ಪರಿಶುದ್ಧ ಮನಸ್ಸಿನ ಸಂಕಲ್ಪದಿಂದ, ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯ ಪ್ರದವಾದ ಧಾರ್ಮಿಕ ಕಾರ್ಯಗಳಿಂದ ದೇವತಾನುಗ್ರಹ ಪ್ರಾಪ್ತಿಯಾಗಿ ಧನ್ಯತಾ ಭಾವ ಮೂಡುವುದು. ಆ ನಿಟ್ಟಿನಲ್ಲಿ ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ನಡೆಯಲಿರುವ ರಾಶಿಪೂಜಾ ಮಹೋತ್ಸವದಲ್ಲಿ ನಾವೆಲ್ಲ ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಯಶಸ್ಸಿಗೆ ಶ್ರಮಿಸೋಣ ಎಂದು ಮೀನುಗಾರರ ಹಿರಿಯ ಮುಂದಾಳು ಕಾಂತಪ್ಪ ಕರ್ಕೇರ ರವರು ಹೇಳಿದರು.
ಅವರು ಕೊಡವೂರು ಶ್ರೀ ಶಂಕರನಾರಾಯಣ ದೇಗುಲದಲ್ಲಿ 2021ರ ಫೆಬ್ರವರಿ 4 ರಂದು ನಡೆಯಲಿರುವ ರಾಶಿಪೂಜಾ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ನಡೆದ ಗ್ರಾಮಸ್ಥರ ಸಭೆಯಲ್ಲಿ ಅವರು ಮಾತನಾಡಿದರು. ದೇವಳದ ಪ್ರಧಾನ ತಂತ್ರಿ ವೇದಮೂರ್ತಿ ಪುತ್ತೂರು ಹಯವದಸ ತಂತ್ರಿಗಳು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಶುಭ ಹಾರೈಸಿದರು. ಶ್ರೀ ಶಂ ಭಕ್ತವ್ರಂದದ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯ ವಿಜಯ ಕೊಡವೂರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಕೊನೆಯಲ್ಲಿ ರಾಶಿಪೂಜಾ ಮಹೋತ್ಸವಕ್ಕೆ ಸಾಂಕೇತಿಕವಾಗಿ ಹುಂಡಿ ಹಣ ಸಮರ್ಪಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು ಸ್ವಾಗತಿಸಿದರು. ಸದಸ್ಯ ಜನಾರ್ದನ್ ಕೊಡವೂರು ಪ್ರಸ್ತಾವನೆಗೈದರು. ಸತೀಶ್ ಕೊಡವೂರು ನಿರೂಪಿಸಿದರು. ಬಾಲಕೃಷ್ಣ ಕೊಡವೂರ ವಂದಿಸಿದರು.