ಈಮಧ್ಯೆ, ಜಮೀನು ಖರೀದಿ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಷಯ ತಿಳಿಯುವ ಹಿನ್ನೆಲೆಯಲ್ಲಿ ಟ್ರಸ್ಟ್ ಕಾರ್ಯದರ್ಶಿ, ಖಜಾಂಚಿ ಮತ್ತಿತರ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಎಲ್ಲರೂ ಒಂದಾಗಿ ಈ ವಿಚಾರದಲ್ಲಿ ಚರ್ಚಿಸಿ, ಮುಂದಿನ 2 ದಿನದೊಳಗೆ ಸಂಪೂರ್ಣ ಮಾಹಿತಿ ತೆರೆದಿಡಲಿದ್ದಾರೆ ಎಂದು ಶ್ರೀಗಳು ತಿಳಿಸಿದರು.
ಮಂದಿರ ನಿರ್ಮಾಣ ಪೂರ್ವಭಾವಿ ಸ್ಥಳ ದೃಢತೆ ಪರಿಶೀಲನ ಕಾರ್ಯ ಮುಂದುವರಿದಿದೆ ಎಂದೂ ಶ್ರೀಪಾದರು ತಿಳಿಸಿದರು. ಅದಕ್ಕೂ ಮುನ್ನ ಶ್ರೀರಾಮ ಲಲ್ಲಾನ ತಾತ್ಕಾಲಿಕ ಗುಡಿಗೆ ತೆರಳಿದ ಪೇಜಾವರ ಶ್ರೀಗಳು ಶ್ರೀರಾಮ ದರ್ಶನ ಪಡೆದರು.ದೇವರಿಗೆ ಪುಷ್ಪಾರ್ಚನೆ ಮತ್ತು ಚಾಮರ ಸೇವೆ ಮಾಡಿದರು. ಬಳಿಕ ಅಲ್ಲಿಂದ ಮಂದಿರ ನಿರ್ಮಾಣ ಮಾಡುವ ಬುನಾದಿ ತುಂಬಿಸುವ ಸ್ಥಳಕ್ಕೆ ತೆರಳಿ, ಅಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ವಿಶ್ವಸ್ಥ ಡಾ. ಅನಿಲ್ ಮಿಶ್ರಾ, ಮಂದಿರ ನಿರ್ಮಾಣ ಉಸ್ತುವಾರಿ ತಂಡದ ಗೋಪಾಲ ನಾಗರಕಟ್ಟೆ, ಮಂದಿರ ನಿರ್ಮಾಣ ಸಂಸ್ಥೆ ಎಲ್ ಆ್ಯಂಡ್ ಟಿ ಮತ್ತು ಮೇಲುಸ್ತುವಾರಿ ಸಂಸ್ಥೆ ಟಾಟಾ ಕನ್ಸಲ್ಟನ್ಸಿಯ ಇಂಜಿನಿಯರ್ ಗಳು, ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣ ಮೊದಲಾದವರಿದ್ದರು.