ಕರ್ನಾಟಕ ಜಾನಪದ ವಿ.ವಿ.ಯಿಂದ ಜೀವನ್ ರಾಂ ಸುಳ್ಯರಿಗೆ ಗೌರವ ಡಾಕ್ಟರೇಟ್

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ನೀಡುವ 2022 ನೇ ಸಾಲಿನ ಗೌರವ ಡಾಕ್ಟರೇಟ್ ಪದವಿಗೆ ಪ್ರಸಿದ್ಧ ರಂಗಕರ್ಮಿ ಜೀವನ್ ರಾಂ ಸುಳ್ಯ ಆಯ್ಕೆ ಆಗಿರುತ್ತಾರೆ. ಜೀವನ್ ರಾಂ ರವರು ರಂಗಭೂಮಿ, ಜಾನಪದ, ಯಕ್ಷಗಾನ, ಸಂಗೀತ, ಕಲೆ, ಜಾದೂ, ಚಲನಚಿತ್ರ ಹಾಗೂ ಸಂಘಟನೆ..ಮುಂತಾಗಿ ಸಾಂಸ್ಕೃತಿಕ ಲೋಕದಲ್ಲಿ ಮಾಡಿದ ಗಣನೀಯ ಸಾಧನೆಯನ್ನು ಗುರುತಿಸಿ ಜಾನಪದ ವಿಶ್ವವಿದ್ಯಾಲಯು ಇವರನ್ನು ಈ ಗೌರವಕ್ಕೆ ಆಯ್ಕೆ ಮಾಡಿರುತ್ತದೆ.

ಡಿಸೆಂಬರ್ 1 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಕರ್ನಾಟಕ ಜಾನಪದ ವಿ.ವಿ.ಯ ಆರನೇ ಘಟಿಕೋತ್ಸವದ ಸಂದರ್ಭದಲ್ಲಿ ಜೀವನ್ ರಾಂ ಅವರಿಗೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪದವಿ ಪ್ರದಾನ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ಡಾ.ಅಶ್ವತ್ ನಾರಾಯಣ್ ಸಿ.ಎನ್. ಇವರು ಉಪಸ್ಥಿತ ರಿರುತ್ತಾರೆಂದು ಜಾನಪದ ವಿ.ವಿ.ಯ ಕುಲಪತಿಗಳಾದ ಪ್ರೊ.ಟಿ.ಎಂ.ಭಾಸ್ಕರ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹುಮುಖೀ ಸಾಧಕ ಜೀವನ್ ರಾಂ: ಕಡು ಬಡತನದಲ್ಲಿ ಬೆಳೆದ ಜೀವನ್ ರಾಂರವರು ಮೂಲತ: ಯಕ್ಷಗಾನ ಕುಟುಂಬದಿಂದ ಬಂದವರು. ತನ್ನ ನಿರಂತರ- ಅವಿರತ ಕಠಿಣ ಪರಿಶ್ರಮದಿಂದಲೇ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಛಾಪನ್ನು ಮೂಡಿಸಿದ ಇವರು ನೀನಾಸಂ ರಂಗ ಶಿಕ್ಷಣ ಕೇಂದ್ರದಲ್ಲಿ ರಂಗಪದವಿ ಪಡೆದು, ನೀನಾಸಂ ತಿರುಗಾಟದಲ್ಲಿ 5 ವರ್ಷ ನಟನಾಗಿ, ತಂತ್ರಜ್ಞನಾಗಿ, ಸಂಚಾಲಕನಾಗಿ ದುಡಿದವರು.

ಜಾನಪದ, ಯಕ್ಷಗಾನ, ಕಲೆ, ಜಾದೂವನ್ನು ತನ್ನ ನಾಟಕಗಳಲ್ಲಿ ಸಮರ್ಥವಾಗಿ ಬಳಸಿಕೊಂಡ ಜೀವನ್ ರಾಂ ನಿರ್ದೇಶನದ ಪ್ರತಿಯೊಂದು ಪ್ರಯೋಗಗಳೂ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ. ವಿಶೇಷ ರಂಗವಿನ್ಯಾಸ, ಬೆಳಕು ಸಂಯೋಜನೆ, ವಸ್ತ್ರವಿನ್ಯಾಸ, ರಂಗತಂತ್ರಗಳಿಂದ ನಾಟಕಗಳನ್ನು ಅದ್ಭುತವಾಗಿ ಕಟ್ಟುವ ಜೀವನ್ ರಾಂ ರವರು ದೇಶದಾದ್ಯಂತ ತನ್ನದೇ ಆದ ಪ್ರೇಕ್ಷಕ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ.

ಮಕ್ಕಳ ಮತ್ತು ಕಾಲೇಜು ರಂಗಭೂಮಿಯಲ್ಲಿ ವಿಶೇಷ ಆಸಕ್ತಿ ಹೊಂದಿದ ಜೀವನ್ ರಾಂ ಇದುವರೆಗೆ ಸಾವಿರಾರು ವಿದ್ಯಾರ್ಥಿ ಗಳ ಪ್ರತಿಭೆಗೆ ವೇದಿಕೆ ನೀಡಿದವರು. ಬೇರೆಲ್ಲೂ ಕಾಣ ಸಿಗದ, ತನ್ನ ಸ್ವಂತ ವಾಸದ ಮನೆಯನ್ನೇ ಸಾಂಸ್ಕೃತಿಕ ತಾಣ ವನ್ನಾಗಿಸಿ, ಸಾರ್ವಜನಿಕರಿಗೆ ನಿರಂತರ ಚಟುವಟಿಕೆಗಳನ್ನು ನೀಡುತ್ತಾ , ಆರೋಗ್ಯಕರ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಅಪರೂಪದ ರಂಗಕರ್ಮಿ ಜೀವನ್ ರಾಂ ಸುಳ್ಯ. ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ರಂಗಮನೆ ನಾಟಕ ಶಾಲೆಯ ಸ್ಥಾಪಕರಾಗಿದ್ದಾರೆ.

ಸಾಮಾಜಿಕ ಜನಜಾಗೃತಿಗಾಗಿ ಇವರೇ ರಚಿಸಿ,ನಿರ್ದೇಶಿಸಿ, ಅಭಿನಯಿಸಿದ ಬೀದಿನಾಟಕ ಪ್ರದರ್ಶನಗಳ ಸಂಖ್ಯೆ 3000 ಕ್ಕಿಂತಲೂ ಅಧಿಕ. ಸಾಕ್ಷ್ಯಚಿತ್ರ ನಿರ್ಮಾಣ, ಮುಖವಾಡ ತಯಾರಿ, ಚಿತ್ರಕಲೆ, ಕ್ರಾಫ್ಟ್, ರಂಗಗೀತೆ- ಜನಪದ ಗಾಯನ, ಜನಪದ ವಾದ್ಯಗಳನ್ನು ನುಡಿಸುವ, ಸ್ಮರಣಿಕೆ ತಯಾರಿ,ಬೃಹತ್ ಕಲಾತ್ಮಕ ವೇದಿಕೆ ರಚನೆ, ರಂಗಮಂದಿರಗಳ ವಿನ್ಯಾಸ, ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಜಾದೂ ನಿರ್ದೇಶನ, ಸಂಘಟನೆ… ಹೀಗೆ ಹತ್ತು ಹಲವು ಕ್ಷೇತ್ರಗಳ ಬಹುಮುಖೀ ಪ್ರತಿಭೆ ಜೀವನ್ ರಾಂ ಸುಳ್ಯ. ಮಂಗಳೂರು ವಿ.ವಿ.ಯಲ್ಲಿ ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕೇಂದ್ರದಲ್ಲಿ ಇವರು ನಿರ್ಮಿಸಿದ ಯಕ್ಷಗಾನದ ಎರಡು ಮ್ಯೂಸಿಯಂಗಳು ಅಧ್ಯಯನಕ್ಕೆ ಪೂರಕವಾದ ಅತ್ಯಮೂಲ್ಯ ವಸ್ತು ಸಂಗ್ರಹ ಗಳಾಗಿವೆ..

ಪ್ರಶಸ್ತಿ-ಸನ್ಮಾನಗಳು: ರಂಗದಶಾವತಾರಿ, ರಂಗಮಾಂತ್ರಿಕ, ರಂಗಮಾಣಿಕ್ಯ, ಕಲಾಶ್ರೀ, ಬಾಲ ಸೇವಾರತ್ನ ಪುರಸ್ಕಾರ, ಸರಸ್ವತಿ ಪುರಸ್ಕಾರ, ಕರ್ನಾಟಕ ನಾಟಕ ಅಕಾಡೆಮಿ ಸಿ.ಜಿ.ಕೆ.ಪುರಸ್ಕಾರ, ಸುವರ್ಣ ರಂಗ ಸಮ್ಮಾನ್, ಸೌರಭ ಪ್ರಶಸ್ತಿ, ಉಪಾಧ್ಯಾಯ ಸಮ್ಮಾನ್,ಕಲಾ ಸಿಂಧು ಪುರಸ್ಕಾರ, ಆಳ್ವಾಸ್ ಮಕ್ಕಳ ಸಿರಿ ಪ್ರಶಸ್ತಿ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಾಧನಶ್ರೀ ಪ್ರಶಸ್ತಿ, ಅರೆಹೊಳೆ ರಂಗಭೂಮಿ ಪ್ರಶಸ್ತಿ , ಸೇಡಂ ಅಮ್ಮ ಪ್ರಶಸ್ತಿ, ಆರ್ಯಭಟ ಅಂತರ್ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ತನ್ನ ಅತ್ತುತ್ತಮ ನಿರ್ದೇಶನದ ಏಕಾಂಕ ಹಾಗೂ ಕಿರು ನಾಟಕಗಳಿಗೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಸತತ 11 ಬಾರಿ ರಾಷ್ಟೀಯ ರಂಗ ಪ್ರಶಸ್ತಿ ದೊರೆತಿದೆ.. ಸಿಕ್ಕ ಸನ್ಮಾನಗಳು ನೂರಾರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಜಾನಪದ ಜಾತ್ರೆಯ ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ಸರಕಾರದ ರಂಗಸಮಾಜದ ಸದಸ್ಯರಾಗಿ ,ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಪ್ರಸ್ತುತ ಕಾರ್ಕಳ ಯಕ್ಷ ರಂಗಾಯಣದ ಪ್ರಥಮ ನಿರ್ದೇಶಕರಾಗಿ ಕಾರ್ಯೋನ್ಮುಖರಾಗಿದ್ದಾರೆ.

ವಿಶ್ವವಿದ್ಯಾಲಯಕ್ಕೇ ಹೆಮ್ಮೆ: ಜೀವನ್ ರಾಂ ಸುಳ್ಯರವರು ಜಾನಪದ ಮತ್ತು ರಂಗಭೂಮಿಗೆ ನೀಡಿರುವ ಕೊಡುಗೆ ಅಪಾರ. ಸಾಂಸ್ಕೃತಿಕ ಲೋಕಕ್ಕೆ ಅವರ ಶ್ರಮ‌ ಮತ್ತು ತ್ಯಾಗ ಅಗಾಧವಾದದ್ದು. ಶ್ರೀಯುತರಿಗೆ ಡಾಕ್ಟರೇಟ್ ನೀಡುತ್ತಿರುವುದು ವಿಶ್ವವಿದ್ಯಾಲಯಕ್ಕೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ರೀತಿಯ ಗುಣಾತ್ಮಕ ಕೆಲಸಗಳಿಗೆ ಸಹಕಾರ ನೀಡುತ್ತಿರುವ ರಾಜ್ಯ ಸರ್ಕಾರ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಧನ್ಯವಾದಗಳು. – ವೆಂಕಟೇಶ. ಕೆ. ಮುದೂರು, ಸಿಂಡಿಕೇಟ್ ಸದಸ್ಯರು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ.

 
 
 
 
 
 
 
 
 

Leave a Reply