ಸಿಲಿಕಾನ್ ಸಿಟಿ ಜನರನ್ನ ಮೈನವಿರಿಳಿಸಿದ್ದ ಕರಾವಳಿ ಕಂಬಳಕ್ಕೆ ಅದ್ದೂರಿ ತೆರೆ

ಕಳೆದರೆಡು ದಿನದಿಂದ ಸಿಲಿಕಾನ್ ಸಿಟಿ ಜನರನ್ನ ಮೈನವಿರಿಳಿಸಿದ್ದ ಕರಾವಳಿ ಕಂಬಳಕ್ಕೆ ಅದ್ದೂರಿ ತೆರೆ ಬಿದ್ದಿದೆ. 6 ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 158 ಜೊತೆ ಕಂಬಳದ ಕೋಣಗಳು ಭಾಗಿಯಾಗಿದ್ದವು. ಶನಿವಾರ ಬೆಳಗ್ಗೆ ಆರಂಭವಾಗಿದ್ದ ಕಂಬಳಕ್ಕೆ ಸೋಮವಾರ ಬೆಳಗ್ಗಿನ ಜಾವ 4 ವೇಳೆಗೆ ತೆರೆ ಬಿದ್ದಿದೆ.

6 ವಿಭಾಗಗಳ ಪೈಕಿ ಕನಹಲಗೆ ವಿಭಾಗದಲ್ಲಿ, ಬೊಳ್ಳಂಬಳ್ಳಿಯ ಶ್ರೀರಾಮಚೈತ್ರ ಪರಮೇಶ್ವರ ಭಟ್ ಕೋಣಗಳು, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ್ ಭಟ್ ಕೋಣ, ಹಗ್ಗ ಕಿರಿಯ ವಿಭಾಗದಲ್ಲಿ ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯಾ ಪೂಜಾರಿ ಕೋಣಗಳು, ನೇಗಿಲ ಹಿರಿಯ ವಿಭಾಗದಲ್ಲಿ ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ ಕೋಣಗಳು, ನೇಗಿಲ ಕಿರಿಯ ವಿಭಾಗದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಗೆಲ್ಲುವ ಮೂಲಕ ಬೆಂಗಳೂರಿಲ್ಲಿ ಇತಿಹಾಸ ನಿರ್ಮಿಸಿದವು. ಇದರ ಜೊತೆ ಅಡ್ಡ ಹಲಗೆ ವಿಭಾಗದ ಫೈನಲ್ ಪಂದ್ಯ ಸಾಕಷ್ಟು ರೋಚಕತೆಗೆ ಕಾರಣ ಆಯ್ತು. 

ಫೈನಲ್ ಪಂದ್ಯದಲ್ಲಿ ಎರಡು ತಂಡದ ಕೋಣಗಳು ಸಮನಾಗಿ ಓಡುವ ಮೂಲಕ ಪಂದ್ಯ ಟೈ ಆಗಿತ್ತು. ನಂತರ ಮತ್ತೆ ಎರಡು ತಂಡಗಳ ನಡುವೆ ಟೈ ಬ್ರೇಕರ್ ಪಂದ್ಯ ಆಯೋಜನೆ ಮಾಡಲಾಗಿ, ಆ ಓಟದಲ್ಲಿ ಎಸ್‍ಎಂಎಸ್ ಫ್ಯಾಮಿಲಿ ಬೆಂಗಳೂರು ತಂಡ ಗೆಲ್ಲುವ ಮೂಲಕ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇನ್ನೂ ಕಂಬಳ ಅದ್ದೂರಿ ತೆರೆ ವಿಚಾರ ಸಂಬಂಧ ಕಂಬಳ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಶೋಕ್ ರೈ ಮಾತನಾಡಿ, ಬೆಂಗಳೂರು ಕಂಬಳ 100ಕ್ಕೆ 100 ಯಶಸ್ವಿಯಾಗಿದೆ.

ಕಂಬಳವನ್ನ 9 ರಿಂದ 10 ಲಕ್ಷ ವೀಕ್ಷಣೆ ಮಾಡಿದ್ದಾರೆ. ದೊಡ್ಡ ಯಶಸ್ಸು ಸಿಕ್ಕಿದೆ. ಇದಕ್ಕೆ ಶ್ರಮಿಸಿದ ಎಲ್ಲಾರಿಗೂ ಧನ್ಯವಾದ ಎಂದರು. ಇದೇ ಸಂಧರ್ಭದಲ್ಲಿ ಕಂಬಳ ಓಟದಲ್ಲಿ ಗೆದ್ದ ಮಾಲೀಕರು, ಮತ್ತು ಓಟಗಾರರು ಸಂತಸವನ್ನ ಹಂಚಿಕೊಂಡರು. ಸ್ಪರ್ಧೆ ಮುಕ್ತಾಯದ ಬಳಿಕ ಕಂಬಳ ವಿಜೇತರಿಗೆ ಪುನೀತ್ ರಾಜ್ ಕುಮಾರ್ ವೇದಿಕೆಯಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಂಬಳ ಸಮಿತಿ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಭಾಗಿಯಾದರು.

 
 
 
 
 
 
 
 
 
 
 

Leave a Reply