೨೦೨೦ರಲ್ಲಿ ಜಗತ್ತಿಗೆ ಬಂದೆರಗಿದ ಕೊರೋನಾ ಮಹಾಮಾರಿಯ ದೆಸೆಯಿಂದ ಕೇವಲ ಅಂತರ್ಜಾಲದಲ್ಲಷ್ಟೇ ಪ್ರಸಾರಗೊಂಡ ಈ ವರುಷದ ಯುಗಾದಿಯ ಆಚರಣೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದವರು ವೀಣಾ ಬನ್ನಂಜೆ. ತನ್ನ ಅದ್ಭುತವಾದ ವಿಚಾರಧಾರೆಯಿಂದ ಕುಟುಂಬದ ಸದಸ್ಯರಿಗೆಲ್ಲ “ಯುಗಾದಿ ಹಬ್ಬದ ಆಚರಣೆ, ವೈಶಿಷ್ಟ್ಯ” ಇದರ ಬಗ್ಗೆ ಅಪರೂಪದ ವಿಚಾರಗಳನ್ನು ತಿಳಿಸುವುದರ ಮೂಲಕ ಕುಟುಂಬದ ಹಿರಿ-ಕಿರಿಯ ಮತ್ತು ಎಳೆಯ ಮನಸುಗಳಿಗೆ ಶುಭ ಹಾರೈಸಿದರು. ಮೊದಲಿಗೆ ಕುಟುಂಬದ ಯುವ ಸ್ಯಾಕ್ಸೋಫೋನ್ ಕಲಾವಿದ ಚಿಕಾಗೋದ ಸಿದ್ದಾರ್ಥ್ ರಾವ್ ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಗಳಿಗೆ ನಾಂದಿ ಹಾಡಿದರು.
ಮುಂದಿನ ಸುಮಾರು ಐದು ಘಂಟೆಗಳಿಗೂ ಮಿಕ್ಕಿ ಕುಟುಂಬದ ವಿವಿಧ ತಂಡಗಳಿಂದ ನಡೆದ ನೃತ್ಯ, ಗಾಯನ ಮತ್ತಿನ್ನಿತರ ಕಾರ್ಯಕ್ರಮಗಳು ಎರಡನೇ ವರುಷದ ಸಂಭ್ರಮಾಚರಣೆಯನ್ನು ಒಂದು ನೆನಪಿನಲ್ಲಿರಿಸಿಕೊಳ್ಳುವಂಥಾ ದಿನವನ್ನಾಗಿಸಿತು. ಕುಟುಂಬದ ಸದಸ್ಯರಷ್ಟೇ ಅಲ್ಲದೇ ಉಡುಪಿ ಮತ್ತು ಮಂಗಳೂರಿನ ಅನೇಕ ಕಲಾವಿದರು ತಾವಿದ್ದಲ್ಲಿಂದಲೇ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಿಕೊಟ್ಟು ಸಾಂಸ್ಕೃತಿಕ ಕಾರ್ಯಕ್ರಗಳಿಗೆ ಇನ್ನಷ್ಟೂ ಕಳೆ ಮೂಡಿಸುವುದರಲ್ಲಿ ಯಶಸ್ವಿಯಾದರು.
ಜಗತ್ತಿನೆಲ್ಲೆಡೆಯಿಂದ ಹರಿದು ಬಂದ ಅನೇಕ ಗಣ್ಯರ ಮತ್ತು ಕುಟುಂಬದ ಆಡಳಿತ ಮಂಡಳಿಯಿಂದ ಕಾರ್ಯಕ್ರಮದುದ್ದಕ್ಕೂ ಆಗಾಗ್ಗೆ ಮೂಡಿ ಬರುತ್ತಿದ್ದ ಶುಭಸಂದೇಶ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ವೀಕ್ಷಿಸುತ್ತಿದ್ದ ಕುಟುಂಬದ ಸುಮಾರು ಐದುನೂರರಷ್ಟು ವೀಕ್ಷಕ ಸದಸ್ಯರಿಗೆ ತಾವೇ ನೀರೆರೆದು ನೆಟ್ಟ ಚಿಕ್ಕದಾದ ಗಿಡವೊಂದು ಶೀಘ್ರದಲ್ಲಿಯೇ ಬೆಳೆದು ಹೆಮ್ಮರವಾಗಿ ನಿಲ್ಲುವ ಕುರುಹನ್ನು ಕೇವಲ ಒಂದೇ ವರುಷದಲ್ಲಿ ನೀಡಿದ್ದು ಆಶ್ಚರ್ಯವಲ್ಲ.
ಸಾಂಸ್ಕೃತಿಕ ಸಮಿತಿಯ ನೇತೃತ್ವದಲ್ಲಿ ಸುಮಾರು ನಾಲ್ಕು ವಾರಕ್ಕೂ ಅಧಿಕವಾಗಿ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿಯು ಯಶಸ್ವೀ ಪ್ರಸಾರಗೊಳ್ಳುವುದರೊಂದಿಗೆ ಎಲ್ಲರ ಮನ್ನಣೆಗೆ ಪಾತ್ರವಾಯಿತು. ಇದುವರೆಗೆ ಯೂಟ್ಯೂಬಿನಲ್ಲಿ ಅಂದಿನ ಕಾರ್ಯಕ್ರಮವನ್ನು ಸುಮಾರು ಒಂದು ಸಾವಿರದ ಮುನ್ನೂರಕ್ಕೂ ಹೆಚ್ಚು ವೀಕ್ಷಕರು ವೀಕ್ಷಿದ್ದಾರೆ. ವರದಿ~ ಶ್ರೀವತ್ಸ ಬಲ್ಲಾಳ, ಹಿರಿಯರ ಚಾವಡಿ ಮತ್ತು ಯುವ ವೇದಿಕೆ, ಶಿವಳ್ಳಿ ಕುಟುಂಬ ಆಫ್ ನಾರ್ಥ್ ಅಮೇರಿಕಾ