ಪ್ರೀತಿ ತಂದ ಸಾವು 

ಐದು ವರ್ಷದಿಂದ ಪ್ರೀತಿಸುತ್ತಿದ್ದ ಪ್ರೇಯಸಿಗೆ ಬೆಂಕಿ ಇಟ್ಟು ಹತ್ಯೆ ಮಾಡಿರುವ ಆರೋಪ ಪ್ರಿಯಕರನ ವಿರುದ್ಧ ಕೇಳಿಬಂದಿದೆ. ಸುಟ್ಟ ಗಾಯಗಳಿಂದ ಗಂಭೀರ ಗಾಯಗೊಂಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.

ದಾನೇಶ್ವರಿ ಮೃತ ಯುವತಿ. ಪ್ರಿಯಕರ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ವಿಜಯಪುರದ ತಾಳೀಕೋಟೆ ಮೂಲದ ದಾನೇಶ್ವರಿ ಹಾಗೂ ಶಿವಕುಮಾರ್ 2018ರಿಂದಲೂ ಪರಸ್ಪರ ಪ್ರೀತಿಸುತ್ತಿದ್ದರು. ವಿಜಯಪುರದ ಬಿಎಲ್​ಡಿ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ವಿದ್ಯಾಭ್ಯಾಸದ ಬಳಿಕ ಶಿವಕುಮಾರ್​, ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರದ ಸ್ಟೇನ್​ ಲೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.

ಇತ್ತೀಚೆಗೆ ದಾನೇಶ್ವರಿಯನ್ನು ಶಿವಕುಮಾರ್​ ಕಡೆಗಣಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ, ಮದುವೆ ವಿಚಾರವಾಗಿಯೂ ಇಬ್ಬರ ನಡುವೆ ಗಲಾಟೆಯಾಗಿತ್ತು ಎಂದು ಹೇಳಲಾಗಿದೆ. ಕರೆ ಮಾಡಿದರೂ ಸ್ವೀಕರಿಸದ ಹಿನ್ನೆಲೆಯಲ್ಲಿ ಇತ್ತೀಚೆಗೆ ಶಿವಕುಮಾರ್ ಕೆಲಸ ಮಾಡ್ತಿದ್ದ ಸ್ಥಳಕ್ಕೆ ದಾನೇಶ್ವರಿ ಬಂದಿದ್ದಳು. ಈ ವೇಳೆ ಮದುವೆಯ ವಿಚಾರದಲ್ಲಿ ಕಂಪನಿ ಮುಂದೆಯೇ ಇಬ್ಬರ ನಡುವೆ ಜಗಳವಾಗಿತ್ತು ಎಂದು ತಿಳಿದುಬಂದಿದೆ.

ಬಾಟಲ್​ನಲ್ಲಿ ಪೆಟ್ರೋಲ್ ತಂದು ದಾನೇಶ್ವರಿ ಮೇಲೆ ಎರಚಿ, ಬೆಂಕಿ ಹಚ್ಚಿರುವ ಆರೋಪ ಶಿವಕುಮಾರ್​ ವಿರುದ್ಧ ಕೇಳಿಬಂದಿದೆ. ಬೆಂಕಿ ಹಚ್ಚಿದ ಬಳಿಕ ದಾನೇಶ್ವರಿಯನ್ನು ತಾನೇ ಖಾಸಗಿ ಆಸ್ಪತ್ರೆಗೆ ದಾಖಲಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಮೃತಪಟ್ಟಿದ್ದಾಳೆಂದು ತಿಳಿದುಬಂದಿದೆ.

ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್​ 307 ಮತ್ತು ಎಸ್​ಸಿ-ಎಸ್​ಟಿ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಎರಡು ದಿನದ ಹಿಂದೆ ಈ ಹೀನ ಕೃತ್ಯ ನಡೆದಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ದಾನೇಶ್ವರಿ ಕೊನೆಯುಸಿರೆಳೆದಿದ್ದಾಳೆ.

 
 
 
 
 
 
 
 
 
 
 

Leave a Reply