ದ್ವೇಷ ಭಾವನೆ ಬಿತ್ತಿದ ರಾಹುಲ್ ಗಾಂಧಿ ವರ್ತನೆಯಿಂದ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಸ್ಥಿತಿ ಮಗದೊಮ್ಮೆ ಬಟ್ಟಾಬಯಲಾಗಿದೆ : ಕಿಶೋರ್ ಕುಮಾರ್ ಕುಂದಾಪುರ

ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ‘ತಮ್ಮನ್ನು ತಾವು ಹಿಂದೂಗಳು ಎಂದು ಕರೆಸಿಕೊಳ್ಳುವವರು 24 ಗಂಟೆ ದ್ವೇಷ, ಹಿಂಸೆ ಮತ್ತು ಸುಳ್ಳಿನಲ್ಲಿ ನಿರತರಾಗಿದ್ದಾರೆ’ ಎನ್ನುವ ದುರುದ್ದೇಶಪೂರಿತ ಮಾತನ್ನಾಡುವ ಮೂಲಕ ಕಾಂಗ್ರೆಸ್ಸಿನ ಹಿಂದೂ ವಿರೋಧಿ ಮನಸ್ಥಿತಿಯನ್ನು ಮಗದೊಮ್ಮೆ ಬಟ್ಟಾಬಯಲುಗೊಳಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಯ ಸಂದರ್ಭದಲ್ಲಿ ಹಿಂದೂ ವೇಷಧಾರಿಯಾಗಿ ದೇವಸ್ಥಾನಗಳನ್ನು ಸುತ್ತುವ ರಾಹುಲ್ ಗಾಂಧಿ ತನ್ನ ಅಪ್ರಬುದ್ಧ ಮಾತುಗಳಿಂದ ಕಪಟತನವನ್ನು ಪ್ರದರ್ಶಿಸಿ ಜಗತ್ತಿನ ಮುಂದೆ ಬೆತ್ತಲಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಇತರ ಯಾರನ್ನೂ ದೂಷಿಸದೆ ಕೇವಲ ಹಿಂದೂಗಳನ್ನು ಮಾತ್ರ ಗುರಿಯಾಗಿಸಿ ಅವಮಾನಿಸಿರುವುದು ಕಾಂಗ್ರೆಸ್ಸಿನ ಕೀಳು ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ದೇಶ ವಿಭಜನೆಯ ಸಂಧರ್ಭದಲ್ಲಿ ನಡೆದ ಲಕ್ಷಾಂತರ ಹಿಂದೂಗಳ ಹತ್ಯೆ ಮತ್ತು ಕಾಶ್ಮೀರದಲ್ಲಿ ನಡೆದ ಅಸಂಖ್ಯಾತ ಹಿಂದೂಗಳ ಮಾರಣ ಹೋಮಕ್ಕೆ ಯಾರು ಕಾರಣ ಎಂಬ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹಿಂದೂಗಳ ಬಗ್ಗೆ ಅತೀವ ದ್ವೇಷ ಭಾವನೆಯನ್ನು ಹೊಂದಿರುವ ಕಾಂಗ್ರೆಸ್ಸಿನ ಹಿಂದೂ ಧಮನ ನೀತಿಯನ್ನು ದೇಶವಾಸಿಗಳು ಚೆನ್ನಾಗಿಯೇ ಅರಿತಿದ್ದಾರೆ.

ದೇಶದ ಸಂವಿಧಾನದ ಬಗ್ಗೆ ಪುಂಖಾನುಪುಂಖವಾಗಿ ಮಾತಾಡುವ ರಾಹುಲ್ ಗಾಂಧಿ, ಸಂವಿಧಾನವನ್ನು ತಿದ್ದುಪಡಿ ಮಾಡಿ ಅದರಲ್ಲಿ ‘ಜಾತ್ಯಾತೀತ’ ಎಂಬ ಪದವನ್ನು ಸೇರ್ಪಡೆಗೊಳಿಸಿದವರು ಯಾರು ಎಂಬ ಬಗ್ಗೆ ಆಳವಾದ ಅಧ್ಯಯನ ನಡೆಸುವುದು ಉತ್ತಮ. ರಾಜ್ಯದ ಕೆಜೆ ಹಳ್ಳಿ, ಡಿಜೆ ಹಳ್ಳಿ ಗಲಭೆ ಸಹಿತ ದೇಶದೆಲ್ಲೆಡೆ ನಡೆಯುತ್ತಿರುವ ದೊಂಬಿ, ಹತ್ಯೆ, ಅಹಿಂಸೆಗೆ ಕುಮ್ಮಕ್ಕು ನೀಡುತ್ತಿರುವವರು ಯಾರು ಎಂಬ ಬಗ್ಗೆಯೂ ರಾಹುಲ್ ಗಾಂಧಿ ಗಂಭೀರ ಚಿಂತೆನೆ ನಡೆಸಿ ತನ್ನ ಪ್ರಬುದ್ಧತೆಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.

ಸಂಸತ್ತಿನಲ್ಲಿ ರಾಜಕೀಯ ಬಾಷಣ ಮಾಡಿರುವ ನಕಲಿ ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ, ಸನಾತನ ಧರ್ಮದ ಬಗ್ಗೆ ಅತೀವ ಶೃದ್ಧೆಯುಳ್ಳ ಅಹಿಂಸಾ ಪ್ರತಿಪಾದಕ ಸಹಿಷ್ಣು ಹಿಂದೂಗಳ ಬಗ್ಗೆ ಎಳ್ಳಷ್ಟೂ ಅರಿವಿಲ್ಲದೇ ಅವಮಾನಕಾರಿ ಮಾತುಗಳನ್ನಾಡಿರುವುದು ಹಾಗೂ ಹಿಂದೂಗಳು ಪೂಜಿಸುವ ಪರಮೇಶ್ವರನ ಚಿತ್ರವನ್ನು ಸಂಸತ್ತಿನಲ್ಲಿ ಪ್ರದರ್ಶಿಸಿ ತನ್ನ ಬಾಲಿಷ ವರ್ತನೆಯನ್ನು ಜಗಜ್ಜಾಹೀರುಪಡಿಸಿ ಹಿಂದೂಗಳಿಗೆ ಪೂಜ್ಯ ಭಾವನೆ ಇರುವ ತ್ರಿಶೂಲವನ್ನು ಕೂಡಾ ಅವಮಾನಿಸಿರುವುದು ಅತ್ಯಂತ ಖಂಡನೀಯ ಎಂದು ಅವರು ತಿಳಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರದಲ್ಲಿ ಇರುವುದಕ್ಕಿಂತ ವಿಪಕ್ಷದಲ್ಲಿ ಇರುವಾಗ ಹೆಚ್ಚು ಅಪಾಯಕಾರಿ’ ಎಂದು ಹೇಳಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಮಾತು ಇಂದು ನಿಜವಾಗುತ್ತಿದೆ. ಕಾಂಗ್ರೆಸ್ಸಿಗೆ ದೇಶದ ಸಂವಿಧಾನ, ಏಕತೆ, ಸಮಗ್ರತೆ ಹಾಗೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲ. ಕೇವಲ ದ್ವೇಷ ಮತ್ತು ಗೊಂದಲ ಮೂಡಿಸುವುದೇ ಕಾಂಗ್ರೆಸ್ ಉದ್ದೇಶ ಎಂಬುದು ಲೋಕ ಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ವರ್ತನೆಯಿಂದ ರುಜುವಾತಾಗಿದೆ. ದೇಶದ ಅಸ್ಮಿತೆ, ಮೂಲ ಸಮಾಜ, ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಘಾಸಿಗೊಳಿಸಿ, ಅವಮಾನಿಸಿರುವ ರಾಹುಲ್ ಗಾಂಧಿ ದೇಶದ ಸಮಸ್ತ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

 
 
 
 
 
 
 
 
 
 
 

Leave a Reply