ಯುಪಿಎಂಸಿ- ಕಾಲೇಜು ವಾರ್ಷಿಕೋತ್ಸವ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಆಗಸ್ಟ್ 24ರಂದು 31ನೇ ವರ್ಷದ ಕಾಲೇಜು ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ದಿನಾಚರಣೆ ನೆರವೇರಿತು. ಮುಖ್ಯ ಅಭ್ಯಾಗತರಾದ ಕುಂದಾಪುರದ ಭಂಡಾರ್ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು ಇದರ ಪ್ರಾಚಾರ್ಯರಾದ ಡಾ. ಎನ್.ಪಿ. ನಾರಾಯಣ ಶೆಟ್ಟಿ ಮಾತನಾಡುತ್ತಾ ಸಮಯ ಅತ್ಯಂತ ಅಮೂಲ್ಯವಾದದ್ದು ಕಾಲೇಜು ಜೀವನದಲ್ಲಿ ಇರುವಷ್ಟು ಸಮಯ ಸದುಪಯೋಗ ಪಡಿಸಿಕೊಂಡು ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ್ ಭಟ್ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ 2019 ನೇ ಸಾಲಿನ ರ‍್ಯಾಂಕ್ ವಿಜೇತ ಸ್ವಾತಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹಳೆವಿದ್ಯಾರ್ಥಿ ಸಂಘ ಕೊಡಮಾಡುವ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೆ ತೃತೀಯ ಬಿ.ಕಾಂ ನ ನಾಗರಾಜ್ ರವಿ ಹೆಗ್ಡೆ ಭಾಜನರಾದರು. ಇದೇ ಸಂದರ್ಭದಲ್ಲಿ ಕ್ರೀಡಾ ಮತ್ತು ಶೈಕ್ಷಣಿಕ ಸಾಧಕರಿಗೆ ಸನ್ಮಾನಿಸಲಾಯಿತು.

ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕರಾದ ಶ್ರೀ ಮನೋಹರ ಶೆಟ್ಟಿ ತೋನ್ಸೆ, ಗೌರವಾಧ್ಯಕ್ಷರಾದ ಶ್ರೀ ರವಿರಾಜ್ ಹೆಚ್.ಪಿ, ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಸವಿತಾ ಎಸ್ ಉಪಸ್ಥಿತರಿದ್ದರು.

ಉಪ ಪ್ರಾಂಶುಪಾಲರಾದ ಶ್ರೀಮತಿ ಆಶಾಕುಮಾರಿ ಶೈಕ್ಷಣಿಕ ಮತ್ತು ಕ್ರೀಡಾ ಸಾಧಕರ ಪಟ್ಟಿಯನ್ನು, ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಸನ್ಮಾನ ಕಾರ್ಯಕ್ರಮ ಪಟ್ಟಿಯನ್ನು ವಾಚಿಸಿದರು, ಅಸೀಲ್ ಅಕ್ರಂ ಸ್ವಾಗತಿಸಿದರು, ನಿಕಿತಾ ಶೆಟ್ಟಿ ವಂದಿಸಿದರು, ಹನೀಶ ಪ್ರೀಮಾ ಡಿಸೋಜಾ ಮತ್ತು ಸಚಿನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಮೂಡಿಬಂದವು.

 
 
 
 
 
 
 
 
 
 
 

Leave a Reply