ಉಡುಪಿ ಮಾ.10, ರಾಜು ಪೂಜಾರಿ(40ವ)ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದು, ತಾಯಿ ಮೊದಲೇ ನಿಧನರಾಗಿದ್ದು, ಮಕ್ಕಳು ಅಸಹಾಯಕರಾಗಿದ್ದು ಮಕ್ಕಳ ರಕ್ಷಣೆ ಭವಿಷ್ಯ ಹಾಗೂ ಮುಂದಿನ ಶಿಕ್ಷಣಕ್ಕೆ ಇಲಾಖೆ ಮುಂದಾಗಿ ಜವಾಬ್ದಾರಿವಹಿಸಬೇಕೆಂದು ವಿಶು ಶೆಟ್ಟಿ ಅಂಬಲಪಾಡಿ ಮಕ್ಕಳ ಸಹಾಯವಾಣಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಮನವಿ ಮಾಡಿದ್ದಾರೆ.
ಬಾಲಕ ನಾಲ್ಕನೇ ತರಗತಿ ಹಾಗೂ ಬಾಲಕಿ ಹತ್ತನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆಕಸ್ಮಾತಾಗಿ ತಂದೆಯ ಅಗಲುವಿಕೆ ಮಕ್ಕಳನ್ನು ಅಸಹಾಯಕ ಪರಿಸ್ಥಿತಿಗೆ ತಂದಿದೆ. ಮೊದಲು ಈ ಕುಟುಂಬ ಮುಂಬೈನಲ್ಲಿ ನೆಲೆಕಂಡಿದ್ದು ಪತ್ನಿ ಮೃತಪಟ್ಟ ಬಳಿಕ ಮಕ್ಕಳೊಂದಿಗೆ ತಂದೆ ತನ್ನ ಊರಾದ ಉಡುಪಿಗೆ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿ ಕಾರ್ಮಿಕನಾಗಿ ದುಡಿದು ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದು ಇದೀಗ ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅಸಹಾಯಕರಾಗಿದ್ದಾರೆ.
ಮೃತರ ಅಂತ್ಯ ಕ್ರಿಯೆ ವಿಶು ಶೆಟ್ಟಿ ಮುಂದಾಳತ್ವದಲ್ಲಿ ನಡೆದಿದ್ದು, ಮಕ್ಕಳ ಮುಂದಿನ ಭವಿಷ್ಯಕ್ಕೆ ಸಮಾಜ ಹಾಗೂ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ನೆರವಾಗಬೇಕೆಂದು ವಿಶು ಶೆಟ್ಟಿ ವಿನಂತಿಸಿದ್ದಾರೆ.