ಅನ್‌ಲಾಕ್ ಸಮಯದಲ್ಲಿ ನಿರ್ದಿಷ್ಟಪಡಿಸಿದ ಚಟುವಟಿಕೆಗಳಿಗೆ ಮಾತ್ರ ಅವಕಾಶ:​​ ಜಿಲ್ಲಾಧಿಕಾರಿ ಜಿ.ಜಗದೀಶ್

 
ಉಡುಪಿ ​: ​ಜಿಲ್ಲೆಯಲ್ಲಿ ಜೂನ್ 14 ರ ಬೆಳಗ್ಗೆ 6 ಗಂಟೆ​ಯಿಂದ ಕೋವಿಡ್ ನಿಯಂತ್ರಣಕ್ಕೆ​ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲಿದ್ದು, ಈ ಸಂದರ್ಭದಲ್ಲಿ ಸರ್ಕಾರ ಸೂಚಿಸಿರುವ ಚಟುವಟಿಕೆಗಳನ್ನು​ ಹೊರತುಪಡಿಸಿ , ಇತರೆ ಚಟುವಟಿಕೆಗಳನ್ನು ಕೈಗೊಂಡರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ , ಜಿಲ್ಲೆಯಲ್ಲಿ ಅನ್‌ಲಾಕ್ ಸಮಯದಲ್ಲಿ ಕೈಗೊಳ್ಳಬಹುದಾದ​ ಚಟುವಟಿಕೆಗಳ ಸಮರ್ಪಕ ಅನುಷ್ಠಾನ ಮಾಡುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.​ 
ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಿರುವ ಕಾರಣ ರಾಜ್ಯ ಸರ್ಕಾರ ಪ್ರಸ್ತುತ ವಿಧಿಸಲಾಗಿದ್ದ ನಿರ್ಬಂದಗಳಲ್ಲಿ​ ಸಡಿಲಿಕೆ ನೀಡಿ , ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಜೂನ್ 14 ರಿಂದ​ 21 ರ ವರೆಗೆ ಜಿಲ್ಲೆಯಲ್ಲಿ ಈ ಮುಂದಿ​ನಂತೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾದಿಕಾರಿ​ ಹೇಳಿದರು.

ಸೋಮವಾರ ದಿಂದ ಶುಕ್ರವಾರದ ವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ, ಎಲ್ಲಾ ಉತ್ಪಾದನಾ ಚಟುವಟಿಕೆ​ ನಿರ್ವಹಿಸುವ ಕೈಗಾರಿಕೆಗಳು, ಸಂಸ್ಥೆಗಳು ಶೇ.50 ರಷ್ಟು ಕಾರ್ಮಿಕರೊಂದಿಗೆ ಕಾರ್ಯ ನಿರ್ವಹಿಸಬಹುದು. ಗಾರ್ಮೆಂಟ್ ಗಳಲ್ಲಿ​ ಮಾತ್ರ ಶೇ.30 ಸಿಬ್ಬಂದಿ ಕಾರ್ಯನಿರ್ವಹಿಸಬಹುದು. ಕಟ್ಟಡ ನಿರ್ಮಾಣ ಮತ್ತು ರಿಪೇರಿ ಚಟುವಟಿಕೆಗಳಿಗೆ ಅಗತ್ಯವಿರುವ ಕಟ್ಟಡ​ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ ಸೇರಿದಂತೆ ಅಗತ್ಯವಿರುವ ವಸ್ತುಗಳ ಮಾರಾಟ ಮಳಿಗೆಗಳು ತೆರೆಯಲು ಅವಕಾಶವಿದೆ.

ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು​ ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ​ ಅಂಗಡಿಗಳು ಸಹ ಈ ಸಮಯದಲ್ಲಿ ಕಾರ್ಯನಿರ್ವಹಿಸಬಹುದು ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ​ ಪದಾರ್ಥಗಳನ್ನು ಮಾರುವಂತಿಲ್ಲ. 
 
ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್ ಗೆ ಅವಕಾಶವಿದೆ. ಹೋಟೆಲ್ ಮತ್ತು​ ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿದೆ. ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ​ ಹಿಂದಿ​ನಂತೆ ಯಾವುದೇ ನಿರ್ಭಂಧಗಳಿಲ್ಲ ಎಂದರು. ಇದನ್ನು ಹೊರತುಪಡಿಸಿ ಇತರೇ ಯವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟವಾಗಿ ತಿಳಿಸಿದರು.

ಎಲ್ಲಾ ಉತ್ಪಾದನಾ ಚಟುವಟಿಕೆ ನಿರ್ವಹಿಸುವ ಕೈಗಾರಿಕೆಗಳು, ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕೋವಿಡ್​ ನಿಯಂತ್ರಣ ಕ್ರಮಗಳನ್ನು ಪಾಲಿಸಿ ಕಾರ್ಯ​ ​ನಿರ್ವಹಿಸಬೇಕು, ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ವಿವರಗಳನ್ನು​ ಒದಗಿಸಬೇಕು, ನಿಗದಿತ ಸಂಖ್ಯೆ​ಗಿಂತ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು.

ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಎಲ್ಲಾ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಪಾಲನೆಗೆ ಸೂಕ್ತ ಮಾರ್ಕಿಂಗ್​ ವ್ಯವಸ್ಥೆ ಮಾಡಿರಬೇಕು ಇಲ್ಲವಾದಲ್ಲಿ ಅಂತಹ ಅಂಗಡಿಗಳ ಲೈಸೆನ್ಸ್ ಅಮಾನತು ಮಾಡಲಾಗುವುದು , ಕೋವಿಡ್​ ನಿಯಂತ್ರಣಕ್ಕೆ ನಿಯೋಜಿಸಿರುವ ಎಲ್ಲಾ ಫೈಯಿಂಗ್ ಸ್ಕಾಡ್ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು​ ಹಾಗೂ ತಹಸೀಲ್ದಾರ್ ಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.

​ಪಾರ್ಕ್ ಗಳು  ಬೆಳಗಿನ ವಾಕಿಂಗ್ ಮಾಡಲು ಮಾತ್ರ ಬೆ.5 ರಿಂದ 10 ರ ವರೆಗೆ ತೆರೆಯಲು ಅವಕಾಶ ನೀಡಿದ್ದು, ಪಾರ್ಕ್ ನಲ್ಲಿ​ ಇತರೇ ಕ್ರೀಡೆಗಳು ಸೇರಿದಂತೆ ಇತರೇ ಯಾವುದೆ ಚಟುವಟಿಕೆಗೆ ಅನುಮತಿಯಿಲ್ಲ, ಟ್ಯಾಕ್ಸಿ ಮತ್ತು ಆಟೋದಲ್ಲಿ ಗರಿಷ್ಠ 2​ ಪ್ರಯಾಣಿಕರು ಮಾತ್ರ ಸಂಚರಿಸಲು ಅನುಮತಿಯಿದೆ. ಕನ್ನಡಕದ ಅಂಗಡಿಗಳು ಬೆ.6 ರಿಂದ 10 ರ ವರೆಗೆ ತೆರೆಯಲು​ ಅವಕಾಶವಿದೆ ಎಂದರು.


ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ ನೈಟ್ ಕರ್ಫ್ಯೂ ಇರಲಿದ್ದು, ರಾತ್ರಿ 7 ಗಂಟೆ​ಯಿಂದ ಮರುದಿನ ಬೆಳಗ್ಗೆ 5​ ರ ವರೆಗೆ ಓಡಾಟವನ್ನು ನಿರ್ಭಂದಿಸಿದೆ. ಆದರೆ ಚಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವವರು , ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು​ ಸಂಸ್ಥೆಗಳ ನೌಕರರು ​ಸೂಕ್ತ  ಗುರುತಿನ ಚೀಟಿಯೊಂದಿಗೆ , ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಸೇರಿದಂತೆ ಅಗತ್ಯ​ ಸೇವೆಗಳನ್ನು ಒದಗಿಸುವ ನೌಕರರು , ವೈದ್ಯಕೀಯ ಸಿಬ್ಬಂದಿಗಳ ಸಂಚಾರಕ್ಕೆ ನಿರ್ಬಂಧಗಳಿಲ್ಲ, 
 
ಸರಕು ಸಾಗಾಣಿಕೆ​ ವಾಹನಗಳು, ಇ ಕಾ​ಮರ್ಸ್  ಮತ್ತು ಹೋಂ ಡೆಲಿವರಿ ಸೇವೆ ನೀಡುವ ವಾಹನಗಳು ಹಾಗೂ ರೈಲು ಮತ್ತು ವಿಮಾನ ಪ್ರಯಾಣಕ್ಕೆ​ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ​. ​ ಇದನ್ನು ಉಲ್ಲಂಘಿಸಿ ಸಂಚರಿಸುವವರ​ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾದಿಕಾರಿ ಸೂಚನೆ ನೀಡಿದರು.

ಶುಕ್ರವಾರ ರಾತ್ರಿ 7 ಗಂಟೆ​ಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಈ​  ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂ​ಬಂದಪಟ್ಟ ಇಲಾಖೆಗಳು , ತುರ್ತು ಮತ್ತು ಅಗತ್ಯ ಸೇವೆ , ಟೆಲಿಕಾಂ ಮತ್ತು​ ಇಂಟರ್ನೆಟ್ ಸೇವೆ ಒದಗಿಸುವ ಇಲಾಖೆಗಳು ಮತ್ತು ಕೈಗಾರಿಕೆ ಕಾರ್ಯನಿರ್ವಹಿಸಲು ಅನುಮತಿಯಿದ್ದು, ಈ ಕಚೇರಿಗಳ ಮತ್ತು​ ಸಂಸ್ಥೆಗಳ ನೌಕರರು ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. 
 
ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು​ ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ​ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು ಸಹ ಈ ಸಮಯದಲ್ಲಿ​ ಕಾರ್ಯ​ ​ನಿರ್ವಹಿಸಬಹುದು​. ​ ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ. 
 
ಬಾರ್​ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್ ಗೆ ಅವಕಾಶವಿದೆ. ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ ಹಿಂದಿ​ನಂತೆ ಯಾವುದೇ ನಿರ್ಭಂಧಗಳಿಲ್ಲ , ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ​ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದರು.​ ಸೂಕ್ತ ಅನುಮತಿಯೊಂದಿಗೆ ಗರಿಷ್ಠ 40 ಮಂದಿ ಮೀರದಂತೆ ಮದುವೆಗಳನ್ನು, ಮನೆಗಳಲ್ಲಿ ನಡೆಸಲು ಅನುಮತಿಯಿದ್ದು,​ ಶವಸಂಸ್ಕಾರದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದರು.

ಅನ್‌ಲಾಕ್ ಅವಧಿಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗ​ದಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ​ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅನುಮತಿ ನೀಡಲಾದ ಚಟುವಟಿಕೆ ಹೊರತುಪಡಿಸಿ ಇತರೆ ಚಟುಚಟಿಕೆ ನಡೆಸುವವವರ​ ​ವಿರುದ್ದ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರು ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ​ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾದಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ​ ವಿಬಾಗಾಧಿಕಾರಿ ​ರಾಜು , ಎಎಸ್ಪಿ ಕುಮಾರ ಚಂದ್ರ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ವಿವಿಧ ಇಲಾಖೆಯ​ ಅಧಿಕಾರಿಗಳು ಉಪಸ್ಥಿತರಿದ್ದರು.​​​​
 
 
 
 
 
 
 
 
 
 
 

Leave a Reply