ಬೈಕ್‌ಗೆ ಕಾರು ಡಿಕ್ಕಿ; ದಂಪತಿ ದಾರುಣ ಸಾವು!

ಮದುವೆ ಮುಗಿಸಿ ಬೈಕ್‌ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ದಂಪತಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬರಗೂರು ಹ್ಯಾಂಡ್‌ಪೋಸ್ಟ್ ಬಳಿ ನಡೆದಿದೆ.

ಚಂದ್ರೇಗೌಡ (52), ಹೇಮಲತಾ (45) ಮೃತ ದುರ್ದೈವಿಗಳು. ಇಂದು (ಫೆ.19) ಬೆಳಗ್ಗೆ ಉದಯಪುರದಲ್ಲಿ ಸಂಬಂಧಿಕರ ಮದುವೆಗೆ ಬೈಕ್‌ನಲ್ಲಿ ದಂಪತಿ ತೆರಳಿದ್ದರು. ಮಧ್ಯಾಹ್ನದ ವೇಳೆಗೆ ಮದುವೆ ಮುಗಿಸಿ ಅದೇ ಬೈಕ್‌ನಲ್ಲಿ ಚನ್ನರಾಯಪಟ್ಟಣಕ್ಕೆ ವಾಪಾಸ್ ಆಗುತ್ತಿದ್ದರು. ಬರಗೂರು ಹ್ಯಾಂಡ್‌ಪೋಸ್ಟ್ ಬಳಿಯ ತಿರುವಿನಲ್ಲಿ ತಮಿಳುನಾಡು ನೋಂದಣಿ ಇರುವ ಕಾರು ವೇಗವಾಗಿ ಬಂದು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ರಭಸಕ್ಕೆ ಬೈಕ್ ಒಂದು ಕಡೆ, ದಂಪತಿ ಒಂದು ಕಡೆ ರಸ್ತೆಗೆ ಬಿದ್ದಿದ್ದಾರೆ. ಇಬ್ಬರ ತಲೆಗೂ ತೀವ್ರ ಪೆಟ್ಟಾಗಿ, ರಕ್ತಸ್ರಾವ ಆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ನಗರ ಠಾಣೆ ಇನ್ಸ್ಪೆಕ್ಟರ್ ರಘುಪತಿ ಹಾಗೂ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು. ಕಾರನ್ನು ವಶಕ್ಕೆ ಪಡೆದಿರುವ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

 
 
 
 
 
 
 
 
 
 
 

Leave a Reply