ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಯಾವುದೇ ಯೋಜನೆ ಇಲ್ಲ ಎಂದ ಕೇಂದ್ರ

ತುಳುನಾಡಿಗರ ಬಹು ದಿನಗಳ ಬೇಡಿಕೆಗೆ ತಣ್ಣೀರೆರಚಿದ  ರಾಜಕೀಯ ನಾಯಕರು
ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಸಲುವಾಗಿ ಜೈ ತುಳುನಾಡ್ ಸಂಘಟನೆ ಸೇರಿದಂತೆ ಜಗತ್ತಿನಾದ್ಯಂತ ಇರುವ ತುಳುನಾಡಿಗರ ಹೋರಾಟಕ್ಕೆ ಕೇಂದ್ರ ಸರ್ಕಾರ ತಣ್ಣೀರೆರಚಿದೆ. ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಒತ್ತಿ ಹೇಳಿದೆ.
ಗೃಹ ಸಚಿವಾಲಯದ ರಾಜ್ಯ ಸಚಿವ ನಿತ್ಯಾನಂದ ರೈ ಅವರು ಲೋಕಸಭೆ ಸಂಸದ ರಾಜಮೋಹನ್ ಉನ್ನಿತಾನ್ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸದ್ಯದಲ್ಲಿಯೇ ಯಾವುದೇ ಸೇರ್ಪಡೆಯ ಯೋಜನೆಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜಮೋಹನ್ ಉನ್ನಿತ್ತಾನ್ ಅವರು ತುಳು ಭಾಷೆಯನ್ನು 8 ನೇ ಶೆಡ್ಯೂಲ್‌ಗೆ ಸೇರಿಸುವ ಬಗ್ಗೆ ಸರ್ಕಾರದ ನಿಲುವನ್ನು ಕೇಳಿದ್ದರು. ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಸಚಿವರು ‘ಡಾ. ಸೀತಾಕಾಂತ್ ಮೊಹಾಪಾತ್ರ ಸಮಿತಿಯು ಎಂಟನೇ ಶೆಡ್ಯೂಲ್‌ನಲ್ಲಿರುವ ಭಾಷೆಗಳನ್ನು ಒಕ್ಕೂಟದ ಅಧಿಕೃತ ಭಾಷೆಗಳಾಗಿ ಗುರುತಿಸುವ ಬಗ್ಗೆ ಯಥಾಸ್ಥಿತಿಯನ್ನು ಮುಂದುವರಿಸಬೇಕು ಎಂದು ಶಿಫಾರಸು ಮಾಡಿತ್ತು.
ಪ್ರಸ್ತುತ, ಅಧಿಕೃತ ಭಾಷೆಗಳ ಸಂಖ್ಯೆಯನ್ನು ಹೆಚ್ಚಿಸುವುದು ಪ್ರಾಯೋಗಿಕ ಅಥವಾ ಆಡಳಿತಾತ್ಮಕವಾಗಿ ಕಾರ್ಯಸಾಧ್ಯವಲ್ಲ”‌ ಎಂದು ಹೇಳಿಕೆ ನೀಡಿದ್ದಾರೆ. ತುಳು ಭಾಷೆಯನ್ನು ಭಾರತೀಯ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಕುರಿತಾಗಿ ಈ ಮೊದಲೇ ತುಳುನಾಡಿಗರ ಕೂಗು ಎದ್ದಿತ್ತು.‌
ಹಲವಾರು ಬಾರಿ ಇದೇ ವಿಚಾರವಾಗಿ ಜೈ ತುಳುನಾಡ್ ಸಂಘಟನೆಯ ಮುಂದಾಳತ್ವದಲ್ಲಿ ಟ್ವಿಟರ್ ಕ್ಯಾಂಪೇನ್ ಕೂಡ ನಡೆಸಲಾಗಿತ್ತು. ಇದರ ಬೆನ್ನಲ್ಲೇ  ರಾಜಕಾರಣಿಗಳೂ ಕೂಡ ನಾವೂ ಕೂಡ ನಿಮ್ಮ ಬೆಂಬಲಕ್ಕೆ ಇದ್ದೇವೆ ಎಂದು ಧ್ವನಿಗೂಡಿಸಿದ್ದರು. ಇದೀಗ ಕೇಂದ್ರ ಸರ್ಕಾರವೇ ಯೋಜನೆಯೇ ಇಲ್ಲವೆಂದು ಹಿಂದೆ ಸರಿದಿರುವುದು ತುಳುನಾಡಿಗರಿಗೆ ಭಾರೀ ನಿರಾಸೆಯಾಗಿದೆ.
 
 
 
 
 
 
 
 
 
 
 

Leave a Reply