ಬ್ರಹ್ಮಾವರ: ಹಾವಂಜೆಯ ದೊಂಪದಕುಮೇರಿ ಎಂಬಲ್ಲಿನ ನಿವಾಸಿ, ಆರೂರು ವಿಷ್ಣುಮೂರ್ತಿ ದೇವಸ್ಥಾನದ ನಿಕಟಪೂರ್ವ ಆಡಳಿತದ ಮೊಕ್ತೇಸರ, ಖ್ಯಾತ ವೈದ್ಯರೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಸಂಜೆ ನಡೆದಿದೆ.
ಡಾ। ಎಂ. ರಾಘವೇಂದ್ರ ರಾವ್ (76) ಹಾವಂಜೆ ಆತ್ಮಹತ್ಯೆ ಮಾಡಿಕೊಂಡವರು. ಇವರ ಪತ್ನಿ ಒಂದು ತಿಂಗಳ ಹಿಂದೆ ಮೃತರಾಗಿದ್ದು, ಆ ದಿನದಿಂದ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದು ಖಿನ್ನತೆಗೆ ಒಳಗಾಗಿದ್ದರು.
ಅವರಿಗೆ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಇದ್ದು ಅವರ ಎರಡು ಹೆಣ್ಣು ಮಕ್ಕಳು ಮಂಗಳೂರಿ ನಲ್ಲಿ ವಾಸಮಾಡಿಕೊಂಡಿದ್ದು ವಾರಕ್ಕೊಮ್ಮೆ ಬಂದು ಹೋಗಿ ಬರುತ್ತಿದ್ದರು.
ಇಂದು ಸಂಜೆ ತಮ್ಮ ಮನೆಯ ಕೋಣೆಯ ಜಂತಿಗೆ ಸೀರೆಯನ್ನು ಬಿಗಿದು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಒಬ್ಬರೇ ಮನೆಯಲ್ಲಿ ವಾಸ ಮಾಡಿಕೊಂಡಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಿಂದೆ ಉಡುಪಿ ಜಿಲ್ಲಾ ಡಿ ಹೆಚ್ ಒ ಆಗಿದ್ದ ಶ್ರೀಯುತರು ಹಲವಾರು ದೇವಸ್ಥಾನಗಳ ಜೀರ್ಣೋ ದ್ದಾರ ಕೆಲಸಗಳಲ್ಲಿ ತನ್ನನ್ನು ತಾನು ವಿಶೇಷವಾಗಿ ತೊಡಗಿಸಿಕೊಂಡಿದ್ದರು. ಜಿಲ್ಲೆಯ ದೇವಸ್ಥಾನಗಳಲ್ಲಿ ರಾಶಿಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದಾಗ ಭಜನಾ ತಂಡವನ್ನು ಕಟ್ಟಿಕೊಂಡು ನಿರಂತರ 24 ಗಂಟೆ ಭಜನೆಯ ಸೇವೆಯನ್ನು ನೀಡುತ್ತಿದ್ದರು. ಬಂಧು ಮಿತ್ರರು ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.