ಉಡುಪಿ: ಕರಾವಳಿಯ ಮೀನುಗಾರರಿಗೆ ಆರಾಧ್ಯ ದೇವರಾದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮಗ್ರ ಜೀರ್ಣೊದ್ದಾರ ಪ್ರಯುಕ್ತ ದಿ. 12-02-2021ರ೦ದು ಶುಕ್ರವಾರ ಬೆಳಿಗ್ಗೆ ಗಣಹೋಮ, ಚ೦ಡಿಕಾ ಹೋಮ, ಸಾಯ೦ಕಾಲ ಶ್ರೀ ಚಕ್ರ ಪೂಜೆ, ದಿ. 13-02-2021ರ೦ದು ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಸರ್ವ ಸೇವೆ, ನಾಗ ಬಿಂಬ ಸಂಕೋಚ, ರಾತ್ರಿ ಬಲಿ ಸೇವೆ ಮತ್ತು ಬಾಲಾಲಯದಲ್ಲಿ ವಾಸ್ತು ಹೋಮ ನಡೆಯಲಿದೆ. ದಿ. 14-02-2021ರ೦ದು ಆದಿತ್ಯವಾರ ಬೆಳಿಗ್ಗೆಯಿಂದ ಶ್ರೀ ಮಹಾಲಕ್ಷ್ಮಿ, ಗಣಪತಿ, ಭದ್ರಕಾಳಿ ದೇವರ ಸಂಕೋಚ ಮತ್ತು ಅಧಿವಾಸ ಪ್ರಕ್ರಿಯೆಗಳು ನಡೆಯಲಿದ್ದು, ದಿ. 15-02-2021ರ೦ದು ಸೋಮವಾರ ಬೆಳಿಗ್ಗೆ 8.55ಕ್ಕೆ ಬಾಲಾಲಯದಲ್ಲಿ ದೇವರ ಪ್ರತಿಷ್ಟೆ ಜರುಗಲಿದೆ.
ಬಳಿಕ ದೇವಸ್ಠಾನದ ಗರ್ಭಗುಡಿಯ ಶಿಖರ ವಿಸರ್ಜನೆಗೊಳಿಸಿ ಕರಸೇವೆಯ ಮೂಲಕ ದೇವಸ್ಠಾನವನ್ನು ವಿಸರ್ಜಿಸಲಾಗುವುದು. ದಿ. 21-02-2021ರ೦ದು ಬೆಳಿಗ್ಗೆ 8.30ಕ್ಕೆ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ನೂತನ ಶಿಲಾಮಯ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿಸಿ ಬಳಿಕ ಆಶೀರ್ವಚನ ನೀಡಲಿದ್ದಾರೆ. ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ ಜಿ ಶಂಕರ್ ಮುಂದಾಳತ್ವದಲ್ಲಿ, ಕ್ಷೇತ್ರದ ತಂತ್ರಿಗಳಾದ ಕುಕಿಕಟ್ಟೆ ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಠಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನ ನಡೆಯಲಿದೆ.
ದಿ. 21-02-2021ರ ಆದಿತ್ಯವಾರದ೦ದು ಜರಗುವ ಶ್ರೀ ಮಹಾಲಕ್ಷ್ಮಿ ದೇವರ ನೂತನ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮದಂದು ಎಲ್ಲಾ ಮೊಗವೀರರು ಕಡ್ಡಾಯವಾಗಿ ರಜೆಯನ್ನು ಆಚರಿಸಿ ರಥೋತ್ಸವದ ಕಾರ್ಯಕ್ರಮದಲ್ಲಿ ಬಾಗವಹಿಸುವ೦ತೆ ದ.ಕ ಮೊಗವೀರ ಮಹಾಜನ ಸ೦ಘದ ಅಧ್ಯಕ್ಷರಾದ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷ ಗುಂಡು ಬಿ. ಅಮೀನ್, ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್ ತಿಳಿಸಿದರು.