ಸುಶಾಸನ ಸಮಿತಿ ಗೌರವಾಧ್ಯಕ್ಷರಾಗಿ ಪೇಜಾವರಶ್ರೀ

ಉಡುಪಿ: ರಾಷ್ಟ್ರಪ್ರೇಮ, ಭಾರತೀಯ ಮೌಲ್ಯಗಳ ಪುನರುತ್ಥಾನ, ಗತ ಇತಿಹಾಸದ ಮರುಸೃಷ್ಟಿ ಇತ್ಯಾದಿ ಉದಾತ್ತ ಆಶಯಗಳೊಂದಿಗೆ ಪವನ ಕಿರಣಕೆರೆ ವಿರಚಿತ ‘ಕಾಶ್ಮೀರ ವಿಜಯ’ ಎಂಬ ವಿನೂತನ ಯಕ್ಷಗಾನ ತಾಳಮದ್ದಳೆ ಪ್ರಸಂಗ ರಚಿಸಿ ವಿವಿಧೆಡೆ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಸುಶಾಸನ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸುಶಾಸನ ಸಮಿತಿ ಗೌರವಾಧ್ಯಕ್ಷರಾಗಿ ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಕ್ಷೇತ್ರ ಟ್ರಸ್ಟ್‌ ವಿಶ್ವಸ್ಥರಾದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಗೌರವಾಧ್ಯಕ್ಷರಾಗಿದ್ದಾರೆ. ವಿವಿಧ ಕ್ಷೇತ್ರಗಳ ಅನುಭವಿಗಳನ್ನು ಸದಸ್ಯರನ್ನಾಗಿಸಲಾಗಿದೆ ಎಂದು ಯಕ್ಷ ಸಂಘಟಕ ಸುಧಾಕರ ಆಚಾರ್ಯ ತಿಳಿಸಿದ್ದಾರೆ.
ದೇಶದ ಜ್ಞಾನ ಸಂಪತ್ತು ಮತ್ತು ಸಂಸ್ಕತಿಗೆ ದೊಡ್ಡ ಕೊಡುಗೆ ನೀಡಿರುವ ಕಾಶ್ಮೀರದ ನೈಜ ಇತಿಹಾಸವನ್ನು ಪ್ರಭಾವಿ ಮಾಧ್ಯಮವಾದ ಯಕ್ಷಗಾನ ಪ್ರದರ್ಶನ ಹಾಗೂ ತಾಳಮದ್ದಳೆ ಮೂಲಕ ತಿಳಿಸಲುದ್ದೇಶಿಸಲಾಗಿದೆ.
ಜ. 14ರಂದು ಉಡುಪಿ ಹಾಗೂ 15ರಂದು ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದ್ದು ರಾಷ್ಟ್ರೀಯ ಚಿಂತಕರಿಂದ ಉಪನ್ಯಾಸ, ಸನ್ಮಾನ ಹಾಗೂ ಕಾಶ್ಮೀರ ವಿಜಯ ತಾಳಮದ್ದಳೆ ಏರ್ಪಡಿಸುವುದಾಗಿ ಮಂಗಳವಾರ ಪೇಜಾವರ ಮಠದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು ಎಂದು ಸುಧಾಕರ ಆಚಾರ್ಯ ತಿಳಿಸಿದ್ದಾರೆ.
ಕಾರ್ಯಕ್ರಮ ಆಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು ರಾಷ್ಟ್ರೀಯ ಪ್ರಜ್ಞೆ ಉದ್ದೀಪನಗೊಳಿಸುವಲ್ಲಿ ಕಾರ್ಯಕ್ರಮ ಪೂರಕವಾಗಲಿ ಎಂದು ಹಾರೈಸಿದರು.
ಪೇಜಾವರ ಮಠ ಪರ್ಯಾಯ ಸಂದರ್ಭ ಸ್ವರಾಜ್ಯ ವಿಜಯ ಹಾಗೂ ಹೈದರಾಬಾದ್ ವಿಜಯ ತಾಳಮದ್ದಳೆ ಸಂಘಟಿಸಿದ್ದನ್ನು ಶ್ರೀಪಾದರು ಸ್ಮರಿಸಿದರು.
ಸಭೆಯಲ್ಲಿ ಟಿ. ಶಂಭು ಶೆಟ್ಟಿ, ಪ್ತೊ. ಎಂ. ಎಲ್. ಸಾಮಗ, ವಿಷ್ಣುಮೂರ್ತಿ ಆಚಾರ್ಯ, ಜಯಕರ ಶೆಟ್ಟಿ ಇಂದ್ರಾಳಿ, ಪುರುಷೋತ್ತಮ ಭಂಡಾರಿ ಅಡ್ಯಾರು, ಪ್ರದೀಪ ಆಳ್ವ, ಭುವನಪ್ರಸಾದ ಹೆಗ್ಡೆ, ಡಾ. ವಿಟ್ಲ. ಹರೀಶ ಜೋಶಿ, ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಮೊದಲಾದವರಿದ್ದರು.

 
 
 
 
 
 
 
 
 
 
 

Leave a Reply