ಉಡುಪಿ : ನಮ್ಮ ಹಿರಿಯರು ತಮ್ಮ ಸುತ್ತಲಿನ ಸಸ್ಯ ಸಂಪತ್ತಿನ ಮಹತ್ವ ಅರಿತಿದ್ದರು. ಅವುಗಳನ್ನು ಬಳಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದರು. ಪ್ರಸ್ತುತ ನಮ್ಮ ಹಿರಿಯರ ಸಸ್ಯ ಜ್ಞಾನದ ಬಗ್ಗೆ ಆಸಕ್ತಿ ವಹಿಸಿ ಅವುಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಅದಮಾರು ಮಠ ಶಿಕ್ಷಣ ಮಂಡಳಿ ಅಧ್ಯಕ್ಷ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಲಹೆ ನೀಡಿದರು.
ಪೂರ್ಣಪ್ರಜ್ಞ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ, ಕನ್ನಡ ವಿಭಾಗ ಮತ್ತು ರಕ್ಷಕ-ಶಿಕ್ಷಕ ಸಂಘ ಆಯೋಜಿಸಿದ್ದ `ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಲ್ಲಿ ಮನೆಮದ್ದುಗಳ ಪಾತ್ರ’ ಕುರಿತ ಯೂಟ್ಯೂಬ್ ಉಪನ್ಯಾಸದ ನೇರಪ್ರಸಾರ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲವ್ಯಕ್ತಿ ಮುನಿಯಾಲು ಗಣೇಶ ಶೆಣೈ, ನಮ್ಮ ಮನೆ ಎದುರು ತುಳಸಿ ಇದ್ದರೆ ಸರ್ವರೋಗದಿಂದಲೂ ಪಾರಾಗಬಹುದು ಎಂದು ಹಿಂದಿನವರು ಹೇಳಿದ್ದಾರೆ. ತುಳಸಿಯ ಬೇರಿನಲ್ಲಿ ಸರ್ವದೇವತೆಗಳು, ಕಾಂಡದಲ್ಲಿ ಪವಿತ್ರ ಕ್ಷೇತ್ರಗಳು, ತುದಿಯಲ್ಲಿ ವೇದಗಳು ಅಡಗಿವೆ ಎಂಬುದು ಹಿರಿಯರ ನಂಬಿಕೆ. ನಾವು ಮನೆಯಲ್ಲಿ ಬಳಸುವ ಬೆಳ್ಳುಳ್ಳಿ ಉತ್ತಮ ರೋಗನಿರೋಧಕ ಶಕ್ತಿ ಹೊಂದಿದೆ ಎಂದರು.
ಈಜಿಪ್ಟ್ ನಲ್ಲಿ ಪಿರಮಿಡ್ ಕೆಲಸಗಾರರು ಬೆಳ್ಳುಳ್ಳಿ ಸೇವಿಸಿ ಶಕ್ತಿ ಸಂಪಾದಿಸುತ್ತಿದ್ದರು. ಒಂದೊಮ್ಮೆ ಬೆಳ್ಳುಳ್ಳಿ ಸಿಗದಿದ್ದಾಗ ಕಾರ್ಮಿಕರು ಮುಷ್ಕರ ಹೂಡಿದ್ದರು. ನಾವು ಬಳಸುವ ಕಾಳುಮೆಣಸು ವಿದೇಶದಲ್ಲಿ ಹಿಂದಿನಿಂದಲೂ ಬಹಳ ಬೇಡಿಕಎ ಪಡೆದಿತ್ತು. ಕಾಳುಮೆಣಸಿಗೋಸ್ಕರ ಅದರ ಮೂಲ ಹುಡುಕುತ್ತಾ ಭಾರತದತ್ತ ಬಂದಾಗ ಅಮೇರಿಕ ದೇಶವನ್ನು ಕಂಡುಹಿಡಿಯಲಾಯಿತು ಎಂಬ ಉಲ್ಲೇಖವಿದೆ. ಹಾಗಾಗಿ ನಮ್ಮಲ್ಲಿ ಲಭ್ಯವಿರುವ ಔಷಧೀಯ ಗುಣಗಳುಳ್ಳ ಸಸ್ಯಸಂಪತ್ತುಗಳತ್ತ ನಾವು ಅರಿವು ಬೆಳೆಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಎ. ರಾಘವೇಂದ್ರ, ಉಪಪ್ರಾಂಶುಪಾಲ ಡಾ. ಪ್ರಕಾಶ ರಾವ್, ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ. ರಮೇಶ ಟಿ. ಎಸ್., ಭೌತಶಾಸ್ತ್ರ ವಿಭಾಗ ಉಪನ್ಯಾಸಕ ಅತುಲ್ ಭಟ್ ಇದ್ದರು.
ಕನ್ನಡ ವಿಭಾಗ ಮುಖ್ಯಸ್ಥ ಡಾ. ಶ್ರೀಕಾಂತ ಸಿದ್ಧಾಪುರ ಸ್ವಾಗತಿಸಿದರು.