ಖಾಸಗಿ ಬಸ್ ಚಲಿಸುತ್ತಿದ್ದಾಗ ಬಾಗಿಲ ಬಳಿ ನಿಂತಿದ್ದ ವೃದ್ಧೆಯೊಬ್ಬರು ಆಯತಪ್ಪಿ ಹೊರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಬಳಿಯ ಮಾಣಿ ಹೆದ್ದಾರಿಯಲ್ಲಿ ನಡೆದಿದೆ.
ಜ.31ರಂದು ಘಟನೆ ನಡೆದಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಉಪ್ಪಿನಂಗಡಿ ನಿನ್ನಿಕಲ್ಲು ನಿವಾಸಿ ರಾಧಾ(66) ಫೆ.6ರಂದು ಮೃತಪಟ್ಟಿದ್ದಾರೆ. ಘಟನೆಯ ದೃಶ್ಯ ಬಸ್ಸಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಸ್ ಚಾಲಕ ಮತ್ತು ನಿರ್ವಾಹಕನ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೃದ್ಧ ಮಹಿಳೆ ಬಸ್ಸಿನಲ್ಲಿ ಕುಳಿತುಕೊಂಡಿದ್ದಾಗ ಮಗು ಹಿಡಿದು ಬಂದ ಮುಸ್ಲಿಂ ಮಹಿಳೆಗೆ ತನ್ನ ಸೀಟು ಬಿಟ್ಟುಕೊಟ್ಟಿದ್ದರು. ಸೀಟು ಕೊಟ್ಟು ಅಲ್ಲಿಯೇ ಎದ್ದು ನಿಂತಿದ್ದಾಗಲೇ ಕೈಗೆ ಕಂಬ ಸಿಗದೆ ಆಯತಪ್ಪಿ ಬಾಗಿಲ ಮೂಲಕ ಹೊರಕ್ಕೆ ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿ ವೃದ್ಧೆಯನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಲ್ಕು ದಿನಗಳ ಬಳಿಕ ವೃದ್ಧೆ ರಾಧಾ ಮೃತಪಟ್ಟಿದ್ದಾರೆ.