ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆ

ಕುಂದಾಪುರ : ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿ ಕೆರಾಡಿ ಆಯ್ಕೆಯಾಗಿದ್ದಾರೆ.

ಜಗದಾಂಬಿಕಾ ವಸತಿ ಗ್ರಹದ ಆಡಳಿತ ಮಂಡಳಿ ಸಂಕೀರ್ಣದಲ್ಲಿ ನಡೆದ ವ್ಯವಸ್ಥಾಪನಾ ಸಮಿತಿ ನೂತನ ಸದಸ್ಯರ ಪ್ರಥಮ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ. ದೇವಸ್ಥಾನದ ಆಡಳಿತಾಧಿಕಾರಿ, ಕುಂದಾಪುರದ ಉಪವಿಭಾಗಾಧಿಕಾರಿ ಕೆ.ರಾಜು, ಕಾರ್ಯನಿರ್ವಹಣಾಧಿಕಾರಿ ಪಿ.ಬಿ.ಮಹೇಶ್‌, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ್, ಗಣೇಶ್ ಕಿಣಿ, ರಾಮಚಂದ್ರ ಅಡಿಗ, ಗೋಪಾಲಕೃಷ್ಣ,, ರತ್ನ ಆರ್ ಕುಂದರ್, ಸಂಧ್ಯಾ ರಮೇಶ್ ಹಾಗೂ ಶೇಖರ ಪೂಜಾರಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಕೊಲ್ಲೂರು ಕ್ಷೇತ್ರದ ಅಧ್ಯಕ್ಷನಾಗಿ ಸೇವೆ ಸಲ್ಲಿಸಲು ಅವಕಾಶ ದೊರಕಿರುವುದು ನಿಜಕ್ಕೂ ಸೌಭಾಗ್ಯ.

ಎಲ್ಲ 9 ಸದಸ್ಯರು ಪರಸ್ಪರ ವಿಶ್ವಾಸದೊಂದಿಗೆ ತಾಯಿ ಮೂಕಾಂಬಿಕೆಯ ಸೇವೆ ಮಾಡುತ್ತೇವೆ. ಅಧ್ಯಕ್ಷರು ಹಾಗೂ ಸದಸ್ಯರು ಎನ್ನುವ ಬೇಧ ಇಲ್ಲದೆ ಕೆಲಸ ಮಾಡುತ್ತೇವೆ.ಕೊಲ್ಲೂರು ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಶೈಕ್ಷಣಿಕ ಹಾಗೂ ಸಾಂಸ್ಕೃತಿಕವಾಗಿಯೂ ಹೆಸರು ಮಾಡಿದ ಪುಣ್ಯ ಕ್ಷೇತ್ರ. ಕ್ಷೇತ್ರದ ಹಾಗೂ ಪರಿಸರದ ಶುಚಿತ್ವ ಕಾಪಾಡಲು ಆದ್ಯತೆ ನೀಡುತ್ತೇವೆ.

ಆದಷ್ಟು ಶೀಘ್ರದಲ್ಲಿ ಕ್ಷೇತ್ರದ ಅಷ್ಟಬಂಧ ಕಾರ್ಯ ಮಾಡಲು ಸಂಬಂಧಿಸಿದವರೊಂದಿಗೆ ಚರ್ಚೆ ನಡೆಸುತ್ತೇವೆ. ಪುಣ್ಯ ನದಿ ಸೌಪರ್ಣಿಕೆ, ಅಗ್ನಿತೀರ್ಥಗಳ ಶುಚಿತ್ವದ ಕಡೆಗೂ ವಿಶೇಷ ಗಮನ ಹರಿಸುತ್ತೇವೆ ಎಂದು ಹೇಳಿದರು.

ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

 
 
 
 
 
 
 
 
 

Leave a Reply