ಅಮ್ಮ ನನ್ನನ್ನು ಆಟ ಆಡಿಸುವಾಗ, ಉಣಿಸುವಾಗ, ತೂಗುವಾಗ, ರಮಿಸುವಾಗ, ರೇಗಿಸುವಾಗ ಹಾಡುತ್ತಲೇ ಇರುತ್ತಿದ್ದಳು. ಅಡುಗೆ ಮಾಡುವಾಗ ಮೈಸೂರು ಮಲ್ಲಿಗೆ (ಕೆಎಸ್ನ) ಕವಿತೆಗಳನ್ನು ಗುನುಗುತ್ತಿದ್ದಳು. ಇದನ್ನು ಎಳವೆಯಿಂದಲೇ ಕೇಳಿ ಕೇಳಿ ಅದಕ್ಕೆ ಟ್ಯೂನ್ ಆಗಿದ್ದ ನನ್ನ ಮನಸ್ಸು ಸಂಗೀತವನ್ನು (ಹಾಡುವುದನ್ನು) ಕಲಿ ಎಂದು ಒಳಗಿನಿಂದಲೇ ಪ್ರೇರಣೆ ನೀಡುತ್ತ ಇತ್ತು. ಒಳಮನದ ದನಿಗೆ ಓಗೊಟ್ಟ ನಾನು ‘ಅಮ್ಮಾ ನಾನೂ ಸಂಗೀತ ಕಲಿಯುತ್ತೇನೆ’ ಎಂದು ಕೇಳಿಕೊಂಡೆ. ಅಮ್ಮ ಸ್ಪಂದಿಸಿದಳು. ಅದೇ ನನಗೆ ಸಂಗೀತ- ಮತ್ತು ನಂತರ ನೃತ್ಯ ಕಲಿಕೆಗೆ ಪ್ರೇರಣೆ ನೀಡಿ ಈ ಮಟ್ಟಕ್ಕೆ ಬೆಳೆಸಿ ಮುನ್ನಡೆಸಿದೆ. – ಭರತನಾಟ್ಯ ಕಲಾವಿದೆ ಅರ್ಪಿತಾ ನಾಯಕ ಅವರು ಅತ್ಯಂತ ವಿನೀತರಾಗಿ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡು ಹೇಳುವ ಮಾತಿದು.
ಗುರು ಮಿತ್ರಾ ನವೀನ್ರಲ್ಲಿ ನೃತ್ಯ, ವಿದ್ವಾನ್ ನವೀನ್ ಅವರ ಬಳಿ ಶಾಸ್ತ್ರೀಯ ಗಾಯನ ಅಭ್ಯಾಸ ಈಕೆಯನ್ನು ಭರವಸೆಯ ಕಲಾವಿದೆಯನ್ನಾಗಿ ರೂಪಿಸಲು ವರವಾಯಿತು. ಗುರುವಿನ ಕೃಪೆಯನ್ನು ಪ್ರತಿ ಹಂತದಲ್ಲೂ ಸ್ಮರಿಸಿಕೊಳ್ಳುವ ಅರ್ಪಿತಾ, ಸಮರ್ಪಣಾ ಭಾವ ಇದ್ದರೆ ಮಾತ್ರ ಕಲೆ ಒಲಿಯುತ್ತದೆ ಎಂದು ಧನ್ಯತೆಯಿಂದ ಹೇಳುತ್ತಾರೆ.
ವೇದಿಕೆಗಳಲ್ಲಿ ಗುರುವಿನೊಂದಿಗೆ ಹೆಜ್ಜೆ: ನೃತ್ಯ ಕಲಿಯುತ್ತಲೇ ಗುರುವಿನೊಂದಿಗೆ ಅರ್ಪಿತಾ ಹಲವು ವೇದಿಕೆ ಕಾರ್ಯಕ್ರಮಗಳನ್ನೂ ನೀಡಿದ್ದಾರೆಂಬುದು ಗಮನಾರ್ಹ. ಮೈಸೂರು ದಸರಾ ಉತ್ಸವ, ನೂಪುರ ಉತ್ಸವ, ಕೃಷ್ಣ ಜಯಂತಿ, ನವರಾತ್ರಿ ಉತ್ಸವ- ನಾದ ನೃತ್ಯೋಪಾಸನಾ- ಇವುಗಳಲ್ಲಿ ಅರ್ಪಿತಾ ಅವರ ಸಹ ನರ್ತನ ಕಲಾಗಾರಿಕೆಯನ್ನು ಕಲಿಸಿತು. ಇದಲ್ಲದೇ ವಿಶೇಷ ನೃತ್ಯ ರೂಪಕ ಗಳಲ್ಲಿ ಅರ್ಪಿತಾ ಪಾತ್ರ ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಆದಿಪೂಜ್ಯಾದಲ್ಲಿ ಶಿವನಾಗಿ, ಧರ್ಮ ವಿಜಯದಲ್ಲಿ ರಾವಣನಾಗಿ, ಶ್ರೀಕೃಷ್ಣ ವಿಲಾಸದಲ್ಲಿ ಯಶೋದೆಯಾಗಿ ಈಕೆ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದು ಗಮನಾರ್ಹ.
ನಾನೂ ಶಿಕ್ಷಕಿ ಆಗಬೇಕು: ಇಂಜಿನಿಯರಿಂಗ್ (ಬಯೋ ಟೆಕ್ನಾಲಜಿ) ಪದವಿಯನ್ನು ಉತ್ತಮ ರ್ಯಾಂಕಿಂಗ್ನೊಂದಿಗೆ ಪೂರ್ಣ ಗೊಳಿಸಿದ ತಕ್ಷಣ ರಾಜಧಾನಿ ಬೆಂಗಳೂರಿನಲ್ಲಿ ಅನೇಕ ಕಂಪನಿಗಳು ಉದ್ಯೋಗದ ಆಫರ್ ನೀಡಿದವು. ಆದರೆ ಭರತನಾಟ್ಯದಲ್ಲಿ ವಿದ್ವತ್ ಪರೀಕ್ಷೆ ಪೂರ್ಣ ಮಾಡಲೇಬೇಕು ಎಂಬ ಹಟತೊಟ್ಟ ಅರ್ಪಿತಾ, ಮೈಸೂರನ್ನೇ ನೆಲೆ ಮಾಡಿಕೊಂಡರು. ಇಲ್ಲೇ ಉದ್ಯೋಗ ದೊರಕಿತು.
ಸಂಪನ್ನಗೊಳ್ಳಲಿದೆ ರಂಗಾರೋಹಣ: ಮೈಸೂರಿನ ನಾದ ವಿದ್ಯಾಲಯ ಅಕಾಡೆಮಿ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ ವಿದುಷಿ ಮಿತ್ರಾ ನವೀನ್ ಅವರ ಶಿಷ್ಯೆ ಅರ್ಪಿತಾ ನಾಯಕ ಭರತನಾಟ್ಯ ರಂಗಪ್ರವೇಶಕ್ಕೆ ಅಣಿಯಾಗಿದ್ದಾರೆ. ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಫೆ. 17ರ ಸಂಜೆ 5ಕ್ಕೆ ಆಯೋಜನೆಗೊಂಡಿರುವ ರಂಗಪ್ರವೇಶ ಕಾರ್ಯಕ್ರಮಕ್ಕೆ ಬೆಂಗಳೂರಿನ ನೃತ್ಯಗಂಗಾ ಪ್ರದರ್ಶನ ಕಲಾ ಕೇಂದ್ರದ ನಿರ್ದೇಶಕಿ ವಿದುಷಿ ರೂಪಶ್ರೀ ಮಧುಸೂದನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ಶಾಸಕ ಟಿ.ಎಸ್. ಶ್ರೀವತ್ಸ ಸಾಕ್ಷಿಯಾಗಲಿದ್ದಾರೆ.
![](https://karavalixpress.com/wp-content/uploads/2024/07/WhatsApp-Image-2024-07-14-at-6.54.03-PM.jpeg)
![](https://karavalixpress.com/wp-content/uploads/2024/07/adarsha.jpg)
![](https://karavalixpress.com/wp-content/uploads/2024/07/gandhi-hospital.jpg)
![](https://karavalixpress.com/wp-content/uploads/2024/07/Inchara.jpg)
![](https://karavalixpress.com/wp-content/uploads/2024/07/newcity.jpg)
![](https://karavalixpress.com/wp-content/uploads/2024/07/Prasad-netralaya.jpg)
![](https://karavalixpress.com/wp-content/uploads/2024/04/satyanath-ad.jpeg)
![](https://karavalixpress.com/wp-content/uploads/2023/11/WhatsApp-Image-2023-11-10-at-6.56.43-PM-300x300.jpeg)
![](https://karavalixpress.com/wp-content/uploads/2024/01/WhatsApp-Image-2024-01-13-at-12.44.55-PM.jpeg)