ರಾಜ್ಯದಲ್ಲಿ ಪೇಜಾವರ ಮಠಾಧೀಶರಂತಹ ಅನೇಕ ಮಹನೀಯರು ಸಮಯ , ಶ್ರಮ ಬಹಳಷ್ಟು ಎಲ್ಲ ತ್ಯಾಗ ಮಾಡಿ ಗೋರಕ್ಷಣೆಯ ಕಾರ್ಯದಲ್ಲಿ ನಿರತಾಗಿರುವುದು ಸಮಾಜದ ಸಭ್ಯತೆಯ ಲಕ್ಷಣ . ಇಂಥಹ ಮಾನವೀಯ ಹಾಗೂ ಪುಣ್ಯದ ಕಾರ್ಯಗಳಿಗೆ ಸಹಾಯ ನೀಡು ವುದು ಸಮಾಜ ಹಾಗು ಸರಕಾರಗಳ ಕರ್ತವ್ಯವಾಗಿದೆ . ಆದ್ದರಿಂದ ರಾಜ್ಯದ ಎ , ಬಿ ಗ್ರೇಡ್ ದೇವಳಗಳ ವಾರ್ಷಿಕ ಆದಾಯದ ಶೇಕಡಾ ಎರಡು ಆದಾಯವನ್ನು ವಾರ್ಷಿಕವಾಗಿ ಆಯಾ ಜಿಲ್ಲೆಗಳ ನೋಂದಾಯಿತ ಗೋಶಾಲೆಗಳಿಗೆ ನೆರವು ನೀಡಲು ಅನುವಾಗುವಂತೆ ಶೀಘ್ರ ಮುಖ್ಯ ಮಂತ್ರಿಗಳೊಂದಿಗೆ ಸಮಾಲೋಚಿಸಿ ಮುಜರಾಯಿ ಇಲಾಖೆಯ ಮೂಲಕ ಸುತ್ತೋಲೆ ಹೊರಡಿಸಲಾಗುವುದು ಎಂಬ ಮಹತ್ವದ ತೀರ್ಮಾನವನ್ನು ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಕಟಿಸಿದ್ದಾರೆ .
ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಕುಶಲೋಪರಿ ವಿಚಾರಿಸಲು ನೀಲಾವರ ಗೋಶಾಲೆಯ ಆವರಣದಲ್ಲಿರುವ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಗೋಶಾಲೆಗಳ ನಿರ್ವಹಣೆಯ ಕುರಿತಾಗಿ ಸುದೀರ್ಘ ಸಮಾ ಲೋಚನೆ ನಡೆಸಿ ಈ ತೀರ್ಮಾನ ಪ್ರಕಟಿಸಿದರು . ಹಿಂದೂ ನಂಬಿಕೆಯನುಸಾರ ಗೋವುಗಳಿಗೆ ಪ್ರತೀ ಮನೆಯಲ್ಲೂ ಆಶ್ರಯ ನೀಡಿ ನಿತ್ಯ ಗೋವುಗಳಿಗೆ ಆಹಾರ ನೀಡಿದ ಬಳಿಕವೇ ಮನೆಮಂದಿ ಆಹಾರ ಸ್ವೀಕರಿಸುವುದು ಕಡ್ಡಾಯ . ಆದರೆ ಪ್ರಸ್ತುತ ಮನೆಗಳಲ್ಲಿ ಗೋಸಾಕಣೆಗೆ ಜನ ಅನೇಕ ಕಾರಣಗಳಿಂದ ಹಿಂದೇಟು ಹಾಕುತ್ತಿದ್ದಾರೆ . ಆದ್ದರಿಂದ ಗೋಶಾಲೆಗಳಲ್ಲೇ ಗೋವುಗಳಿಗೆ ಆಶ್ರಯ ಎಂಬ ಸ್ಥಿತಿ ನಿರ್ಮಾಣ ವಾಗಿದೆ . ಆದರೆ ಇವುಗಳ ನಿರ್ವಹಣೆ ದೊಡ್ಡ ಸವಾಲಿನ ಕೆಲಸವಾಗಿದೆ . ಆದ್ದರಿಂದ ದೇವಳಗಳಲ್ಲಿನ ಭಕ್ತರ ಕಾಣಿಕೆಯ ಆದಾಯದ ಒಂದು ಭಾಗವನ್ನು ಗೋಶಾಲೆಗಳಿಗೆ ನೀಡುವುದರಿಂದ ಜನರಿಗೆ ಗೋಗ್ರಾಸ ನೀಡಿದ ಪುಣ್ಯವಾದರೆ ದೇವಳಗಳು ಗೋರಕ್ಷಣೆಯ ಕಾರ್ಯಕ್ಕೆ ಕೈ ಜೋಡಿಸಿದಂತಾಗುತ್ತದೆ ಹಾಗೂ ಗೋಶಾಲೆಗಳಿಗೆ ಒಂದಷ್ಟು ಆರ್ಥಿಕ ಶಕ್ತಿ ನೀಡಿದಂತಾಗುತ್ತದೆ . ನಮ್ಮೆಲ್ಲರ ಮಾರ್ಗ
ದರ್ಶಕರಾಗಿದ್ದ ದಿವಂಗತ ಡಾ ವಿ ಎಸ್ ಆಚಾರ್ಯರು ಈ ಹಿಂದೆ ಮಂತ್ರಿಗಳಾಗಿದ್ದಾಗ ಈ ಚಿಂತನೆ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ . ಶೀಘ್ರವೇ ಅದನ್ನು ಅನುಷ್ಢಾನಕ್ಕೆ ತರಲಾಗುವುದು ಎಂದು ಸಚಿವ ಕೋಟ ವಿವರಿಸಿದರು .
ಗೋಮಾಳ ಭೂಮಿ ಮೇವು ಬೇಳೆಸಲು ಗೋಶಾಲೆಗೆ : ಚಿಂತನೆ
ನೂರಾರು ಗೋವುಗಳನ್ನು ಪೋಷಿಸಲು ದೊಡ್ಡ ಪ್ರಮಾಣದ ಮೇವು ಅಗತ್ಯ ಇದೆ . ಆದ್ದರಿಂದ ಜಿಲ್ಲಾವಾರು ಲಭ್ಯ ಇರುವ ಗೋಮಾಳ ಭೂಮಿಗಳನ್ನು ಮೇವು ಬೆಳೆಸುವ ಉದ್ದೇಶಕ್ಕೆ ನೋಂದಾಯಿತ ಗೋಶಾಲೆಗಳಿಗೆ ನೀಡುವ ಕುರಿತಾಗಿಯೂ ಶೀಘ್ರವೇ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದು ಇದೇ ಸಂದರ್ಭ ಸಚಿವರು ತಿಳಿಸಿದರು . ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು