ವಿಶ್ವ ವೈದ್ಯರ ದಿನಾಚರಣೆ-ಅಭಿನಂದನೆ

ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇವರ ನೇತೃತ್ವದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಇವರ ಸಹಯೋಗದೊಂದಿಗೆ ವಿಶ್ವ ವೈದ್ಯರ ದಿನಾಚರಣೆಯನ್ನು ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ ಇಲ್ಲಿ ವೈದ್ಯರನ್ನು ಅಭಿನಂದಿಸುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ವೈದ್ಯಕೀಯ ಕ್ಷೇತ್ರದಲ್ಲಿ ವಿವಿಧ ವಿಭಾಗಗಳಲ್ಲಿ ಪರಿಣತಿ ಹೊಂದಿರುವ, ವಿವಿದೆಡೆ ಅತ್ಯಮೂಲ್ಯ ವೈದ್ಯಕೀಯ ಸೇವೆಯನ್ನು ಸಲ್ಲಿಸಿ ಹೆಬ್ರಿಯಲ್ಲೂ ತಮ್ಮ ಛಾಪನ್ನು ಮೂಡಿಸಿದ ಇದೀಗ ಜಿಲ್ಲಾ ಸರ್ಜನ್ ಆಗಿ ಜಿಲ್ಲಾಸ್ಪತ್ರೆ ಉಡುಪಿಯಲ್ಲಿ ಸೇವೆ ಸಲ್ಲಿಸುತ್ತಿರುವ ಜನಸ್ನೇಹಿ ವೈದ್ಯರಾದ ಡಾ. ಅಶೋಕ ಹೆಚ್ ಅವರ ಅನುಪಮ ಸೇವೆಯನ್ನು ಗುರುತಿಸಿ ಅಭಿನಂದನಾಪೂರ್ವಕ ಸನ್ಮಾನಿಸಲಾಯಿತು.

ಹೆಬ್ರಿಸಿಟಿ ಲಯನ್ಸ್ ನ ನೂತನ ಅಧ್ಯಕ್ಷರಾದ ಲಯನ್ ನಾಗೇಶ್ ನಾಯಕ್ ಸೀತಾನದಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಸರಳ ಸಮಾರಂಭವನ್ನು ಲಯನ್ಸ್ ಪ್ರಾಂತ್ಯಾಧ್ಯಕ್ಷರಾದ ಲಯನ್ ಬೇಳಂಜೆ ಹರೀಶ್ ಪೂಜಾರಿಯವರು ಉದ್ಘಾಟಿಸಿ ಶುಭ ಕೋರಿದರು. ಹೆಬ್ರಿ ಲಯನ್ಸ್ ನ ನಿಕಟಪೂರ್ವ ಅಧ್ಯಕ್ಷರಾದ ಲಯನ್ ರಘುರಾಮ ಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿದರು. 

ಸನ್ಮಾನ ಸ್ವೀಕರಿಸಿ ಡಾ. ಅಶೋಕ್ ರವರು ಮಾತನಾಡುತ್ತಾ ವೈದ್ಯಕೀಯ ಸೇವೆ ಅತ್ಯಂತ ಪುಣ್ಯಪ್ರದವಾದುದು. ಅದರಲ್ಲೂ ಗ್ರಾಮೀಣ ಭಾಗದ ಜನರ ಆರೋಗ್ಯ ಸೇವೆ ಮಾಡುವುದು ಇನ್ನೂ ಅತ್ಯಮೂಲ್ಯವಾದುದು. ಉಪ ಕೇಂದ್ರದ ಸಿಬ್ಬಂದಿಯವರಿಗೆ ಉತ್ತಮ ಮಾರ್ಗದರ್ಶನ ಹಾಗೂ ಮಾಹಿತಿಯನ್ನು ನೀಡುವ ಮೂಲಕ ಹ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಿರಂತರ ಆಯೋಜಿಸುವ ಮುಖಾಂತರ ಜನರ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದರಲ್ಲದೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳಿಗೂ ಆದ್ಯತೆ ನೀಡಲಾಗುವುದು ಎಂದರು. ತಮ್ಮೊಂದಿಗೆ ವೈದ್ಯಕೀಯ ಸೇವೆಯಲ್ಲಿ ಸಹಕರಿಸಿದ ವೈದ್ಯರನ್ನು, ಅಧಿಕಾರಿಗಳನ್ನು, ಸಿಬ್ಬಂದಿಯವರನ್ನು ಮನಃತುಂಬಿ ಶ್ಲಾಘಿಸಿದರು. ಸನ್ಮಾನಿಸಿ ಗೌರವಿಸಿದ ಹೆಬ್ರಿ ಲಯನ್ಸ್ ನ ಸಹಕಾರ ಹಾಗೂ ಸೇವಾ ಕಾರ್ಯಗಳನ್ನು ಕೊಂಡಾಡಿದರು. ಸಮುದಾಯ ಆರೋಗ್ಯ ಕೇಂದ್ರದ ಸರ್ವರನ್ನೂ ಅಭಿನಂದಿಸಿ ಶುಭಕೋರಿದರು.

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ್ ಬೈಲೂರು ಅಭಿನಂದನಾ ಮಾತುಗಳನ್ನಾಡಿದರು. ಆಸ್ಪತ್ರೆಯ ವೈದ್ಯರುಗಳಾದ ಡಾ. ಅರ್ಪಿತಾ ಶೆಟ್ಟಿ, ಡಾ.ರಮಾಮಣಿ ರಾವ್, ಡಾ.ಶ್ರೀಶೈನಿ ಹಾಗೂ ಕೆ.ಎಮ್.ಸಿ. ಯ ಸ್ನಾತಕೋತ್ತರ ಅಧ್ಯಯನ ನಿರತ ವೈದ್ಯರುಗಳಾದ ಡಾ. ರಿಶಭ್, ಡಾ. ಅಮನ್, ಡಾ. ಅಕ್ಷಯ್ ಇವರೆಲ್ಲರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಹೆಬ್ರಿ ಲಯನ್ಸ್ ನ ಕಾರ್ಯದರ್ಶಿ ಲಯನ್ ಹರೀಶ್ ಶೆಟ್ಟಿ ನಾಡ್ಪಾಲು ಕೋಶಾಧಿಕಾರಿ ಲಯನ್ ಆಶಾ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಶ್ರೀಮತಿ ಶಾಂತಾ ಶಿಶು ಸುರಕ್ಷಾಧಿಕಾರಿ ಪ್ರಾರ್ಥಿಸಿದರು. ಲಯನ್ಸ್ ಜಿಲ್ಲಾ ಮುಖಂಡರಾದ ಲಯನ್ ಟಿ.ಜಿ. ಆಚಾರ್ಯ ನಿರೂಪಿಸಿದರು. ಸಮುದಾಯದ ಆರೋಗ್ಯಾಧಿಕಾರಿ ಶ್ರೀ ಚಿದಾನಂದಸ್ವಾಮಿ ವಂದಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಮುಖಂಡರುಗಳಾದ ಸ್ಖಾಪಕಾಧ್ಯಕ್ಷ ಲಯನ್ ಹೆಚ್. ದಿನಕರ ಪ್ರಭು, ಲಯನ್ ಕೆ. ರಾಮಚಂದ್ರ ಭಟ್, ಲಯನ್ ಉದಯಕುಮಾರ್ ನಾಯಕ್, ಲಯನ್ ಪ್ರಸಾದ್ ರೈ ಹಾಗೂ ಆಸ್ಪತ್ರೆಯ ಸಿಬ್ಬಂದಿಯವರು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದು ಸಹಕರಿಸಿದರು.

 
 
 
 
 
 
 
 
 
 
 

Leave a Reply