ಕುಕ್ಕೆಯಲ್ಲಿ ವೈಭವದ ಶಿವರಾತ್ರಿ~ವಿವಾದಕ್ಕೆ ಮಂಗಳ

ಕುಕ್ಕೆಯಲ್ಲಿ ವೈಭವದ ಶಿವರಾತ್ರಿ ಆಚರಣೆಗೆ ಒಮ್ಮತದ ಒಪ್ಪಿಗೆ ಸಿಕ್ಕಿದ್ದು, ಮುಜುರಾಯಿ ಇಲಾಖೆ ಮತ್ತು ಧಾರ್ಮಿಕ ಪರಿಷತ್ ನೇತೃತ್ವದ ಸಭೆಯಲ್ಲಿ ಶಿವರಾತ್ರಿ ಆಚರಣೆಗೆ ನಿರ್ಧಾರ ಮಾಡ ಲಾಗಿದೆ. 
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಅಧ್ಯಕ್ಷ ಕಶೇಕೋಡಿ ಸೂರ್ಯನಾರಾಯಣ ಭಟ್, ಆಗಮ ಶಾಸ್ತ್ರ ಪಂಡಿತರು, ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಭಾಗಿಯಾಗಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಹಿತರಕ್ಷಣಾ ಸಮಿತಿ ಪ್ರಮುಖರೂ ಸಭೆಯಲ್ಲಿ ಭಾಗವಹಿಸಿದ್ದರು. ಶೈವ ಪದ್ದತಿ ಯಂತೆ ಕುಕ್ಕೆಯಲ್ಲಿ ಶಿವರಾತ್ರಿ ಆಚರಣೆಗೆ ಹಿತರಕ್ಷಣಾ ಸಮಿತಿ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಯಲ್ಲಿ ಹಿತರಕ್ಷಣಾ ಸಮಿತಿ ಆಗ್ರಹದಂತೆ ಮಾ.11 ರಂದು ಕುಕ್ಕೆಯಲ್ಲಿ ವೈಭವದ ಶಿವರಾತ್ರಿ ಆಚರಣೆಗೆ ನಿರ್ಧಾರ ಮಾಡಲಾಗಿದ್ದು,

ಸಭೆಯ ಒಮ್ಮತದ ನಿರ್ಧಾರ ಸರ್ಕಾರಕ್ಕೆ ತಿಳಿಸಲು ಸಮ್ಮತಿ ನೀಡಲಾಗಿದೆ. ರುದ್ರಹೋಮ, ಕಲಶಾರಾಧನೆ, ಮಂಡಲಾರಧನೆ, ಬಿಲ್ವಾರ್ಚನೆ ಮೂಲಕ ಶಿವರಾತ್ರಿಯನ್ನು ಮಧ್ಯರಾತ್ರಿ 12 ಗಂಟೆಯವರೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯಲಿದೆ.

ಶಿವರಾತ್ರಿ ಜಾಗರಣೆ, ರುದ್ರಪಾರಾಯಣ ಸಂಪ್ರದಾಯವನ್ನು ಬದಲಿಸಬೇಡಿ ಎಂದು ಉಡುಪಿಯ ಸನಾತನ ಸಂಪ್ರದಾಯ ಸಂರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿತ್ತು. 

ಶಿವರಾತ್ರಿ ಆಚರಣೆಗೆ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಸೂಚನೆಯಂತೆ ಈ ಸಭೆ ನಡೆಸಲಾಯಿತು. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಲಭ್ಯವಾಗಬೇಕಿದೆ.

 
 
 
 
 
 
 
 
 

Leave a Reply