ಮಾಜಿ ಶಾಸಕ ಕೆ ವಸಂತ ಬಂಗೇರ ವಿಧಿವಶ

ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ, ಬೆಳ್ತಂಗಡಿಯ ಐದು ಬಾರಿಯ ಶಾಸಕ ಕೆ ವಸಂತ ಬಂಗೇರ ನಿಧನರಾಗಿದ್ದಾರೆ. ಮೇ 8ರಂದು ಸಂಜೆ 4 ಗಂಟೆಗೆ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಕೆ ವಸಂತ ಬಂಗೇರ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅವರು ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೇ 9ರಂದು ಮುಂಜಾನೆ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸುಮಾರು 5 ದಶಕಗಳ ರಾಜಕೀಯ ಜೀವನದಲ್ಲಿ ವಸಂತ ಬಂಗೇರಾ ಅವರು ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಅನುಭವಿಸಿದ್ದರು. 1983ರಲ್ಲಿ ಅವರು ಮೊದಲ ಬಾರಿಗೆ ಬೆಳ್ತಂಗಡಿ ಶಾಸಕರಾಗಿ ಆಯ್ಕೆಯಾಗಿದ್ದರು. ಆಗ ಅವರು ಬಿಜೆಪಿಯಲ್ಲಿದ್ದರು. ತಮ್ಮ ಗೆಲುವಿನೊಂದಿಗೆ ಕ್ಷೇತ್ರದಲ್ಲಿ ಕಮಲದ ಬಾವುಟ ಹಾರಿಸುವಲ್ಲೂ ಯಶಸ್ವಿಯಾಗಿದ್ದರು.

1985ರಲ್ಲೂ ಅವರು ಗೆಲುವು ಸಾಧಿಸಿದರು. ವಿಶೇಷವೆಂದರೆ ಈ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕೇವಲ ಎರಡು ಸ್ಥಾನಗಳಲ್ಲಿ ಮಾತ್ರ ಜಯ ಸಾಧಿಸಿತ್ತು. ಅವರಲ್ಲಿ ಒಬ್ಬರು ಬೆಳ್ತಂಗಡಿಯ ವಸಂತ ಬಂಗೇರರಾದರೆ, ಇನ್ನೊಬ್ಬರು ಶಿಕಾರಿಪುರದ ಬಿಎಸ್‌ ಯಡಿಯೂರಪ್ಪ!

ಮುಂದೆ 1989ರಲ್ಲಿ ಬಂಗೇರ ಬಿಜೆಪಿ ತೊರೆದು ಪಕ್ಷೇತರರಾಗಿ ಸ್ಪರ್ಧಿಸಿ ಸೋಲು ಕಂಡರು. 1994ರ ವೇಳೆಗೆ ಅವರು ಜನತಾದಳಕ್ಕೆ ಬಂದಿದ್ದರು. ತಮ್ಮ ಸ್ವಂತ ತಮ್ಮ ಕೆ ಪ್ರಭಾಕರ ಬಂಗೇರ ಅವರನ್ನೇ ಸೋಲಿಸಿ ಈ ಬಾರಿ ಮತ್ತೆ ಅವರು ಶಾಸಕರಾದರು. ಮುಂದೆ ಎರಡು ಬಾರಿ ಅಂದರೆ 1999 ಹಾಗೂ 2004ರಲ್ಲಿ ತಮ್ಮನ ವಿರುದ್ಧವೇ ಸೋಲು ಕಂಡರು.

2008ರಲ್ಲಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕೈ ಪಾಳಯದಿಂದ ಸ್ಪರ್ಧಿಸಿ ಪುನಃ ಗೆಲುವು ಸಾಧಿಸಿದರು. ಈ ಬಾರಿ ಮತ್ತೆ ತಮ್ಮನನ್ನೇ ಅವರು ಸೋಲಿಸಿದ್ದರು. 2014ರಲ್ಲೂ ಗೆಲುವು ಸಾಧಿಸಿದ್ದ ವಸಂತ ಬಂಗೇರ 2018ರಲ್ಲಿ ಹರೀಶ್‌ ಪೂಂಜಾ ವಿರುದ್ಧ ಸೋಲು ಕಾಣಬೇಕಾಯಿತು.

ಕಳೆದ ಚುನಾವಣೆಯಲ್ಲಿ ಅಂದರೆ 2023ರಲ್ಲಿ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ನೀಡಿರಲಿಲ್ಲ. ಆದರೆ ರಾಜಕೀಯವಾಗಿ ಬಂಗೇರ ಸಕ್ರಿಯರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ, ಬೆಂಬಲಿಗರು, ಅಭಿಮಾನಿಗಳ ಕುಂದು-ಕೊರತೆಗಳನ್ನು ನಿವಾರಿಸುವ ಮೂಲಕ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದ್ದರು.

ಸಾರ್ವಜನಿಕ ಜೀವನದಲ್ಲಿ ಇದ್ದಷ್ಟು ದಿನ ನೇರ-ನಿಷ್ಠುರವಾಗಿಯೇ ಬದುಕಿದವರು ವಸಂತ ಬಂಗೇರ. ಎಷ್ಟೇ ಹಿರಿಯರೇ ಇರಲಿ ಸತ್ಯವನ್ನು ಮುಖಕ್ಕೆ ಹೊಡೆತಂದೆ ಮಾತನಾಡುತ್ತಿದ್ದ ಬಂಗೇರ ಯಾರ ಮುಲಾಜಿಗೂ ಅಂಜಿದವರಲ್ಲ. ಐದು ಬಾರಿ ಶಾಸಕರಾಗಿದ್ದರೂ ಎಂದೂ ಮಂತ್ರಿ ಗಿರಿಗೆ ಲಾಬಿ ಮಾಡಿದವರಲ್ಲ. ಕೊಟ್ಟರೆ ಕೊಡಲಿ ಎಂದಷ್ಟೇ ಸುಮ್ಮನಿದ್ದವರು. ಅಂಥ ಮೇರು, ಹಿರಿಯ ನಾಯಕ ವಸಂತ ಬಂಗೇರ ಬುಧವಾರ ಇಹಲೋಕ ತ್ಯಜಿಸಿದ್ದಾರೆ.

ಅವರು ಪತ್ನಿ, ಮಕ್ಕಳು, ಮಾಜಿ ಶಾಸಕ ಕೆ ಪ್ರಭಾಕರ ಬಂಗೇರ ಸೇರಿದಂತೆ ಸಹೋದರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply