂದ್ರಮಾನ ಪದ್ಧತಿಯನ್ನು ರೂಪಿಸಲಾಗಿದೆ.

ಚಾಂದ್ರಮಾನ ಪದ್ಧತಿಯ ಪ್ರಕಾರ ಒಂದು ವರ್ಷದಲ್ಲಿ ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ , ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಹಾಗೂ ಫಾಲ್ಗುಣ ಎಂಬ 12 ಮಾಸ (ತಿಂಗಳು) ಗಳು. ಪ್ರತಿ ತಿಂಗಳು ತಲಾ 15 ದಿನಗಳಂತೆ ಅಮಾವಾಸ್ಯೆಯಿಂದ ಹುಣ್ಣಿಮೆವರೆಗೆ ಶುಕ್ಲ ಹಾಗೂ ಹುಣ್ಣಿಮೆಯಿಂದ ಅಮಾವಾಸ್ಯೆಯವರೆಗೆ ಕೃಷ್ಣ ಎಂಬ ಎರಡು ಪಕ್ಷಗಳು.ಈ ಪಕ್ಷಗಳಲ್ಲಿ ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿಯ ನಂತರ ಶುಕ್ಲ ಪಕ್ಷದಲ್ಲಿ 15ನೇ ದಿನ ಹುಣ್ಣಿಮೆ ಮತ್ತು ಕೃಷ್ಣಪಕ್ಷದ 15ನೇ ದಿನ ಅಮಾವಾಸ್ಯೆ ಎಂಬ ತಲಾ 15 ತಿಥಿಗಳಿವೆ. ಇದು ಚಾಂದ್ರಮಾನ ಪದ್ಧತಿ.

ಚಾಂದ್ರಮಾನ ಪದ್ಧತಿಯ ವರ್ಷ (ಸಂವತ್ಸರ)ದ ಮೊದಲ ದಿನ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದ ದಿನ. ಹಾಗಾಗಿ ಈ ಪದ್ಧತಿಯನ್ನು ಅನುಸರಿಸುವವರಿಗೆ ಈ ದಿನ ಯುಗಾದಿಯಾಗಿರುತ್ತದೆ. ಹಾಗಾಗಿ ಚಾಂದ್ರಮಾನ ಯುಗಾದಿ ಎಂದು ಕರೆಯ ಲಾಗುತ್ತದೆ.ಇದೇ ರೀತಿ ಸೂರ್ಯನ ಗತಿಯನ್ನು ಆಧರಿಸಿ ಸೌರಮಾನ ಪದ್ಧತಿಯನ್ನು ರೂಪಿಸಲಾಗಿದೆ. ಸೂರ್ಯ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನಸ್ಸು, ಮಕರ, ಕುಂಭ ಮತ್ತು ಮೀನ ಹೀಗೆ ಹನ್ನೆರಡು ರಾಶಿಗಳಲ್ಲಿ ಒಂದೊಂದು ತಿಂಗಳು ಇರುವುದರಿಂದ ಈ ಪದ್ಧತಿ ಅನುಸರಣೆಯನ್ನು ಸೌರಮಾನ ಎನ್ನಲಾಗುತ್ತದೆ. ಹಾಗಾಗಿ ಸೂರ್ಯ ಮೇಷ ರಾಶಿಗೆ ಪ್ರವೇಶಿಸುವ ಸಂಕ್ರಮಣ ದಿನದ ಮರು ದಿನವನ್ನು ಸೌರಮಾನ ಯುಗಾದಿ ಎನ್ನಲಾಗುತ್ತದೆ.

ಭಾರತದಲ್ಲಿ ಈ ಎರಡೂ ಪದ್ಧತಿಯನ್ನು ಅನುಸರಿಸಲಾಗುತ್ತದೆ. ತಮಿಳುನಾಡು, ಕೇರಳ ಹಾಗೂ ಕರ್ನಾಟಕದ ಕರಾವಳಿ ಭಾಗದಲ್ಲಿ ಸೌರಮಾನ ಪದ್ಧತಿ ಆಚರಿಸಲಾಗುತ್ತದೆ. ಉಳಿದಂತೆ ರಾಜ್ಯದ ಘಟ್ಟದ ಮೇಲಿನವರು, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಚಾಂದ್ರಮಾನ ಪದ್ಧತಿ ಆಚರಿಸಲಾಗುತ್ತದೆ.

ದಿನಾಂಕ: 22-03-2023 ರಂದು ಬುಧವಾರ ನಮಗೆಲ್ಲಾ ಚಾಂದ್ರಮಾನ ಯುಗಾದಿ.

ಹಬ್ಬದ ದಿನ ಮುಂಜಾನೆ ಎದ್ದು ಹೊಸ ವರ್ಷ, ಹರುಷ ತರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿ. ನಂತರ ಶುದ್ಧವಾದ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ, ಅದಕ್ಕೆ ನಿಮ್ಮಲ್ಲಿ ಶ್ರೀಗಂಧದೆಣ್ಣೆ ಮತ್ತಿತರ ಸುಗಂಧದ ಎಣ್ಣೆಯಿದ್ದರೆ ಮಿಶ್ರಣ ಮಾಡಿ. ಇಲ್ಲವಾದಲ್ಲಿ ಮಾವಿನ ಚಿಗುರು, ಬೇವಿನ ಚಿಗುರು ಹಾಕಿ ಮತ್ತೆ ಸ್ವಲ್ಪ ಬಿಸಿ ಮಾಡಿ, ದೇಹಕ್ಕೆ ಈ ಎಣ್ಣೆಯನ್ನು ಹಚ್ಚಿ ಮರ್ಧನ (ಮಸಾಜ್) ಮಾಡಿಸಿಕೊಳ್ಳಿ. ಅತಿ ಹೆಚ್ಚು ಬಿಸಿಯಿಲ್ಲದ ನೀರನ್ನು ಎರೆದುಕೊಂಡು ಕಡಲೆ ಹಿಟ್ಟು ಅಥವಾ ಸೀಗೆಪುಡಿ ಯೊಟ್ಟಿಗೆ ಸ್ನಾನ ಮಾಡಿ. ಅಭ್ಯಂಗ ಸ್ನಾನವನ್ನು ಸ್ತ್ರೀ, ಪುರುಷ, ಬಾಲ, ವೃದ್ಧ ಎಂಬ ಭೇದವಿಲ್ಲದೆ ಎಲ್ಲರೂ ಮಾಡಬೇಕು. ಈ ಅಭ್ಯಂಗ ಸ್ನಾನ ದೇಹಕ್ಕೆ ಹಿತ ನೀಡುವುದರ ಜತೆ ಬಿಗಿದ ಸ್ನಾಯುಗಳನ್ನು ಸಡಿಲಗೊಳಿಸಿ ಬಲಗೊಳಿಸುತ್ತದೆ.

ಹೊಸವರ್ಷದ ಅಂಗವಾಗಿ ಮನೆ ಮುಂದೆ ರಂಗೋಲಿ ಬಿಡಿಸಿ, ಬಾಗಿಲುಗಳಿಗೆ ಮಾವಿನ ತಳಿರಿನ ತೋರಣ ಕಟ್ಟಿ, ಬೇವಿನ ಸೊಪ್ಪು ಸಿಕ್ಕಿಸಬೇಕು. ನಂತರ ಹೊಸ ಬಟ್ಟೆ ಧರಿಸಿ, ದೇವರಿಗೆ ಯಥಾಶಕ್ತಿ ಭಕ್ತಿಯಿಂದ ಪೂಜೆ ಸಲ್ಲಿಸಿ, ತಂದೆ ತಾಯಿ ಹಾಗೂ ಹಿರಿಯರಿಗೆ ನಮಿಸಿ. ಇದಾದ ಬಳಿಕ ಮನೆ ಮಂದಿಯೊಂದಿಗೆ ದೇವರಿಗೆ ಸಮರ್ಪಿಸಿದ ಬೇವು ಬೆಲ್ಲವನ್ನು ಸ್ವೀಕರಿಸಿ. ಸಾಧ್ಯವಾದರೆ ಗ್ರಾಮ ದೇವತೆಗಳು ಹಾಗೂ ಇಷ್ಟ ದೇವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ. ಇಷ್ಟ, ಮಿತ್ರರೊಂದಿಗೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಿ. ನಂತರ ಮನೆಯಲ್ಲಿ ಸಂಭ್ರಮದಿಂದ ಹಬ್ಬದೂಟ ಸವಿಯಿರಿ.

ದೇವರು ಬಡತನ ಕೊಡಬಹುದು, ಆದರೆ ಕೊಳೆತನ ಕೊಡುವುದಿಲ್ಲ ಎಂಬುದು ಮನದಲ್ಲಿರಲಿ. ಅದ್ಧೂರಿ, ಆಡಂಬರ ಇಲ್ಲದಿದ್ದರೂ ಶುದ್ಧತೆ ಹಾಗೂ ಶುದ್ಧ ಮನಸ್ಸಿನಿಂದ ಹಬ್ಬ ಆಚರಣೆ ಮಾಡಿ. ಈ ದಿನದ ವಿಶೇಷ ಯುಗಾದಿ ಹಬ್ಬದ ದಿನ ಮಹಾ ಪರ್ವದಿನ. ಬ್ರಹ್ಮಾಂಡ ಸೃಷ್ಠಿಯಾದ ದಿನ.

ಶ್ರೀಬ್ರಹ್ಮದೇವರು ಬ್ರಹ್ಮಾಂಡ ಸೃಷ್ಠಿ ಮಾಡಿದಾಗ ಸ್ವಯಂಭುವ ಮನ್ವಂತರ, ಕೃತಯುಗ, ಪ್ರಭವ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯಮಿ ತಿಥಿ, ಭಾನುವಾರ, ಅಶ್ವಿನಿನಕ್ಷತ್ರ, ವಿಷ್ಕಾಂಭ ಯೋಗ ಹಾಗೂ ಭವಕರಣ ಆರಂಭವಾದ ದಿನ.

ಮತ್ಸಾವತಾರದ ದಿನ: ರಾಕ್ಷಸನೊಬ್ಬ ವೇದಗಳನ್ನು ಕದ್ದು ಸಮುದ್ರದಲ್ಲಿ ಅಡಗಿಸಿದ್ದ, ಅವನನ್ನು ಸಂಹರಿಸಲು ಮಹಾವಿಷ್ಣು ಮತ್ಸ್ಯರೂಪ ತಾಳಿದದಿನ. ಶ್ರೀರಾಮಚಂದ್ರನ ಪಟ್ಟಾಭಿಷೇಕ: ಹದಿನಾಲ್ಕು ವರ್ಷ ವನವಾಸ ಮಾಡಿ ಅಯೋಧ್ಯೆಗೆ ವಾಪಾಸ್ಸಾದ ಶ್ರೀರಾಮಚಂದ್ರ ಮಹಾರಾಜನಿಗೆ ಪಟ್ಟಾಭಿಷೇಕವಾದ ದಿನ. ಶಾಲಿವಾಹನ ಮಹಾರಾಜನಾದ ದಿನ: ದಕ್ಷಿಣ ಭಾರತದ ಪ್ರಸಿದ್ಧ ದೊರೆ ಶಾಲಿವಾಹನ ಮಹಾರಾಜ ಪಟ್ಟಾಭಿಷಿಕ್ತನಾದ ದಿನವಿದು.

ಇಷ್ಟೆಲ್ಲಾ ಹಿನ್ನೆಲೆಯುಳ್ಳ ಈ ದಿನ ಋತುಗಳಲ್ಲಿ ಅತ್ಯಂತ ಶ್ರೇಷ್ಠವಾದ ವಸಂತ ಋತು ಆಗಮನದ ದಿನ. ಪ್ರಕೃತಿಯಲ್ಲಿ ಮರಗಿಡ ಚಿಗುರಿ ನಳನಳಿಸುವ ಕಾಲವಿದು. ಇಂತಹ ಸಂಭ್ರಮದ ಹಬ್ಬವನ್ನು ಸಡಗರದಿಂದ ಆಚರಿಸೋಣ. ಹಬ್ಬದ ದಿನ ಬೇವು ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಈ ಶ್ಲೋಕವನ್ನು ಹೇಳಿಕೊಳ್ಳಿ.

ಶತಾಯುಃ ವಜ್ರದೇಹಾಯ ಸರ್ವಸಂಪತ್ಕರಾಯಚ|
ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ||

( ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿ ಬೇವು ಬೆಲ್ಲ ಸೇವಿಸುತ್ತೇನೆ ).

ಬೇವು ಬೆಲ್ಲ ತಿಂದು ಒಳ್ಳೆಯ ಮಾತನಾಡೋಣ, ಶತ್ರುತ್ವ ಬಿಟ್ಟು ಪ್ರೀತಿಯ ಸ್ನೇಹತ್ವ ಬೆಳೆಸೋಣ. ಮತ್ತೊಮ್ಮೆ ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು…🌷🌷🌷.

ಮಾಸಾನಾಂ ಪ್ರಥಮೋಮಾಸಃ ಚೈತ್ರಮಾಸ್ತು ಕಥ್ಯತೇ| ದಾನಯಜ್ಞವ್ರತಸಮಃ.ಸರ್ವಕಾಮಪ್ರದಃ ಸ್ಮೃತಃ|

ಯಸ್ಮಿನ್ ಸ್ನಾನಂ ಚ ದಾನಂ ಚ ಭವೇತ್ ಕೋಟಿಗುಣಾಧಿಕಮ್|| (ಮಾಸಗಳಲ್ಲಿ ಚೈತ್ರಮಾಸ ಪ್ರಥಮಮಾಸವಾಗಿದೆ. ಸಕಲ ದಾನ, ಯಜ್ಞ ಹಾಗೂ ವ್ರತಗಳನ್ನು ಮಾಡಿದರೆ ಸರ್ವಕಾಮನೆಗಳನ್ನೂ ಪೂರ್ಣಗೊಳಿಸುವಂತಹದ್ದು. ಈ ಮಾಸದಲ್ಲಿ ಮಾಡುವ ಪ್ರಾತಃಸ್ನಾನ ಮತ್ತು ದಾನಗಳಿಂದ, ಇತರ ದಿನಗಳಲ್ಲಿ ಮಾಡುವುದಕ್ಕಿಂತಲೂ ಅಧಿಕವಾದ ಫಲವು ಪ್ರಾಪ್ತಿಯಾಗುವುದು.

ಹಾಗಾಗಿ ಈ ಚೈತ್ರಮಾಸದಲ್ಲಿ ಪ್ರಾತಃ ಸ್ನಾನ, ದಾನ ಮಾಡಿ, ಮಾಸನಿಯಾಮಕ ಶ್ರೀಪದ್ಮಿನಿ ವಿಷ್ಣು ವಿನ ಅನುಗ್ರಹ ಪಡೆಯಿರಿ.

ಶ್ರೀಶ ಚರಣಾರಾಧಕ:
ಕೆ.ವಿ.ಲಕ್ಷ್ಮೀನಾರಾಯಣಾಚಾರ್ಯ,
ಆನೇಕಲ್.
9535222242

 
 
 
 
 
 
 
 
 
 
 

Leave a Reply