ತೆಂಕನಿಡಿಯೂರಿನಲ್ಲಿ ವಿಕಾಸ-೨೦೨೨ ಮಕ್ಕಳ ಬೇಸಿಗೆ ಶಿಬಿರ ಸಮಾರೋಪ

ತೆಂಕನಿಡಿಯೂರಿನ ಬಾಲ ಸಂಸ್ಕಾರ ಕೇಂದ್ರದವರು ಶ್ರೀ ಕಾಳಿಕಾಂಬಾ ಭಜನಾ ಸಂಘ ಹಾಗೂ ಶ್ರೀ ದೇವಿ ಮಹಿಳಾ ಮಂಡಳಿಯ ಸಹಯೋಗದಲ್ಲಿ ನಡೆಸಿದ ವಿಕಾಸ-೨೦೨೨ ಮಕ್ಕಳ ಬೇಸಿಗೆ ಶಿಬಿರವು ಸಮಾರೋಪಗೊಂಡಿತು. ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಪ್ರಾಂಶುಪಾಲರಾದ ಡಾ ಗಣನಾಥ ಶೆಟ್ಟಿ ಎಕ್ಕಾರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಇಂತಹ ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಇಲ್ಲಿ ಈ ಹಿಂದೆ ಕಲಿತ ವಿದ್ಯಾರ್ಥಿಗಳು ಈಗಾಗಲೇ ಉನ್ನತ ಹುದ್ದೆಯಲ್ಲಿದ್ದು ಅವರ ಸಾಧನೆಗೆ ಇಂತಹ ಶಿಬಿರಗಳು ಪ್ರೋತ್ಸಾಹ ನೀಡಿರುವುದು ಸ್ಪಷ್ಟವಾಗಿ ನಾವು ಕಾಣಬಹುದು. ಇಂದಿನ ಶಿಬಿರಾರ್ಥಿಗಳ ಭವಿಷ್ಯವೂ ಉಜ್ವಲವಾಗಿರಲಿ” ಎಂದು ಶುಭ ಹಾರೈಸಿದರು.

ಇನ್ನೋರ್ವ ಅತಿಥಿಯಾಗಿ ಉಡುಪಿ ನಗರಸಭೆಯ ಸದಸ್ಯರಾದ ಶ್ರೀ ವಿಜಯ್ ಕೊಡವೂರು ಮಾತನಾಡಿ, “ಇಂದಿನ ವಿದ್ಯಾರ್ಥಿಗಳ ಸಂಸ್ಕಾರದ ಕೊರತೆಗೆ ಪೋಷಕರು ಹೊಣೆಗಾರರಾಗಿದ್ದಾರೆ. ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ಕಲಿಸಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ. ಈ ರೀತಿಯ ಸಂಸ್ಕಾರ ವಿದ್ಯಾರ್ಥಿ ಜೀವನದಲ್ಲಿಯೇ ಲಭಿಸಿದರೆ ಭವಿಷ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗಬಹುದು.” ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಜನಾ ಸಂಘದ ಅಧ್ಯಕ್ಷ ಶ್ರೀ ಟಿ. ಕೃಷ್ಣ ಆಚಾರ್ಯ ವಹಿಸಿದ್ದರು. ವೇದಿಕೆಯಲ್ಲಿ ಶ್ರೀ ದೇವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುಶೀಲಾ ವಾದಿರಾಜ ಆಚಾರ್ಯ ಹಾಗೂ ಬಾಲ ಸಂಸ್ಕಾರ ಕೇಂದ್ರದ ಅಧ್ಯಕ್ಷ ಶ್ರೀ ಪ್ರದೀಪ್ ಆಚಾರ್ಯ ಉಪಸ್ಥಿತರಿದ್ದರು.
ಶಿಬಿರದ ಸಹಾಯಕ ನಿರ್ದೇಶಕರಾದ ಶ್ರೀಮತಿ ಶಶಿಕಲ ಭಾಸ್ಕರ ಆಚಾರ್ಯ ಸ್ವಾಗತಿಸಿ, ಶಿಬಿರದ ನಿರ್ದೇಶಕರಾದ ಶ್ರೀಮತಿ ಸುಷ್ಮಾ ರಾಜೇಶ ಆಚಾರ್ಯ ವಂದಿಸಿದರು. ಶಿಬಿರಾಧಿಕಾರಿ ಶ್ರೀ ಸಂಪತ್ ಆಚಾರ್ಯ ಶಿಬಿರದ ವರದಿ ಮಂಡಿಸಿದರು. ರೋಹಿತ್ ಶಿಬಿರಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು. ಶ್ರೀ ಉದಯ ಜೆ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಕಾರ್ಯಕ್ರಮದ ಮೊದಲು ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದಿವಾಕರ್ ಕಟೀಲ್ ನಿರ್ದೇಶಿಸಿದ “ಅಧಿಕ ಪ್ರಸಂಗಿ ಪ್ರಹಸನ” ಎಂಬ ನಾಟಕವನ್ನು ಶಿಬಿರಾರ್ಥಿಗಳು ಪ್ರದರ್ಶಿಸಿದರು.


ವಿಕಾಸ-೨೦೨೨ ಬೇಸಿಗೆ ಶಿಬಿರವನ್ನು ಮೇ ೦೧, ೨೦೨೨ ರಂದು ಮಾಹೆ ಮಣಿಪಾಲದ ಡಾ. ಪ್ರತಿಮ ಜಯಪ್ರಕಾಶ್ ಉದ್ಘಾಟಿಸಿದ್ದರು.
ಎಂಟು ದಿನಗಳ ಕಾಲ ನಡೆದ ಶಿಬಿರದಲ್ಲಿ ೬೦ಶಿಬಿರಾರ್ಥಿಗಳು ಪಾಲ್ಗೊಂಡಿದ್ದು, ಜಲವರ್ಣ, ರಂಗ ತರಬೇತಿ, ಹಾಡು, ನೃತ್ಯ, ಕೊಲಾಜ್, ಗ್ರೀಟಿಂಗ್ ತಯಾರಿ, ಕ್ರಾಫ್ಟ್, ಫೇಸ್ ಪೈಂಟ್, ಸ್ಪರ್ಧಾತ್ಮಕ ಪರೀಕ್ಷೆಗಳು, ರಸಪ್ರಶ್ನೆ, ಮಾನವ ಸಂಪನ್ಮೂಲ ತರಬೇತಿ ಇತ್ಯಾದಿ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪಿ.ಎನ್.ಆಚಾರ್ಯ, ದಿವಾಕರ್ ಕಟೀಲ್, ಮನೋಜ್ ಕಾಪು, ಸಂದೀಪ್ ವಿ.ರಾವ್, ರತನ್ ಮೂಡುಬೆಟ್ಟು, ಬಿ. ವಾಸುದೇವ ಆಚಾರ್ಯ, ಪ್ರದೀಪ್ ಆಚಾರ್ಯ, ಉದಯ ಜೆ ಆಚಾರ್ಯ, ಸುಷ್ಮಾ ರಾಜೇಶ ಆಚಾರ್ಯ, ವಾಣಿಶ್ರೀ ಕಾರ್ತಿಕ್ ಆಚಾರ್ಯ, ಸಂಪತ್, ಪ್ರಸಾದ್ , ರೋಹಿತ್, ತೇಜಸ್ ಬಂಗೇರ ಮೊದಲಾದವರು ತರಬೇತಿ ನೀಡಿದರು

 
 
 
 
 
 
 
 
 

Leave a Reply