ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ​೨೦೧೯-೨೦ನೇ ಸಾಲಿನಲ್ಲಿ ರೂ. 3.56 ಕೋಟಿ ನಿವ್ವಳ ಲಾಭ :ಯಶ್ ಪಾಲ್ ಸುವರ್ಣ

ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ 2019-20 ನೇ ಸಾಲಿನಲ್ಲಿ 178 ಕೋಟಿ ವ್ಯವಹಾರದ ಮೂಲಕ ರೂ. 3.56 ಕೋಟಿ ನಿವ್ವಳ ಲಾಭಗಳಿಸಿದೆ. ಕರ್ನಾಟಕ ರಾಜ್ಯ ಸರಕಾರದ ಮೀನುಗಾರಿಕಾ ಇಲಾಖೆ, ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳು, ವೈಯಕ್ತಿಕ ಸದಸ್ಯರು ಹಾಗೂ ಸಮಸ್ತ ಮೀನುಗಾರರ ಸಹಕಾರದಿಂದ ಮೀನುಮಾರಾಟ, ಡೀಸಿಲ್ ಮಾರಾಟ, ಬ್ಯಾಂ​ಕಿಂಗ್ ವ್ಯವಹಾರ, ಮೊಬಿಲ್ ಎಣ್ಣೆ ಮಾರಾಟ, ಸೀಮೆ ಎಣ್ಣೆ ಹಾಗೂ ಮೀನುಗಾರಿಕಾ ಸಲಕರಣೆಗಳ ಮಾರಾಟ ಮತ್ತು ಮಂಜುಗಡ್ಡೆ ವ್ಯವಹಾರಗಳಿಂದ 178 ಕೋಟಿ ವ್ಯವಹಾರ ಮಾಡಿ ನಿರ್ವಹಣಾ ವೆಚ್ಚ, ಸವಕಳಿ ಮತ್ತು ಆಡಳಿತಾತ್ಮಕ ವೆಚ್ಚಗಳನ್ನು ಕಳೆದು ರೂ.3.56 ಕೋಟಿ ನಿವ್ವಳ ಲಾಭ ದಾಖಲಿಸಿರುವುದಾಗಿ ಫೆಡರೇಶನಿನ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ.

ಮೀನುಗಾರರ ಸಮಗ್ರ ಅಭಿವೃದ್ಧಿಯ ಧ್ಯೇಯದೊಂದಿಗೆ ಸ್ಥಾಪನೆಗೊಂಡ ಈ ಸಂಸ್ಥೆ ಮೀನುಗಾರರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಹಕರಿಸುತ್ತಾ ಮೀನುಗಾರರ ಸ್ವಾವಲಂಬನೆಗಾಗಿ ಪ್ರಯತ್ನಿಸುತ್ತಿದ್ದು, ಹಿಂದಿನ ಹಲವು ವರ್ಷಗಳಿಂದ ಹಲವಾರು ತಾಂತ್ರಿಕ ಕಾರಣಗಳಿಂದ ನಷ್ಟದಲ್ಲಿದ್ದ ಈ ಸಂಸ್ಥೆಯು ಮೀನುಗಾರಿಕೆಯಲ್ಲಿ ಉಂಟಾದ ಏರಿಳಿತಗಳ ಸಮಸ್ಯೆಯನ್ನು ಎದುರಿಸಿಕೊಂಡು ಇತ್ತೀಚಿನ 11ವರ್ಷಗಳಲ್ಲಿ ಒಟ್ಟು 33 ಕೋಟಿ ರೂಪಾಯಿ ಲಾಭ ಗಳಿಸಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಸಂಸ್ಥೆಗ​ಳೊಂದಿಗೆ ಗುರುತಿಸಿಕೊಂಡಿದೆ.

ಮಲ್ಪೆ ಮತ್ತು ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಬ್ಯಾಂಕಿAಗ್ ವಿಭಾಗದ ಶಾಖೆಯ ಮೂಲಕ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಬ್ಯಾಂಕಿAಗ್ ಸೇವೆಯನ್ನು ನೀಡುತ್ತಿದ್ದು, ಫೆಡರೇಶನಿನ ಬ್ಯಾಂ​ಕಿಂಗ್ ವಿಭಾಗ ಮೀನುಗಾರಿಕ ಸಲಕರಣೆಗಳ ಮಾರಾಟ ವಿಭಾಗ ಮತ್ತು ಫೆಡರೇಶನಿನ ಕಚೇರಿಗಳಲ್ಲಿ ಗಣಕೀಕರಣವನ್ನು ಅಳವಡಿಸಿ ಸದಸ್ಯರಿಗೆ ಆಧುನಿಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವರದಿ ಸಾಲಿನಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಜಾಗತಿಕವಾಗಿ ಎಲ್ಲಾ ವ್ಯವಹಾರಗಳಲ್ಲಿ ಏರುಪೇರಾಗಿದ್ದು, ಫೆಡರೇಶನಿನ ವ್ಯವಹಾರದಲ್ಲಿಯೂ ಏರಿಳಿತ ಉಂಟಾಗಿದ್ದರೂ ಫೆಡರೇಶನಿನ ವ್ಯವಹಾರಗಳು ಮತ್ತು ಸದಸ್ಯರಿಗೆ ನೀಡಿರುವ ಸೇವೆಯಿಂದಾಗಿ ವರದಿ ವರ್ಷದಲ್ಲಿ ಉತ್ತಮ ಲಾಭಗಳಿಸಿ ಪ್ರಗತಿಪಥದತ್ತ ಸಾಗುತ್ತಿದೆ.

ಗ್ರಾಹಕರಿಗೆ ಆರ್.ಟಿ.ಜಿ.ಎಸ್ ಸೌಲಭ್ಯ, ಇ-ಸ್ಟಾಂ​ಪಿಂಗ್ ಮತ್ತು ಇತರ ಎಲ್ಲಾ ತರಹದ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದು, ಶೀಘ್ರದಲ್ಲಿಯೇ ಬ್ಯಾಂ​ಕಿಂಗ್ ವಿಭಾಗದಲ್ಲಿ ಇನ್ನಷ್ಟು ಆಧುನಿಕ ಸೌಲಭ್ಯಗಳಾದ ಇ-ಬಿಕ್ಸ್ ನಗದು ಹಣ ವರ್ಗಾವಣೆ, (​ರಾಷ್ಟ್ರೀಯ  ಮತ್ತು ಅಂತ​ರಾಷ್ಟ್ರೀಯ ಮಟ್ಟದಲ್ಲಿ) ಅಳವಡಿಸಿಕೊಳ್ಳಲು ಯೋಜನೆಯನ್ನು ರೂಪಿಸಲಾಗಿದೆ.

೨೦೧೯-೨೦ ನೇ ಸಾಲಿನಲ್ಲಿಯೂ ಸಂಸ್ಥೆಯ ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಡಾ| ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಫೆಡರೇಶನಿನ ಜಂಟಿ ಆಶ್ರಯದಲ್ಲಿ ಉಚಿತವಾಗಿ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್ ವಿತರಿಸಲಾಗಿದೆ. ದ.ಕ ಮತ್ತು ಉಡುಪಿ ಜಿಲ್ಲೆಯ ಸಂಸ್ಥೆಯ ಸದಸ್ಯರ ಮತ್ತು ಸದಸ್ಯೇತರರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಉಭಯ ಜಿಲ್ಲೆಯ ಬಡ ಮೀನುಗಾರರ ವೈದ್ಯಕೀಯ ಚಿಕಿತ್ಸೆಗಾಗಿ ಹಾಗೂ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಸಂಸ್ಥೆ ಸಾಮಾಜಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.

ಮಲ್ಪೆ ಮೀನುಗಾರಿಕಾ ಬಂದರು ಮತ್ತು ಮಂಗಳೂರು ಮೀನುಗಾರಿಕಾ ಬಂದರಿನ ಹಲವೊಂದು ಸಮಸ್ಯೆಗಳ ಬಗ್ಗೆ ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿನ ಅಧ್ಯಕ್ಷರ ನೇತೃತ್ವದಲ್ಲಿ ಸಮಸ್ಯೆಯ ನಿವಾರಣೆಗಾಗಿ ಹಾಗೂ ಮೀನುಗಾರರು ಹಿಡಿದು ತಂದ ಮೀನಿಗೆ ಉತ್ತಮ ಮೌಲ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಚಿವರನ್ನು ಭೇಟಿಯಾಗಿ ಮೀನುಗಾರಿಕೆಗೆ ​ಸಂಬಂಧಿಸಿದ ಎಲ್ಲಾ ರೀತಿಯ ಯೋಜನೆಗಳನ್ನು ಅನುಷ್ಟಾನಗೊಳಿಸಲು ಕ್ರಮ ಜರಗಿಸಲಾಗಿದೆ.

ಮುಂಬರುವ ದಿನಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಸಹಕಾರದಿಂದ ಫೆಡರೇಶನ್ ವತಿಯಿಂದ ಮಂಗಳೂರು ನಗರದ ಕೇಂದ್ರ ಭಾಗದಲ್ಲಿ ಸಹಕಾರಿ ಸಂಸ್ಥೆಗಳಿಗೆ, ಮೀನುಗಾರ ಸಂಘಗಳಿಗೆ ಮತ್ತು ಎಲ್ಲಾ ವರ್ಗದ ಮೀನುಗಾರರಿಗೆ ಅನುಕೂಲವಾಗುವ ಉದ್ಧೇಶದಿಂದ ಆಧುನೀಕೃತ ಮೀನುಗಾರಿಕೆ ಮತ್ತು ಮೀನಿನ ಉತ್ಪನ್ನಗಳ ಬಗ್ಗೆ ತಾಂತ್ರಿಕ ಮಾಹಿತಿಯನ್ನು ನೀಡುವ ಉದ್ಧೇಶದಿಂದ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಯೋಜನೆಯನ್ನು ರೂಪಿಸಲಾಗಿದೆ.

ಸಮುದ್ರ ಮೀನುಗಾರಿಕೆಯ ಜೊತೆಗೆ ಒಳನಾಡಿನ ಸಿಹಿನೀರಿನ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವ ಉದ್ಧೇಶದಿಂದ ವೈಜ್ಞಾನಿಕ ರೀತಿಯಲ್ಲಿ ಒಳನಾಡಿನ ಮೀನುಮರಿ ಉತ್ಪಾದನೆ ಬಗ್ಗೆ ಮತ್ತು ಮೀನು ಸಾಕಾಣೆಯ ಬಗ್ಗೆ ಅಧ್ಯಯನ ಮಾಡಿರುವ ಮತ್ತು ಆಳಜ್ಞಾನ ಹೊಂದಿರುವವರ ಸಹಕಾರವನ್ನು ಪಡೆದು ಮೀನುಮರಿ ಉತ್ಪಾದನೆ ಮತ್ತು ಬಿತ್ತನೆಯ ಬಗ್ಗೆ ಹೊಸ​ ​ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು.

ವರದಿ ಸಾಲಿನಲ್ಲಿ ಫೆಡರೇಶನ್ ಗರಿಷ್ಠ ಲಾಭಗಳಿಸಿದ್ದು, ಮುಂದೆ ಕೂಡ ಸಂಸ್ಥೆಯ ಸರ್ವ ಸದಸ್ಯರ ಹಾಗೂ ಮೀನುಗಾರರ ಸಹಕಾರದಿಂದ ಸಂಸ್ಥೆಯನ್ನು ಅಭಿವೃದ್ಧಿಯಿಂದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದಾಗಿ ಅಧ್ಯಕ್ಷರಾದ ಶ್ರೀ ಯಶ್‌ಪಾಲ್ ಎ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

​​


 
 
 
 
 
 
 
 
 

Leave a Reply