ವರ್ತಮಾನದ ಸಣ್ಣ ಕುತೂಹಲಗಳೇ ಭವಿಷ್ಯದ ದೊಡ್ಡ ಸಂಶೋಧನೆಗಳ ದಾರಿ ~ಡಾ ಪಿಕೆ ರಾಜಗೋಪಾಲ್

ಶಾಲಾ ಕಾಲೇಜುಗಳಲ್ಲಿ ನಡೆಯುವ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಎಚ್ಚರಿಸಿ ಅವರಲ್ಲಿ ಕುತೂಹಲವನ್ನುಂಟು ಸೃಷ್ಟಿ ಮಾಡುತ್ತವೆ ಇಂತಹ ವರ್ತಮಾನದ ಕುತೂಹಲಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳು ದೊಡ್ಡ ಸಾಧನೆ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಎಂಜಿಎಂ ಕಾಲೇಜಿನ ನಿವೃತ್ತ
ಸಸ್ಯಶಾಸ್ತ್ರಜ್ಞರಾದ ಡಾ ಪಿಕೆ ರಾಜಗೋಪಾಲ್ ಹೇಳಿದರು.

ಅವರು ಉಡುಪಿ ಅಜ್ಜರಕಾಡಿನ ಡಾ. ಜಿ ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ದಿನಾಂಕ 23-05-2024 ರಂದು ವಿಜ್ಞಾನ ಸಂಘದ ಸಹಯೋಗದಲ್ಲಿ ನಡೆದ Explore with You – 2024 ಎಂಬ ವಾರ್ಷಿಕ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ವರ್ತಮಾನದ ವಿದ್ಯಾರ್ಥಿಗಳ ಸಣ್ಣ ಸಣ್ಣ ಕುತೂಹಲಗಳೇ ದೊಡ್ಡ ದೊಡ್ಡ ಸಂಶೋಧನೆಗಳಾಗುತ್ತದೆ ಎಂದು ಹೇಳಿದರು.

ಈ ಹಿಂದೆ ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವು ಅಭೂತಪರ್ವ ಯಶಸ್ವಿಯಾಗಿದ್ದನ್ನು ನೆನಪಿಸಿಕೊಂಡ ಅವರು, ಈ ಕಾರ್ಯಕ್ರಮವು ಅಂತೆಯೇ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಭಾಸ್ಕರ ಶೆಟ್ಟಿ ಎಸ್ ಮಾತನಾಡಿ ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಪ್ರಶ್ನೆಯೇ ವಿಜ್ಞಾನದ ಮೂಲಾಧಾರ. ಕಾಲೇಜಿನಲ್ಲಿ ನೀಡಿದ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿಜ್ಞಾನ ನಿಕಾಯದ ಡೀನ್‌ ಆದ ಪ್ರೊ. ಕೆ. ಶ್ರೀಧರಪ್ರಸಾದ್ ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಕಾರ್ಯಕ್ರಮದ ವೈಶಿಷ್ಟ್ಯತೆಯ ಬಗ್ಗೆ ಪ್ರಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಶ್ರೀಮತಿ ಅಡಿಗ, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಡಾ. ವಾಣಿ ಆರ್ ಬಲ್ಲಾಳ್, ಗಣಕಶಾಸ್ತ್ರ
ವಿಭಾಗದ ಮುಖ್ಯಸ್ಥರಾದ ಡಾ ಮಣಿಭೂಷಣ್‌ ಡಿಸೋಜಾ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ. ಉದಯ ರಾಜ್ ಎಸ್ ಹಾಗೂ ವಿಜ್ಞಾನ ಸಂಘದ ಸಂಚಾಲಕರಾದ ಶ್ರೀ ಕೇಶವಮೂರ್ತಿ ಎಂ.ವಿ ಅವರು ಉಪಸ್ಥಿತರಿದ್ದರು. ಕುಮಾರಿ ಶ್ರೇಯ ಹಾಗೂ ಸಂಗಡಿಗರು ಪ್ರಾರ್ಥಿಸಿ ಕುಮಾರಿ ದಿಶಾ ಹಾಗೂ ನಾಗರತ್ನ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಎಲ್ಲಾ ವಿಜ್ಞಾನ ವಿಭಾಗಗಳಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇದೇ ದಿನ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿನಿಯರಿಗೆ ಬಹುಮಾನಗಳನ್ನು ವಿತರಿಸಲಾಯಿತು ಎಲ್ಲಾ ವಿಜ್ಞಾನ ವಿಭಾಗಗಳಿಂದ ಸೇರಿ ಒಟ್ಟು 53 ವಿವಿಧ ವಿಜ್ಞಾನ ಮಾದರಿಗಳು ಈ ದಿನ ಪ್ರದರ್ಶನಗೊಂಡವು.

 
 
 
 
 
 
 
 
 
 
 

Leave a Reply