ಕೇಂದ್ರ ಸರಕಾರದ 5 ಕೆ.ಜಿ. ಉಚಿತ ಅಕ್ಕಿಯ ಜೊತೆಗೆ ಕಾಂಗ್ರೆಸ್ ತನ್ನ ಗ್ಯಾರಂಟಿಯ 10 ಕೆ.ಜಿ. ಅಕ್ಕಿ ವಿತರಿಸಿ ಪೌರುಷ ತೋರಿಸಲಿ: ಕುಯಿಲಾಡಿ ಸುರೇಶ್ ನಾಯಕ್

ಚುನಾವಣೆಯ ಸಂದರ್ಭದಲ್ಲಿ ಪೂರ್ವಾಪರ ಆಲೋಚಿಸದೆ ಬೇಕಾಬಿಟ್ಟಿಯಾಗಿ 5 ಉಚಿತ ಗ್ಯಾರಂಟಿಗಳನ್ನು ಘೋಷಿಸಿ, ತಮ್ಮ ವಾಗ್ದಾನದಂತೆ 24 ಗಂಟೆಗಳಲ್ಲಿ ಜಾರಿಗೊಳಿಸದೆ ರಾಜ್ಯದ ಜನತೆಯನ್ನು ಯಾಮಾರಿಸಿರುವ ಕಾಂಗ್ರೆಸ್ ಇದೀಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನದ ಬದಲು ಕೇಂದ್ರ ಸರಕಾರ ರಾಜ್ಯಕ್ಕೆ ನೀಡುತ್ತಿರುವ ಉಚಿತ 5 ಕೆ.ಜಿ. ಅಕ್ಕಿಯನ್ನು ಹೊರತುಪಡಿಸಿ, ತಮ್ಮ ಗ್ಯಾರಂಟಿಯ 10 ಕೆ.ಜಿ. ಅಕ್ಕಿಯನ್ನು ಖರೀದಿಸಿ ಪ್ರತ್ಯೇಕವಾಗಿ ವಿತರಿಸಿ ಪೌರುಷ ತೋರಿಸಲಿ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕರ್ನಾಟಕದ ಸಹಿತ ಎಲ್ಲಾ ರಾಜ್ಯಗಳ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ಮಾಸಿಕ 5 ಕೆ.ಜಿ. ಅಕ್ಕಿಯನ್ನು ವಿತರಿಸುತ್ತಿದೆ. ಕೊರೋನ ಸಂದರ್ಭದಲ್ಲಿಯೂ ದೇಶದ 80 ಕೋಟಿ ಜನತೆಗೆ ಉಚಿತ ಅಕ್ಕಿಯನ್ನು ವಿತರಿಸುವ ಮೂಲಕ ಕೇಂದ್ರ ಸರಕಾರ ಬಡ ಜನತೆಯ ಸಂಕಷ್ಟಕ್ಕೆ ಸ್ಪಂದಿಸಿದೆ.

ದೇಶದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪದಂತಹ ಅನಿರೀಕ್ಷಿತ ಸವಾಲುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಅಕ್ಕಿಯ ದಾಸ್ತಾನು ಮಟ್ಟವನ್ನು ಕಾಯ್ದುಕೊಳ್ಳುವ ಜೊತೆಗೆ ಬೆಲೆ ಏರಿಕೆಯನ್ನು ನಿಯಂತ್ರಿಸುವ ನೆಲೆಯಲ್ಲಿ ಭಾರತೀಯ ಆಹಾರ ನಿಗಮ (ಎಫ್ ಸಿ ಐ) ತನ್ನ ನಿಯಮಾವಳಿಯನ್ನು ಪರಿಷ್ಕರಿಸಿ, ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ ಇತರ ಯಾವುದೇ ರಾಜ್ಯಗಳಿಗೆ ಹೆಚ್ಚುವರಿ ಅಕ್ಕಿ ಸರಬರಾಜು ಮಾಡುವ ಪ್ರಕ್ರಿಯೆಗೆ ನಿರ್ಬಂಧ ಹೇರಿದೆ.

 

ಆದರೂ ಕೇಂದ್ರ ಸರಕಾರ ರಾಜ್ಯಕ್ಕೆ ಉಚಿತ 5 ಕೆ.ಜಿ. ಅಕ್ಕಿಯ ಪೂರೈಕೆಯನ್ನು ಯಥಾ ಪ್ರಕಾರ ಮುಂದುವರಿಸಿಕೊಂಡು ಬಂದಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಈ ಎಲ್ಲಾ ವಿಚಾರಗಳನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದರೂ ತಮ್ಮ ವೈಫಲ್ಯವನ್ನು ಮರೆಮಾಚಲು ಕೇಂದ್ರ ಸರಕಾರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಸಚಿವರು ಲಂಗು ಲಗಾಮಿಲ್ಲದೆ ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಗ್ಯಾರಂಟಿಯ ವೈಫಲ್ಯದಲ್ಲಿ ಸೊರಗಿರುವ ಕಾಂಗ್ರೆಸ್ ಸರಕಾರ ಅಭಿವೃದ್ಧಿಯ ಗೋಜಿಗೂ ಹೋಗದೆ, ಜನರಲ್ಲಿ ಗೊಂದಲ ಮೂಡಿಸಿ, ರಾಜ್ಯದಲ್ಲಿ ಅರಾಜಕತೆ ಸೃಷ್ಠಿಗೆ ನಾಂದಿ ಹಾಡಿದೆ.

ಜಾತಿ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಾ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಾ ಬಂದಿರುವ ಕಾಂಗ್ರೆಸ್ ತನ್ನ ಚಾಳಿಯನ್ನು ಮುಂದುವರಿಸಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಸೇರಿ ವೀರಶೈವ ಲಿಂಗಾಯುತ ಮತವನ್ನು ಒಡೆಯುವ ಹುನ್ನಾರ ನಡೆಸಿದ್ದ ಸಚಿವ ಎಂ.ಬಿ. ಪಾಟೀಲ್ ರವರಿಗೆ ಬಿಜೆಪಿಯ ವರಿಷ್ಠ ನಾಯಕರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ.

ಬಿ.ಎಲ್. ಸಂತೋಷ್ ರವರ ಜೀವನ ತತ್ವಗಳ ಬಗ್ಗೆ ವಾಸ್ತವ ವಿಚಾರವನ್ನು ತಿಳಿದುಕೊಂಡು ಮಾತನಾಡುವುದು ಉತ್ತಮ. ಕಾಂಗ್ರೆಸ್ ಸರಕಾರ ತನ್ನ ಕುಟುಂಬದ ಆಸ್ತಿ ಎಂಬಂತೆ ವರ್ತಿಸುತ್ತಾ ನಿರಂತರ ದುರಹಂಕಾರದ ಮಾತನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಕುಟುಂಬದ ಆಸ್ತಿ ಗಳಿಕೆಗಳ ಬಗ್ಗೆ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಉತ್ತಮ.

ರಾಜ್ಯದ ಇತರ ಜಿಲ್ಲೆಗಳಲ್ಲಿ ನಡೆಯುವ ಕೋಮು ಗಲಭೆ, ದೇಶ ವಿರೋಧಿ ಕೃತ್ಯಗಳನ್ನು ಅವಗಣಿಸಿ, ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ಮಾತ್ರ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ, ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿ ವಾಪಾಸು ನಿರ್ಣಯ, ಪಠ್ಯ ಪರಿಷ್ಕರಣೆ ನೆಪದಲ್ಲಿ ದೇಶದ ಮಹಾನ್ ಪುರುಷರ ಪಠ್ಯಗಳನ್ನು ಕೈಬಿಟ್ಟಿರುವುದು ಇತ್ಯಾದಿ ಬೆಳವಣಿಗೆಗಳು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಹಿಂದೂ ವಿರೋಧಿ ಎಂಬುದನ್ನು ಮಗದೊಮ್ಮೆ ನಿರೂಪಿಸಿದೆ.

ರಾಜ್ಯದಲ್ಲಿ ಉಚಿತ ಗ್ಯಾರಂಟಿಗಳನ್ನು ಜಾರಿಗೊಳಿಸಲು ಕಾಂಗ್ರೆಸ್ ಇದೀಗ ಬಿಜೆಪಿ ಸಂಸದರ ಸಹಾಯಕ್ಕಾಗಿ ಗೋಗರೆ ಯುತ್ತಿರುವುದು ಹಾಸ್ಯಾಸ್ಪದ. ಕಾಂಗ್ರೆಸ್ ನಾಯಕರು ‘ನನಗೂ ಫ್ರೀ ನಿನಗೂ ಫ್ರೀ’ ಎಂದು ಉಚಿತ ಗ್ಯಾರಂಟಿಗಳನ್ನು ಘೋಷಿಸುವಾಗ ಪ್ರದರ್ಶಿಸಿದ ಅಟ್ಟಹಾಸವನ್ನು ಗ್ಯಾರಂಟಿ ಜಾರಿಯಲ್ಲಿ ತೋರ್ಪಡಿಸದೇ ಇರುವುದು ವಿಪರ್ಯಾಸ.

ಕಾಂಗ್ರೆಸಿಗರು ಸ್ವಯಂ ಘೋಷಿಸಿರುವ ಗ್ಯಾರಂಟಿಗಳಿಗೆ ತಾವೇ ಜವಾಬ್ದಾರರಾಗಿದ್ದು ಹೆಚ್ಚುವರಿ 10 ಕೆ.ಜಿ. ಉಚಿತ ಅಕ್ಕಿಯನ್ನು ವಿತರಿಸುವ ಜೊತೆಗೆ ಎಲ್ಲಾ 5 ಗ್ಯಾರಂಟಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ ತಮ್ಮ ಬದ್ಧತೆಯನ್ನು ಪ್ರದರ್ಶಿಸುವುದು ಇಂದಿನ ಅಗತ್ಯತೆ. ಕೊಟ್ಟ ಮಾತಿಗೆ ತಪ್ಪಿದಲ್ಲಿ, ವಚನ ಭ್ರಷ್ಟ ಕಾಂಗ್ರೆಸ್ಸಿಗೆ ರಾಜ್ಯದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply