ಅಯೋದ್ಯೆ ಜನ್ಮ ಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗಾಗಿ ಶಿಲೆಯನ್ನು ಕಳುಹಿಸುವ ಸರದಿ ಎರಡನೇ ಬಾರಿ ಕರ್ನಾಟಕಕ್ಕೆ ಲಭಿಸಿದೆ.
ಈ ಬಾರಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನೆಲ್ಲಿಕಾರಿನಿಂದ ಕೃಷ್ಣ ಶಿಲೆ ರಾಮನಗರಿಗೆ ಪ್ರಯಾಣ ಬೆಳೆಸಿದೆ. ಗುರುವಾರ ರಾತ್ರಿ ಕೃಷ್ಣಶಿಲೆಗೆ ವಿಶೇಷ ಪೂಜೆ ಸಲ್ಲಿಸಿ ಅಯೋಧ್ಯೆಗೆ ರವಾನಿಸಲಾಗಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಂಗಳ ಹಿಂದೆ ಕಾರ್ಕಳದ ವಿಶ್ವಹಿಂದು ಪರಿಷತ್ನ ಪ್ರಮುಖರನ್ನು ಸಂಪರ್ಕಿಸಿತ್ತು. ಬಳಿಕ ಅಯೋಧ್ಯೆಯಿಂದ ಶಿಲ್ಪಿ ಕುಶ್ದೀಪ್ ಬನ್ಸಾಲ್ ನೇತೃತ್ವದಲ್ಲಿ ಪರಿಣಿತ ತಜ್ಞರ ತಂಡವೊಂದು ನೆಲ್ಲಿಕಾರಿಗೆ ಆಗಮಿಸಿ, ಇಲ್ಲಿನ ಶಿಲೆಗಳನ್ನು ಪರಿಶೀಲನೆ ನಡೆಸಿತು. ಕಾರ್ಕಳದ ಈದು ಗ್ರಾಮದ ತುಂಗ ಪುಜಾರಿ ಅವರ ಜಮೀನಿನಲ್ಲಿದ್ದ ಶಿಲೆಯನ್ನು ಗುರುತಿಸಲಾಯಿತು.
ಭೂಮಿಯೊಳಗಿದ್ದ ಶಿಲೆಯನ್ನು ಬಜಗೋಳಿ ಅಯ್ಯಪ್ಪ ಮಂದಿರಕ್ಕೆ ತಂದು ವಿಶ್ವ ಹಿಂದು ಪರಿಷತ್ ಮತ್ತು ‘ಜರಂಗದಳದ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಶಿಲೆಯು 9 ಟನ್ ತೂಕ, 9.5 ಅಡಿ ಉದ್ದ, 6 ಅಡಿ ಅಗಲ ಮತ್ತು 4.5 ಅಡಿ ದಪ್ಪವಿದೆ. ಕಾರ್ಕಳದಿಂದ ಸುಮಾರು 2120 ಕಿ.ಮೀ. ದೂರದ ಅಯೋಧ್ಯೆಗೆ ಟ್ರಕ್ ಮೂಲಕ ಶಿಲೆಯನ್ನು ಕಳುಹಿಸಲಾಯಿತು.
ಈಗಾಗಲೇ ಮೈಸೂರು ಜಿಲ್ಲೆಯ ಹೆಗ್ಗಡೆದೇವನ ಕೋಟೆಯಿಂದ ಎರಡು ಶಿಲೆಗಳನ್ನು ಅಯೋ‘್ಯೆಗೆ ಕಳುಹಿಸಲಾಗಿದೆ. ನೇಪಾಳದ ಗಂಡಕೀ ನದಿಯಿಂದ ಎರಡು ಸಾಲಿಗ್ರಾಮ ಶಿಲೆಗಳು ಅಯೋದ್ಯೆಗೆ ಬಂದಿವೆ. ರಾಜಸ್ಥಾನದಿಂದ ಮೂರು ಅಮೃತಶಿಲೆಗಳು ತಲುಪಿವೆ. ಒಡಿಶಾ ಮತ್ತು ತಮಿಳುನಾಡಿನಿಂದ ಶಿಲೆಗಳು ಅಯೋದ್ಯೆಗೆ ಬರಲಿವೆ. ಎಲ್ಲ ಶಿಲೆಗಳು ತಲುಪಿದ ನಂತರ ಪರಿಣಿತ ಶಿಲ್ಪಿಗಳು ಹಾಗೂ ತಜ್ಞರ ಸಮಿತಿ ಪರೀಕ್ಷೆ ನಡೆಸಿ ರಾಮಲಲ್ಲಾನಿಗಾಗಿ ಶಿಲೆಯ ಆಯ್ಕೆ ಮಾಡಲಿದೆ