ಶ್ರೀ ಎಡನೀರು ಮಠದ ನೂತನ‌ ಯತಿಗಳ ಪೀಠಾರೋಹಣ 

ಕರ್ನಾಟಕ ಸರಕಾರದ ಗೌರವ ಸಮರ್ಪಿಸಿದ ಕೋಟ ಶ್ರೀನಿವಾಸ ಪೂಜಾರಿ.  ಕರ್ನಾಟಕದ ಗಡಿ ಜಿಲ್ಲೆ ಕಾಸರಗೋಡಿನ ಸಮೀಪದ ಪ್ರಾಚೀನ‌ಧರ್ಮಪೀಠ ಶ್ರೀ ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಬುಧವಾರ ಶ್ರೀ ಮಠದಲ್ಲಿ ವೈಭವದಿಂದ ನೆರವೇರಿತು. 
ಶ್ರೀ ಕಂಚಿ ಮಠದ ವೈದಿಕರ ಹಾಗೂ ಶ್ರೀ ಮಠದ ವೈದಿಕರ ನೇತೃತ್ವದಲ್ಲಿ ವಿವಿಧ ಯಾಗ ಹೋಮ ಸಹಿತ ಧಾರ್ಮಿಕ ವಿಧಿಗಳು ನೆರವೇರಿದವು . ಬಳಿಕ ವೇದಘೋಷ ವಾದ್ಯಗಳ ಸಹಿತ ಶ್ರೀಗಳವರ ಪೀಠಾರೋಹಣ ವಿಧಿ ಪಟ್ಟಾಭಿಷೇಕ ನೆರವೇರಿತು . ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಪೇಜಾವರ ಮಠ  ಸಹಿತ ಕರ್ನಾಟಕ ಹಾಗೂ ಕೇರಳ ರಾಜ್ಯಗಳ  ವಿವಿಧ ಮಠ ಸಂಸ್ಥಾನಗಳ ವತಿಯಿಂದ ನೂತನ ಶ್ರೀಗಳವರಿಗೆ ಪಟ್ಟದ ಗೌರವಗಳು ಸಮರ್ಪಣೆಯಾಯಿತು .     
ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸರಕಾರದ ಪರವಾಗಿ ಹಿಂದೂ ಧರ್ಮಾದಾಯ ದತ್ತಿ , ಮುಜರಾಯಿ ಹಾಗೂ ಮೀನುಗಾರಿಕೆ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿಯವರು ಸಮಾರಂಭದಲ್ಲಿ ಭಾಗವಹಿಸಿ ರಾಜ್ಯ ಸರಕಾರದ ಪರವಾಗಿ ಭಕ್ತಿ ಗೌರವ ಸಹಿತ ಮುಖ್ಯಮಂತ್ರಿಯವರ ಶುಭ ಸಂದೇಶವನ್ನು ಅರ್ಪಿಸಿ ದರು.
ಕೇಂದ್ರದ ಸರಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ  ವಿ ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಮಂತ್ರಿಗಳಾದ ಪ್ರಹ್ಲಾದ್ ಜೋಷಿಯವರು ಕಳಿಸಿದ ಶುಭ  ಸಂದೇಶ ಪತ್ರಗಳನ್ನೂ ಪೂಜಾರಿಯವರು ಹಸ್ತಾಂತರಿಸಿದರು.

ವಿಶ್ವ ಹಿಂದು ಪರಿಷತ್ತಿನ ಪರವಾಗಿ ರಾಷ್ತ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರ ಅವರು ಕಳಹಿಸಿದ ಸಂದೇಶವನ್ನು ಪೇಜಾವರ ಮಠದ ದಿವಾನರಾದ ಎಂ ರಘುರಾಮಾಚಾರ್ಯರು ಸಲ್ಲಿಸಿದರು. ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್, ಎಸ್ ವಿ ಭಟ್ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply