ಫೆಡರೇಶನ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರದ ಮೀನುಗಾರಿಕೆ ಯೋಜನೆ ಪರಿಣಾಮಕಾರಿ ಅನುಷ್ಠನಕ್ಕೆ ಬದ್ಧ: ಯಶ್‌ಪಾಲ್ ಎ. ಸುವರ್ಣ

ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ೨೦೨೧-೨೨ ನೇ ಸಾಲಿನ ವಾರ್ಷಿಕ ಮಹಾಸಭೆಯು ಎಮ್ಮೆಕೆರೆ, ಪಾಂಡೇಶ್ವರದ ರಮಾ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ಯಶ್‌ಪಾಲ್ ಎ. ಸುವರ್ಣರವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಸದಸ್ಯರನ್ನು ಸ್ವಾಗತಿಸಿ ಮಾತನಾಡಿದ ಯಶ್‌ಪಾಲ್ ಎ. ಸುವರ್ಣ, ಕರಾವಳಿ ಜಿಲ್ಲೆಯ ಮೀನುಗಾರರ ಸಮಸ್ಯೆ ಬೇಡಿಕೆಗಳಿಗೆ ಹಲವು ದಶಕಗಳಿಂದ ಸ್ಪಂದಿಸಿ ಮೀನುಗಾರಿಕೆ ಅಭಿವೃದ್ಧಿಗೆ ಕಾರ್ಯಪ್ರವೃತ್ತವಾಗಿದ್ದು, ಮುಂದಿನ ದಿನಗಳಲ್ಲಿ ಸರಕಾರ ಮತ್ತು ಮೀನುಗಾರರ ನಡುವಿನ ಕೊಂಡಿಯಾಗಿ ಕೇಂದ್ರ ಹಾಗೂ ರಾಜ್ಯ ಸರಕಾರದ ಮೀನುಗಾರಿಕೆ ಯೋಜನೆ ಪರಿಣಾಮಕಾರಿ ಅನುಷ್ಟಾನಕ್ಕೆ ಫೆಡರೇಷನ್ ಬದ್ಧವಾಗಿದೆ ಎಂದು ಹೇಳಿದರು.
ಫೆಡರೇಶನ್ ಮಹಾಸಭೆಗೆ 53 “ಬಿ” ವರ್ಗದ ಸದಸ್ಯರು ಮತ್ತು ೮೧೪ “ಸಿ” ವರ್ಗದ ಸದಸ್ಯರು ಮತ್ತು ಸರಕಾರದ ಪ್ರತಿನಿಧಿಗಳು ಹಾಜರಿದ್ದರು.

ಫೆಡರೇಶನ್ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸದಸ್ಯರಿಗೆ ಆರೋಗ್ಯಕಾರ್ಡು ಸೌಲಭ್ಯ ಒದಗಿಸುವುದು, ಸದಸ್ಯ ಸಹಕಾರಿ ಸಂಘಗಳ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಗಾರ, ಮೀನುಗಾರಿಕೆ ಮತ್ತು ಮೀನಿನ ಬಗ್ಗೆ ಜನರಿಗೆ ಹೆಚ್ಚಿನ ಮಾಹಿತಿಯನ್ನು ನೀಡುವಉದ್ದೇಶದಿಂದ “ಮತ್ಸö್ಯಮೇಳ” ಆಯೋಜನೆ, ಸದಸ್ಯರಿಗೆ ಫೆಡರೇಶನಿನ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿ ಆರೋಗ್ಯ ಶಿಬಿರ ಏರ್ಪಡಿಸುವುದು, ಹಂಗಾರಕಟ್ಟಾ ಕೇಂದ್ರಗಳಲ್ಲಿ ನೂತನವಾಗಿ ಬ್ಯಾಂಕಿoಗ್ ವಿಭಾಗಗಳನ್ನು ಆರಂಭಿಸಿದ್ದು ಕಾಪುವಿನಲ್ಲಿ ನೂತನ ಶಾಖೆ ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಕೇಂದ್ರ ಸರಕಾರದ ಆತ್ಮನಿರ್ಭರ ಭಾರತದ ಪ್ರಧಾನ ಮಂತ್ರಿ ಮತ್ಸö್ಯಸಂಪದ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಮತ್ತು ಸದಸ್ಯ ಮೀನುಗಾರರಿಗೆ ಕಿಸಾನ್ ಕ್ರೆಡಿಟ್‌ಕಾರ್ಡು ಸೌಲಭ್ಯ ಒದಗಿಸುವ ಬಗ್ಗೆ ಯೋಜನೆಗಳನ್ನು ರೂಪಿಸಲಾಗಿದ್ದು, ಕೆಲವೊಂದು ಆಯ್ದ ಕೇಂದ್ರಗಳಲ್ಲಿ ಫೆಡರೇಶನ್ ವತಿಯಿಂದ ಮತ್ಸö್ಯಕ್ಯಾಂಟಿನ್ ಆರಂಭಿಸಿ ಕಾರ್ಮಿಕ ಹಾಗೂ ವಿದ್ಯಾರ್ಥಿಗಳಿಗೆ ಮಿತದರದಲ್ಲಿ ಮೀನು ಊಟ ಒದಗಿಸುವ ಬಗ್ಗೆ ಸಂಸ್ಥೆ ಕಾರ್ಯಪ್ರವೃತ್ತವಾಗಿದೆ.

ಫೆಡರೇಶನ್ ವತಿಯಿಂದ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಮಂಗಳೂರು ನಗರದ ಕೇಂದ್ರ ಭಾಗವಾದ ಊರ್ವ ಸ್ಟೋರ್ ನಲ್ಲಿ ಆಧುನಿಕ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ “ಮತ್ಸö್ಯ ಸಂಪದ” ನೂತನ ಪ್ರಧಾನ ಕಚೇರಿ ಕಟ್ಟಡ ಹಾಗೂ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿದ್ದು, ಸಹಕಾರಿ ಸಂಸ್ಥೆಗಳಿಗೆ, ಮೀನುಗಾರ ಸಂಘಗಳಿಗೆ ಮತ್ತು ಎಲ್ಲಾ ವರ್ಗದ ಮೀನುಗಾರರಿಗೆ ಅನುಕೂಲವಾಗುವ ಉದ್ದೇಶದಿಂದ ಆಧುನೀಕೃತ ಮೀನುಗಾರಿಕೆ ಮತ್ತು ಮೀನಿನ ಉತ್ಪನ್ನಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡುವ ಉದ್ದೇಶದಿಂದ ತರಬೇತಿ ಕೇಂದ್ರ ಹಾಗೂ ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡಿನ ಸಿಹಿ ನೀರಿನ ಮೀನುಗಾರಿಕೆಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ವೈಜ್ಞಾನಿಕ ರೀತಿಯಲ್ಲಿ ಒಳನಾಡಿನ ಮೀನು ಮರಿ ಉತ್ಪಾದನೆಯ ಬಗ್ಗೆ ಮತ್ತು ಮೀನು ಸಾಕಣಿಯ ಬಗ್ಗೆ ಅಧ್ಯಯನ ಮಾಡಿರುವ ಮತ್ತು ಪರಿಣಿತರ ಸಹಕಾರವನ್ನು ಪಡೆದು ಮೀನು ಮರಿ ಉತ್ಪಾದನೆ ಮತ್ತು ಬಿತ್ತನೆಯ ಬಗ್ಗೆ ಹೊಸ ಯೋಜನೆಯನ್ನು ರೂಪಿಸಲಾಗಿದೆ.

ಮಹಾಸಭೆಯಲ್ಲಿ ಸಹಕಾರ ಸಂಘಗಳ ಜಂಟಿ ನಿರ್ದೇಶಕರಾಗಿ ಪದೋನ್ನತಿಗೊಂಡ ಪ್ರವೀಣ್ ಬಿ. ನಾಯಕ್ ಹಾಗೂ ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಅತ್ಯುತ್ತಮ ಮೀನುಗಾರಿಕಾ ಸಹಕಾರಿ ಸಂಘಗಳ ಸಾಧನಾ ಪ್ರಶಸ್ತಿ ಪುರಸ್ಕೃತ ಮಲ್ಪೆ ಯಾಂತ್ರಿಕ (ಟ್ರಾಲ್) ದೋಣಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಚಂದ್ರ ಕುಂದರ್ ಹಾಗೂ ಹೆಮ್ಮಾಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷರಾದ ಭಾಸ್ಕರ್ ನಾಯ್ಕ್ ರವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಫೆಡರೇಶನಿನ ೨೦೨೧-೨೨ ನೇ ವಾರ್ಷಿಕ ವರದಿಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಮಹಾಸಭೆಯಲ್ಲಿ ಮಂಡಿಸಿದರು. ಸಂಸ್ಥೆಯ ಅಭಿವೃದ್ಧಿಯ ಚಟುವಟಿಕೆಗಳ ಬಗ್ಗೆ ಹಾಗೂ ನಿರಂತರ ಲಾಭದಾಯಕವಾಗಿ ಮುನ್ನಡೆಸುತ್ತಿರುವ ಸಂಸ್ಥೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ನಿರ್ದೇಶಕರುಗಳಿಗೆ ಮಹಾಸಭೆಯಲ್ಲಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಪುರುಷೋತ್ತಮ ಅಮೀನ್, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಹರೀಶ್‌ಕುಮಾರ್ ಹಾಗೂ ಫೆಡರೇಶನಿನ ಆಡಳಿತ ಮಂಡಳಿಯ ಸರ್ವಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply