ಉಡುಪಿ: ಇಲ್ಲಿನ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನ ವತಿಯಿಂದ ಉಡುಪಿ ತಾಲೂಕಿನ 161ಸಿ ದರ್ಜೆಯ ದೇವಸ್ಥಾನಗಳ 208 ಸಿಬಂದಿಗಳಿಗೆ ಸುಮಾರು 4 ಲಕ್ಷ ರೂ. ವೆಚ್ಚದ ಆಹಾರ ಕಿಟ್ ನ್ನು (ಅಗತ್ಯವಿರುವ 16 ವಸ್ತುಗಳ) ದೇವಳದ ಧರ್ಮದರ್ಶಿ ನಿಡಂಬೂರು ಬೀಡು ಡಾ.ವಿಜಯ ಬಲ್ಲಾಳ್ ಮಂಗಳವಾರ ತಾಲೂಕು ಕಚೇರಿಯ ಕಂದಾಯ ಅಧಿಕಾರಿ ಉಪೇಂದ್ರ ಅವರಿಗೆ ಹಸ್ತಾಂತರಿಸಿದರು.
ಕಳೆದ ವರ್ಷ ಸರ್ಕಾರಿ ಅಧಿಕಾರಿಗಳು, ಶಾಸಕ ಮತ್ತು ಸಚಿವರ ಸೂಚನೆ ಮೇರೆಗೆ ಬಡಜನರಿಗೆ 4 ಸಾವಿರ ಆಹಾರ ಕಿಟ್, ಒಂದು ತಿಂಗಳ ಕಾಲ ವಲಸೆ ಕಾರ್ಮಿಕರು, ಕೆಲವು ಆಸ್ಪತ್ರೆಯ ಸೋಂಕಿತ ರೋಗಿಗಳು ಮತ್ತು ಜಿಲ್ಲಾಸ್ಪತ್ರೆ ಸಿಬಂದಿಗಳಿಗೆ ಪ್ರತಿದಿನ 2,500 ಊಟ ನೀಡಲಾಗಿತ್ತು ಎಂದು ಡಾ. ಬಲ್ಲಾಳ್ ತಿಳಿಸಿದರು.
ಈ ಸಂದರ್ಭದಲ್ಲಿ ಅಂಬಲಪಾಡಿ ಗ್ರಾಮಕರಣಿಕ ಅಭಿಷೇಕ್, ಸಹಾಯಕ ಅಶೋಕ್ ಉಪಸ್ಥಿತರಿದ್ದರು.