13-14 ರಂದು ಶಾಸ್ತ್ರೀಯ ಸಂಗೀತ ಕಛೇರಿ: – ಮೃದಂಗ ವಿದ್ವಾಂಸ ಸಿ. ಚೆಲುವರಾಜುಗೆ 14ರಂದು ಸನ್ಮಾನ

– ಪಿಜಿಎಲ್ ಸಂಸ್ಮರಣಾ ವೇದಿಕೆ ಆಯೋಜನೆ
– ಮೈಸೂರಿನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಕಾರ್ಯಕ್ರಮ

ಮೈಸೂರು: ಪಿಜಿಎಲ್ ಸಂಸ್ಮರಣಾ ವೇದಿಕೆ ಡಿ. 13 ಮತ್ತು 14ರಂದು ವಿಶೇಷ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಖ್ಯಾತ ಮೃದಂಗ ವಿದ್ವಾಂಸರಾಗಿದ್ದ ದಿ.ಪಿ.ಜಿ. ಲಕ್ಷ್ಮೀನಾರಾಯಣ ಅವರ 17ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಎರಡೂ ದಿನ ಸಂಜೆ 6ಕ್ಕೆ ಹಿರಿಯ ವಿದ್ವಾಂಸರಿಂದ ಗಾಯನ, ವಾದನ ಕಛೇರಿಗಳನ್ನು ಹಮ್ಮಿಕೊಳ್ಳಲಾಗಿದೆ.

13ರ ಸಂಜೆ 6ಕ್ಕೆ ವಿದ್ವಾಂಸರಾದ ಡಾ. ಸಿ.ಎ. ಶ್ರೀಧರ ಮತ್ತು ಸಿ.ಎಸ್. ಕೇಶವಚಂದ್ರ ಅವರಿಂದ ಯುಗಳ ವೇಣುವಾದನವಿದೆ. ಪಕ್ಕವಾದ್ಯದಲ್ಲಿ ವಿದ್ವಾನ್ ಕೇಶವ ಕುಮಾರ (ವಯೋಲಿನ್), ವಿದ್ವಾನ್ ಶಿವಶಂಕರಸ್ವಾಮಿ (ಮೃದಂಗ)  ಮತ್ತು ವಿದ್ವಾನ್ ರಘುನಂದನರಾವ್  (ಘಟ) ಸಹಕಾರವಿದೆ.

14ರ ಸಂಜೆ 6ಕ್ಕೆ ಹಿರಿಯ ಮೃದಂಗ ವಿದ್ವಾಂಸ ಬೆಂಗಳೂರಿನ ಸಿ. ಚೆಲುವ ರಾಜು ಅವರಿಗೆ ಸಂಸ್ಥೆ ವತಿಯಿಂದ ಗೌರವ ಸಮರ್ಪಣೆ ನಡೆಯಲಿದೆ. ಪ್ರಖ್ಯಾತ ವಿದ್ವಾಂಸ ಎಚ್.ಕೆ. ನರಸಿಂಹ ಮೂರ್ತಿ, ನಾದಬ್ರಹ್ಮ ಸಂಗೀತ ಸಭಾ ಗೌರವ ಕಾರ್ಯದರ್ಶಿ ಕೆ.ಎಸ್.ಎನ್. ಪ್ರಸಾದ್,  ಸಂಸ್ಮರಣಾ ವೇದಿಕೆ ಮುಖ್ಯಸ್ಥ ಮತ್ತು ಮೃದಂಗ ವಿದ್ವಾಂಸರಾದ ಪ್ರೊ. ಜಿ.ಎಸ್. ರಾಮಾನುಜನ್ ಉಪಸ್ಥಿತರಿರಲಿದ್ದಾರೆ.

ನಂತರ ವಿದ್ವಾನ್ ಸಂಪಗೋಡು ವಿಘ್ನರಾಜ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಛೇರಿ ನಡೆಯಲಿದೆ. ಪಕ್ಕವಾದ್ಯದಲ್ಲಿ ವಿದುಷಿ ಸಿಂಧೂ ಸುಚೇತನ (ವಯೋಲಿನ್), ವಿದ್ವಾನ್ ಚೆಲುವರಾಜು (ಮೃದಂಗ) ಮತ್ತು ವಿದ್ವಾನ್ ಶರತ್ ಕೌಶಿಕ್ (ಘಟ) ಸಹಕಾರವಿದೆ ಎಂದು ಪಿಜಿಎಲ್ ಸಂಸ್ಮರಣಾ ವೇದಿಕೆ ಮುಖ್ಯಸ್ಥ ಪ್ರೊ. ರಾಮಾನುಜನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply