ಒಗ್ಗಟ್ಟು, ಶಿಸ್ತು ಹಾಗೂ ‘ದುಡಿಮೆಯಲ್ಲಿ ಸರ್ವರಿಗೂ ಸಮಪಾಲು ಸಮಬಾಳು’ ಎಂಬ ವಾಕ್ಯವನ್ನು ಪಾಲಿಸಿಕೊಂಡು ಬಂದಿರುವ ಮೊಗವೀರರು ಪರಮ ದೈವ ಭಕ್ತರೂ ಆಗಿದ್ದಾರೆ. ಭವ್ಯ ಪರಂಪರೆಯಿದ್ದ ಮೊಗವೀರ ಸಮಾಜದ ಮೂಲ ದೇವಸ್ಥಾನವು ಬಾರಕೂರಿನ ಬೆಣ್ಣೆಕುದ್ರುವಿನಲ್ಲಿದೆ.
ಶತ ಶತಮಾನದ ಇತಿಹಾಸವಿರುವ ಈ ದೇವಸ್ಥಾನವು ಅವಿಭಜಿತ ದ.ಕ. ಜಿಲ್ಲೆಯಲ್ಲಿಯೇ ಗುರುಪರಂಪರೆ ಇದ್ದ ಏಕೈಕ ದೇವಸ್ಥಾನವಾಗಿದ್ದು, ನಮ್ಮ ಪೂರ್ವಜರು ಸಮಾಜದ ಸಂಘಟನೆಗೆ ಹಾಕಿದ ಭದ್ರ ಬುನಾದಿಯಾಗಿದೆ. ಇಲ್ಲಿ ಪೂಜಿಸಲ್ಪಡುವ ನಮ್ಮ ಕುಲದೇವಿಯಾದ ಶ್ರೀ ಕುಲಮಹಾಸ್ತಿ ಅಮ್ಮ, ಅನ್ನಪೂರ್ಣ-ಭದ್ರಕಾಳಿ-ಮಾರಿಯಮ್ಮ -ದುರ್ಗೆ ಮತ್ತು ಪ್ರತಿಬಿಂಬ ಸ್ವರೂಪಿಣಿಯರ ಐಕ್ಯಶಕ್ತಿ. ಹಾಗೆಯೇ ವೀರಭದ್ರ ದೇವರೂ ಕೂಡಾ ನಾಗ-ಬ್ರಹ್ಮ-ರಕ್ತೇಶ್ವರಿ-ನಂದಿ, ಶ್ರೀಅಜ್ಜಮ್ಮ ಮತ್ತು ಕ್ಷೇತ್ರ ಪಾಲರನ್ನೊಳಗೊಂಡ ಪಂಚ ದೈವಿಕ ಸ್ಥಾನ.
ಜೀರ್ಣಾವಸ್ಥೆಯಲ್ಲಿದ್ದ ಈ ದೇವಸ್ಥಾನವು ನಾಡೋಜ ಡಾ| ಜಿ. ಶಂಕರ್ರವರ ನೇತೃತ್ವದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಮತ್ತು ಸಮಾಜದ ಸರ್ವರ ಸಹಕಾರದೊಂದಿಗೆ 2004ರಲ್ಲಿ ಸಮಗ್ರ ಜೀಣೋದ್ಧಾರಗೊಂಡಿ ರುವುದು ಈಗ ಇತಿಹಾಸ. ಮೊಗವೀರರ ಕುಲ ಗುರುಗಳಾದ ಮಾಧವ ಮಂಗಲ ಪೂಜ್ಯರು ಕೂಡಾ ಇಲ್ಲಿರುವುದು, ಗುರುಪೀಠ ಸ್ಥಾಪನೆ ಹಾಗೂ ನಾಗರಕೋಯಿಲ್ ಮಾದರಿಯ ನಾಗಾಲಯ ಹಾಗೂ ಸಮುದಾಯ ಭವನ ಬೆಣ್ಣೆಕುದ್ರುವಿನ ಐತಿಹಾಸಿಕ ಪುರಾಣಕ್ಕೆ ಸಾಕ್ಷಿ.
ಈ ದೇವಸ್ಥಾನದ ಜೀರ್ಣೋದ್ಧಾರ ಜಿ. ಶಂಕರ್ ನೇತೃತ್ವದಲ್ಲಿ ಆದ ನಂತರ ಬಗ್ವಾಡಿ ಮಹಿಷಾಸುರ ಮರ್ಧಿನಿ, ಉಳ್ಳಾಲದ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೊದ್ಧಾರಗೊಂಡು ಸಮಸ್ತ ಮೊಗವೀರರು ಕೂಡಾ ಉತ್ತಮ ಸ್ಥಿತಿಯಲ್ಲಿರುವುದು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಕೂಡಾ ಮುಂದುವರೆದಿದೆ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ.
ಬೆಳೆಯುತ್ತಿರುವ ಸಮಾಜದ ಬಗ್ಗೆ ಚಿಂತನೆ ನಡೆಸಿರುವ ಅಂದಿನ ಸಮಾಜದ ಮುಂದಾಳುಗಳು, ಸಂಪರ್ಕ ಮತ್ತು ಸಾರಿಗೆ ಕೊರತೆ ಒಂದು ಕಡೆಯಾದರೆ ಬೆಣ್ಣೆಕುದ್ರುವಿನ ಪುಟ್ಟ ದ್ವೀಪದಲ್ಲಿದ್ದ ಕುಲದೇವಿಯ ದೇವಸ್ಥಾನದ ವಠಾರ ದಲ್ಲಿ ಸ್ಥಳಾವಕಾಶದ ಕೊರತೆ, ಇದ್ದು ಹಿಂದಿನ ದಿನಗಳಲ್ಲಿ ಸೇತುವೆ ಸೌಲಭ್ಯವಿಲ್ಲದೆ ಹಲವಾರು ನದಿಗಳನ್ನು ದೋಣಯ ಮೂಲಕ ದಾಟಿ ದೇವಸ್ಥಾನಕ್ಕೆ ತಲುಪುವುದು ಕಷ್ಟದ ಕೆಲಸವಾಗಿತ್ತು. ಮುಂದೆ ಉತ್ಸವಾದಿ ಸಮಯದಲ್ಲಿ ಸಮಗ್ರ ಸಮಾಜ ಬಾಂಧವರು ಸೇರಿದಾಗ ಸಮಸ್ಯೆ ಉಂಟಾಗಬಹುದೆಂದು ಊಹಿಸಿ ಎಲ್ಲಾ ಗ್ರಾಮದವರಿಗೆ ಅನುಕೂಲಕರವಾಗು ವಂತೆ ಬಾರ್ಕೂರು–ಮಂಗಳೂರು ಹೋಬಳಿಯ ಭಾಗದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವನ್ನು ಸ್ಥಾಪಿಸಬೇಕೆನ್ನುವ ಅಗತ್ಯವನ್ನು ಮನಗಂಡರು.
ಪರಿಣಾಮವಾಗಿ ಉಚ್ಚಿಲದಲ್ಲಿ 1957 ರಲ್ಲಿ ದ.ಕ. ಮೊಗವೀರ ಮಹಾಜನ ಸಂಘದ ಅಂದಿನ ಅಧ್ಯಕ್ಶರಾದ ದಿ| ಸದಿಯ ಸಾಹುಕಾರರ ಮುಂದಾಳು ತನದಲ್ಲಿ ಉಚ್ಚಿಲದಲ್ಲಿ ಅವರೇ ದಾನವಾಗಿ ನೀಡಿದ 14 ಎಕ್ರೆ ವಿಶಾಲ ಸ್ಥಳದಲ್ಲಿ ಸಮಸ್ತ ಮೊಗವೀರರ ಆಶಯದಂತೆ ವೇದಮೂರ್ತಿ, ಆಗಮ ತಜ್ಞ ದಿ| ರಾಮಕೃಷ್ಣ ತಂತ್ರಿ (ಕಾಳು ತಂತ್ರಿ) ಯವರ ಪ್ರಧಾನ ಆಚಾರ್ಯತ್ವದಲ್ಲಿ ಕುಲದೇವಿಯಾದ ಶ್ರೀ ಮಹಾಲಕ್ಷ್ಮೀ ದೇವಿಯನ್ನು ನೂತನ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಅದರೊಂದಿಗೆ ಉಚ್ಚಿಲ ಮಹಾಲಕ್ಷ್ಮೀ ನಗರವನ್ನು ಮೊಗವೀರ ಸಂಘಟ ನೆಯ ಕೇಂದ್ರ ಸ್ಥಾನವನ್ನಾಗಿ ಪರಿಕಲ್ಪಿಸಲಾಯಿತು.
ಸಮುದ್ರ ಮಥನದಲ್ಲಿ ಉದ್ಭವಿಸಿ ರುವುದರಿಂದ ಶ್ರೀ ಮಹಾಲಕ್ಷ್ಮೀ ದೇವಿಯು ಸಮುದ್ರ ರಾಜನ ಮಗಳೆಂದು ಪ್ರತೀತಿ. ಕಡಲ ಮಕ್ಕಳೆ ನಿಸಿಕೊಂಡಿರುವ ಮೀನುಗಾರರಿಗೆ ಸದಾ ರಕ್ಷಣೆಯನ್ನು ನೀಡುತ್ತಾ ಬಂದಿರುವ ಭಕ್ತ ವತ್ಸಲೆಯೂ, ಪರಬ್ರಹ್ಮ ಸ್ವರೂಪಿಣಿಯೂ, ಭಕ್ತಾಭೀಷ್ಟ ಪ್ರದಾಯಿನಿಯೂ ಆದ ಶ್ರೀ ಮಹಾಲಕ್ಷ್ಮಿಯು ಉಚ್ಚಿಲ ಕ್ಷೇತ್ರದಲ್ಲಿ ನೆಲೆನಿಂತು ನಮ್ಮನೆಲ್ಲಾ ಹರಸುತ್ತಿದ್ದಾಳೆ. ಮಾತೆಯ ರಕ್ಷಣೆಯಲ್ಲಿ ಬೆಳೆದ ಮಾತೆಯ ಮಕ್ಕಳಾದ ನಾವೆಲ್ಲಾ ಮಾತೆಯ ಮಂದಿರದ ಜೀರ್ಣೋದ್ದಾರ ಕಾರ್ಯದಲ್ಲಿ ತೊಡಗಿಸಿಕೊಳ್ಳ ಬೇಕಾಗಿದೆ.
1972 ರಲ್ಲಿ ಈ ದೇವಸ್ಥಾನವು ಧ್ವಜಸ್ಥಂಭ, ತೀರ್ಥಮಂಟಪ, ಬಲಿಕಲ್ಲು, ರಥೋತ್ಸವವನ್ನು ಅಳವಡಿಸಿರುವು ದರಿಂದ ಸಂಪೂರ್ಣ ಅಗಮೋಕ್ತ ಮತ್ತು ವೇದೋಕ್ತ ದೇವಸ್ಥಾನವಾಗಿ ಪರಿವರ್ತಿಸಲಾಯಿತು. ಅಂದಿನಿಂದಲೇ ರಾಜ್ಯದಲ್ಲಿಯೇ ಶ್ರೀಮಹಾಲಕ್ಷ್ಮೀ ದೇವಸ್ಥಾನವು ಏಕೈಕ ಆಗಮ ದೇವಸ್ಥಾನವೆಂದು ಹೆಗ್ಗಳಿಕೆಗೆ ಪಾತ್ರವಾಯಿತು.
20ವರ್ಷದ ಹಿಂದೆ ನಡೆದ ಕ್ಷೇತ್ರದ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಂದರ್ಭ ಸಮಾಜ ಬಾಂಧವರ ಆಶಯ ದಂತೆ ಅಷ್ಠ ಮಂಗಳ ಪ್ರಶ್ನೆಯನ್ನು ಇಡಲಾಯಿತು. ಅಂದು ಪ್ರಶ್ನಾ ಭಾಗದಲ್ಲಿ ವಿಮರ್ಶಿದಾಗ ಈ ದೇವಸ್ಥಾನವು ಆಗಮ ದೇವಸ್ಥಾನವಾಗಿರುವುದರಿಂದ ಎಲ್ಲರೂ ಗರ್ಭಗುಡಿಯ ಪ್ರವೇಶ ಮಾಡುವುದು ಸರಿಯಲ್ಲ. ಗರ್ಭಗುಡಿಯ ಹೊರಗಡೆ ಆನೆ ಬಾಗಿಲು ಹತ್ತಿರ ದೇವರ ದರ್ಶನ ಮಾಡಬೇಕೆಂದು ತೋರಿ ಬಂತು. ಇದರಿಂದಾಗಿ ಸಮಾಜ ಬಾಂಧವರೂ ಸೇರಿ ಸಾರ್ವಜನಿಕರು ದೂರದಲ್ಲಿಯೇ ದೇವರ ದರ್ಶನ ಮಾಡುವಂತಾಯಿತು.
ಸಮಾಜ ಬಾಂಧವರಿಗೆ ದೇವರನ್ನು ಹತ್ತಿರದಲ್ಲಿ ನೋಡುವ ಆಸೆ ಮತ್ತು ಹಳೆಯದಾದ ದೇವಸ್ಥಾನದ ಬದಲಿಗೆ ನೂತನ ಮಾದರಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿ ತಾಯಿಯ ಅನುಗ್ರಹಕ್ಕೆ ಪಾತ್ರರಾಗುವ ಬಯಕೆ ಉಂಟಾಯಿತು. ಇದಕ್ಕೆ ಮೊಗವೀರ ಮಹಾಜನ ಸಂಘದ ಮಹಾಸಭೆಯು ಅಂಗೀಕಾರ ನೀಡಿತು. ಎಲ್ಲಾ ಸಮಾಜದವರೂ ಆರಾಧಿಸಿಕೊಂಡು ಬರುತ್ತಿರುವ ಶ್ರೀಮಹಾಲಕ್ಷ್ಮೀ ದೇವಿಯ ದೇವಸ್ಥಾನದ ಸಮಗ್ರ ಜೀರ್ಣೋದ್ದಾರ ಮಾಡುವ ಸಲುವಾಗಿ ಮೊಗವೀರ ಸಮಾಜದ ಮುಖಂಡರಾದ ನಾಡೋಜ ಡಾ| ಜಿ. ಶಂಕರ್ರವರ ಮಾರ್ಗದರ್ಶನದಲ್ಲಿ ದ.ಕ. ಮೊಗವೀರ ಮಹಾಜನ ಸಂಘವು ವಾಸ್ತು ತಜ್ಞರ ಸಲಹೆಯಂತೆ ಶಿಲ್ಪಶಾಸ್ತçದ ಪ್ರಕಾರ ಶಿಲಾಮಯವಾದ ಅಂದಾಜು 32 ಕೋಟಿ ವೆಚ್ಚದ ನೂತನ ಮಂದಿರ ಮತ್ತು ಸುಸಜ್ಜಿತವಾದ ಸಮುದಾಯ ಭವನವನ್ನು ನಿರ್ಮಿಸುವ ಸಂಕಲ್ಪವನ್ನು ಮಾಡಿರುತ್ತದೆ.
ದಿನಾಂಕ 21.02.2021ರ ಪೂರ್ವಹ್ನ ಗಂಟೆ 8.30ಕ್ಕೆ ಶ್ರೀ ಮಹಾಲಕ್ಷ್ಮೀ ದೇವಿಯ ನೂತನ ಗರ್ಭಗುಡಿ ಶಿಲಾನ್ಯಾಸವನ್ನು ಜೀರ್ಣೋದ್ದಾರ ಸಮಿತಿಯ ಗೌರವ ಅಧ್ಯಕ್ಷರಾದ ನಾಡೋಜ ಜಿ. ಶಂಕರ್ರವರ ನೇತೃತ್ವದಲ್ಲಿ ಉಡುಪಿ ಅದಮಾರು ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕುಕ್ಕಿಕಟ್ಟೆ ಶ್ರೀ ರಾಘವೇಂದ್ರ ತಂತ್ರಿ ಮತ್ತು ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಉಪಾಧ್ಯಯರ ಮಾರ್ಗದರ್ಶನದಲ್ಲಿ ನೆರವೇರಿ ಸಲಿದ್ದಾರೆ.
ಹಾಗೂ ಆ ಪ್ರಯುಕ್ತ ಪೂರ್ವಾಹ್ನ 10.30ಕ್ಕೆ ನಡೆಯುವ ಧಾರ್ಮಿಕ ಸಭಾಕಾರ್ಯಕ್ರಮವನ್ನು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಉದ್ಘಾಟಿಸಲಿದ್ದು ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷರಾದ ನಾಡೋಜ ಡಾ|| ಜಿ.ಶಂಕರ್ರವರು ಆಧ್ಯಕ್ಷತೆಯನ್ನು ವಹಿಸಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಮುಜರಾಯಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಯವರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಶೋಭಾ ಕರಂದ್ಲಾಜೆಯವರು, ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್, ಉಡುಪಿ ಶಾಸಕರಾದ ರಘುಪತಿ ಭಟ್, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ, ಮಾಜಿ ಸಚಿವರುಗಳಾದ ಪ್ರಮೋದ್ ಮಧ್ವರಾಜ್ ಮತ್ತು ವಿನಯಕುಮಾರ್ ಸೊರಕೆ ಹಾಗೂ ಸಮಾಜದ ಗಣ್ಯರು ಉಪಸ್ಥಿತರಿರುವರು.
ದಿ. 21.01.2021ರಂದು ಎಲ್ಲಾ ಮೊಗವೀರ ಸಮಾಜ ಭಾಂದವರು ತಮ್ಮ ಕೆಲಸ ಕಾರ್ಯಕ್ಕೆ ರಜೆ ಸಾರಿ ಈ ಪುಣ್ಯ ಕಾರ್ಯದಲ್ಲಿ ಬಾಗಿಯಾಗ ಬೇಕೆಂದು ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಶರಾದ ಜಯ ಸಿ. ಕೋಟ್ಯಾನ್, ಜೀರ್ಣೋದ್ಧಾರ ಸಮಿತಿಯ ಅಂದಿನ ಗುಂಡು ಬಿ. ಅಮೀನ್ ಮತ್ತು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಶರಾದ ವಾಸುದೇವ ಸಾಲ್ಯಾನ್ ತಿಳಿಸಿರುತ್ತಾರೆ.