ವಾಲ್ಮೀಕಿಯವರ ಆದರ್ಶಗಳ ಪಾಲನೆಯಿಂದ ವ್ಯಕ್ತಿತ್ವದ ಬದಲಾವಣೆ ಸಾಧ್ಯ :ಶಾಸಕ ಯಶ್ಪಾಲ್ ಸುವರ್ಣ

ವಾಲ್ಮೀಕಿಯವರ ಆದರ್ಶ, ಚಿಂತನೆಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಅವುಗಳನ್ನು ಪಾಲಿಸಿದಾಗ ವ್ಯಕ್ತಿತ್ವದ ಬದಲಾವಣೆ ಸಾಧ್ಯ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

ಅವರು ಇಂದು ನಗರದ ಮಣಿಪಾಲ ರಜಾತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಉಡುಪಿ ಇವರ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ, ಮಹರ್ಷಿ ವಾಲ್ಮೀಕಿ ಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಒಬ್ಬ ಬೇಟೆಗಾರನ ಕುಟುಂಬದಲ್ಲಿ ಜನಿಸಿದ್ದರೂ,ನಂತರದಲ್ಲಿ ವ್ಯಕ್ತಿತ್ವದ ಬದಲಾವಣೆಯಿಂದಾಗಿ ಹಲವಾರು ಆದರ್ಶ ಪುರುಷರಲ್ಲಿ ಇವರು ಒಬ್ಬರಾಗಿದ್ದಾರೆ ಎಂದರು.

ಪರಿಶಿಷ್ಟ ಪಂಗಡದ ವರ್ಗದವರಿಗೆ ಸರಕಾರ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಅವರ ಬೇಡಿಕೆಗಳನ್ನು ಈಡೇರಿಸಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದ ಅವರು, ಪರಿಶಿಷ್ಟ ಪಂಗಡದವರಿಗೆ ಅನುಷ್ಟಾನಗೊಳಿಸಲಾದ ಯೋಜನೆಗಳನ್ನು ಅವರುಗಳ ಮನೆ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಬೇಡನಾಗಿದ್ದ ಮಹರ್ಷಿ ವಾಲ್ಮೀಕಿಯು ಮಹರ್ಷಿಯಾಗಿ ಬದಲಾವಣೆಯಾಗಿದ್ದು, ಇಂತಹ ವ್ಯಕ್ತಿತ್ವದ ಬದಲಾವಣೆ ಯನ್ನು ವಾಲ್ಮೀಕಿ ಯವರಲ್ಲಿ ಕಾಣಬಹುದಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಅಸಾಧಾರಣ ಕೆಲಸವನ್ನು ಇವರು ಮಾಡಿದ್ದಾರೆ ಎಂದರು.

ಒಂದು ಕ್ರೌಂಚ ಪಕ್ಷಿಗಳ ಚಿಕ್ಕ ಘಟನೆ ಬೇಡನಾಗಿದ್ದ ಇವರ ಬದುಕನ್ನೇ ಬದಲಾಯಿಸಿತು. ಆ ಮಾನವೀಯ ಸ್ಪರ್ಶವನ್ನು ಅವರ ಜೀವನದಲ್ಲಿ ಅಳವಡಿಸಿಕೊಂಡು, ಆ ಮೂಲಕ ಇಡೀ ಜಗತ್ತಿಗೆ ರಾಮಾಯಣ ಕೃತಿಯನ್ನು ಕೊಡುಗೆಯಾಗಿ ನೀಡುತ್ತಾರೆ. ಇವರ ರಾಮಾಯಣ ಕೃತಿಯು ವಿವಿಧ ರೂಪಗಳಲ್ಲಿ ಸಾವಿರಾರು ಭಿನ್ನ ರಾಮಾಯಣದ ರೂಪಗಳನ್ನು ಜಾನಪದ ಗಳಲ್ಲಿ ನಾವು ಇಂದಿಗೂ ಕಾಣಬಹುದಾಗಿದೆ ಎಂದರು.

ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ.ಈ ಆಧುನಿಕ ಯುಗದಲ್ಲಿ ದ್ವೇಷ ಭಾವನೆಯನ್ನು ಬಿಟ್ಟು, ಪರಸ್ಪರ ಪ್ರೀತಿ ಸೌಹಾರ್ದತೆಯಿಂದ ಜೀವನ ನಡೆಸಬೇಕು ಎಂದರು .

ಮಹರ್ಷಿ ವಾಲ್ಮೀಕಿಯವರ ಕುರಿತು ಲೇಖಕಿ ಡಾ. ರೇಖಾ ವಿ ಬನ್ನಾಡಿ ಉಪನ್ಯಾಸ ನೀಡಿ ಮಾತನಾಡಿ.ಮಹರ್ಷಿ ವಾಲ್ಮೀಕಿ ಅವರು ಅಕ್ಷರಜ್ಞಾನ ಇಲ್ಲದ ಸಂದರ್ಭದಲ್ಲಿಯೂ ಅಕ್ಷರ ಜ್ಞಾನವನ್ನು ಕಲಿತು ಮಹಾನ್ ಗ್ರಂಥವಾದ ರಾಮಾಯಣವನ್ನು ರಚಿಸಿದರು. ಅನೇಕ ಮಾನವಿಯ ಮೌಲ್ಯಗಳು, ಕೌಟುಂಬಿಕ ಮೌಲ್ಯಗಳು ಪಿತೃತ್ವಪರಿಪಾಲನೆ, ಅಳಿಲು ಸೇವೆ, ಕರ್ತವ್ಯ ನಿಷ್ಠೆ ಸೇರಿದಂತೆ ಮತ್ತಿತರ ಮೌಲ್ಯಗಳ ಬಗ್ಗೆ ರಾಮಾಯಣದಲ್ಲಿ ತಿಳಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ವರ್ಗಗಳ ವಿವಿಧ ಸಾಧಕರನ್ನು‌ ಹಾಗೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ. ಎಸ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್ ಪೀರ್ ಸ್ವಾಗತಿಸಿದರು, ಶ್ರೀದೇವಿ ನಿರೂಪಿಸಿ, ವಿಶ್ವನಾಥ್ ಶೆಟ್ಟಿ ವಂದಿಸಿದರು.

 
 
 
 
 
 
 
 
 
 
 

Leave a Reply