ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗೆ ಕಾಂಚಿ ಶ್ರೀಗಳಿಂದ ಸನ್ಯಾಸ ದೀಕ್ಷೆ

ಕಾಸರಗೋಡು: ಅ.26ರ ಸೋಮವಾರದಂದು ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗ ಳವರ ಉತ್ತರಾಧಿಕಾರಿಯಾಗಿ ಪೀಠ ಏರಲಿರುವ ಶ್ರೀ ಜಯರಾಮ ಮಂಜತ್ತಾಯರು (ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು) ವಿಜಯ ದಶಮಿಯ ಶುಭ ಮುಹೂರ್ತದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು.

ಸೋಮವಾರ ಮುಂಜಾನೆ ತಮಿಳುನಾಡಿನ ಕಾಂಚಿ ಕಾಮಕೋಟಿ ಸನ್ನಿಧಿಯಲ್ಲಿ ಕಾಂಚಿ ಕಾಮಕೋಟಿಯ ಪೀಠಾಧಿಪತಿ ಗಳಾದ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಸನ್ಯಾಸ ದೀಕ್ಷೆ ನೀಡಿರರು. ಅದರೊಂದಿಗೆ ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ನೂತನ ಯತಿವರ್ಯರಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಪ್ರಣವ ಮಂತ್ರವನ್ನೂ ಬೋಧಿನೆ ಮಾಡಿದರು.

ಇನ್ನು ಭಾನುವಾರದಿಂದಲೇ ಸನ್ಯಾಸ ದೀಕ್ಷೆಯ ಪೂರ್ವಭಾವಿ ಕಾರ್ಯಕ್ರಮಗಳು ಕಾಂಚಿ ಕಾಮಕೋಟಿ ಪೀಠದಲ್ಲಿ ಪ್ರಾರಂಭವಾಗಿದ್ದವು. ಸನ್ಯಾಸ ದೀಕ್ಷೆಯ ಪೂರ್ವಕರ್ಮಗಳನ್ನು ಪೂರೈಸಿದ ಜಯರಾಮ ಮಂಜತ್ತಾಯರು, ರಾತ್ರಿ ವಿರಜಾ ಹೋಮಕ್ಕೆ ಅಗ್ನಿ ಪ್ರತಿಷ್ಠಾಪಿಸಿದರು. ನಿಯಮದಂತೆ ರಾತ್ರಿಯಿಡೀ ಜಾಗರಣೆ ಕುಳಿತು ಪ್ರಾತಃಕಾಲದಲ್ಲಿ ವಿರಜಾ ಹೋಮ ವನ್ನು ಶ್ರದ್ಧಾಭಕ್ತಿಯಿಂದ ನಡೆಸಿದರು.

ಇಂದು ವಿಜಯ ದಶಮಿಯ ಸುಮುಹೂರ್ತದಲ್ಲಿ ಸನ್ಯಾಸ ದೀಕ್ಷೆಯ ಪ್ರಮುಖ ಘಟ್ಟದ ಕಾರ್ಯಕ್ರಮಗಳು ನಡೆದವು. ಜಲಾಶಯ ದಲ್ಲಿ ಮಿಂದು ತಮ್ಮ ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನೆಲ್ಲಾ ಬಿಸುಟಿ ಬಂದ ಶಿಷ್ಯ ನಿಗೆ ಕಾಂಚಿ ಕಾಮಕೋಟಿಯ ಪೀಠಾಧಿಪತಿಗಳಾದ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಾಷಾಯ ವಸ್ತ್ರ ದಂಡ ನೀಡಿ ಕಾಂಚಿ ದೇವಾಲಯಕ್ಕೆ ಕರೆದು ಕೊಂಡು ಹೋದರು.

ಶಾರ್ವರಿನಾಮ ಸಂವತ್ಸರದ ದಕ್ಷಿಣಾಯಣ ಶರತ್ ಋತು ನಿಜ ಆಶ್ವಯುಜಯುಕ್ತ , ತುಲಾಮಾಸ, ಶುಕ್ಲಪಕ್ಷ ದಶಮಿ ಯಂದು ಪೂರ್ವಾಹ್ನ 10.30 ರ ಧನುರ್ಲಗ್ನದಲ್ಲಿ ಶ್ರೀ ಕಾಮಾಕ್ಷಿ ದೇವಿಯ ಸನ್ನಿಧಿಯಲ್ಲಿ ಗುರುಗಳಿಂದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರಿಗೆ ಕಿವಿಯಲ್ಲಿ ಪ್ರಣವ ಮಂತ್ರದ ಗುರುಗಳು ಉಪದೇಶಗೈದರು.

ಅ.27ರ ಮಂಗಳವಾರದಂದು ಎಡನೀರು ಪುರ ಪ್ರವೇಶ ಮಾಡಲಿರುವ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಅ.28ರಂದು ಬುಧವಾರ ಎಡನೀರು ಮಠದಲ್ಲಿ ಪೀಠಾರೋಹಣಗೈಯಲಿದ್ದಾರೆ. ಸನ್ಯಾಸ ದೀಕ್ಷೆಗೂ ಪೂರ್ವದಲ್ಲಿ 50ರ ಹರೆಯದ ಶ್ರೀ ಜಯರಾಮ ಮಂಜತ್ತಾಯರು ಸುಮಾರು 150 ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ದೈವ ದೇವರ ಅನುಗ್ರಹ ಪಡೆದಿದ್ದರು. ಇದರೊಂದಿಗೆ ದ್ವೈತಾದ್ವೈತ, ವಿಶಿಷ್ಟಾದ್ವೈತ ಪರಂಪರೆಯ ಪೀಠಾಧಿಪತಿಗಳ ಆಶೀರ್ವಾದವನ್ನು ಪಡೆದಿದ್ದರು.

 
 
 
 
 
 
 
 
 

Leave a Reply