ತೆಂಕನಿಡಿಯೂರು : ಮಾನವೀಯತೆಯನ್ನು ಜಾಗೃತಗೊಳಿಸಿದ ಶ್ರೇಷ್ಠ ಶರಣ ಹಡಪದ ಅಪ್ಪಣ್ಣ-ಡಾ.ರೇಖಾ ವಿ. ಬನ್ನಾಡಿ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೩೦/೦೬/೨೦೨೨ ರಂದು ಕಾಲೇಜು ಸಭಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ರೇಖಾ ವಿ. ಬನ್ನಾಡಿ, ಲೇಖಕರು ಕುಂದಾಪುರ ಇವರು ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ಬಸವಣ್ಣನ ಸಮಕಾಲೀನರೂ ಆಪ್ತ ಒಡನಾಡಿಯೂ ಆದ ಹಡಪದ ಅಪ್ಪಣ್ಣನ ಬದುಕು ಮತ್ತು ಸಾಧನೆಗಳ ಬಗ್ಗೆ ಮಾತನಾಡಿದರು. ತಳಮೂಲದಿಂದ ಬಂದ ವಚನಕಾರರಾಗಿ ತನ್ನ ವೃತ್ತಿ ಭಾಷೆಯ ಮೂಲಕವೇ ಅನುಭಾವ, ಸಾಮಾಜಿಕ ಕಳಕಳಿ, ಮಾನವೀಯತೆ ನೆಲೆಯಲ್ಲಿ ವಚನ ರಚನೆ ಮಾಡಿರುವುದನ್ನು ತಿಳಿಸಿದರು. ಜಾತಿವ್ಯವಸ್ಥೆ, ಮೌಢ್ಯತೆ ಮುಂತಾದ ಸಾಮಾಜಿಕ ನ್ಯೂನತೆಗಳನ್ನು ಹೋಗಲಾಡಿಸುವ ವಚನಗಳ ಮೂಲಕ ಮಾನವೀಯತೆಯನ್ನು ಜಾಗೃತಗೊಳಿಸಿದ ಅಪ್ಪಣ್ಣನಂತಹ ಮಹಾನ್ ಸಾಧಕರ ಕುರಿತಾಗಿ ಇಂದಿನ ಯುವಜನಾಂಗ ತಿಳಿದುಕೊಳ್ಳಬೇಕಾದ್ದು ಸಾಕಷ್ಟಿದೆ ಎಂದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಹಡಪದ ಅಪ್ಪಣ್ಣನ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ಮಾತನಾಡುತ್ತಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುರೇಶ ರೈ ಕೆ ಅವರು ಸರ್ಕಾರದ ವತಿಯಿಂದ ನಡೆಯುವ ಕನ್ನಡ ಸಂಸ್ಕೃತಿಯ ಈ ಮಹನೀಯರ ಜನ್ಮದಿನಾಚರಣೆಗಳು ಕೇವಲ ಕಾರ್ಯಕ್ರಮಗಳಾಗಿ ಉಳಿಯದೆ ವಿದ್ಯಾರ್ಥಿಗಳಲ್ಲಿ ಅವು ಆತ್ಮವಿಶ್ವಾಸ ತುಂಬುವ ಮತ್ತು ಆ ಮುಖೇನ ತಮ್ಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ನೆರವಾಗಬೇಕೆಂದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಪಾಲಕರಾದ ಪ್ರೊ. ಕೃಷ್ಣ ಅವರು ವಚನಗಾಯನ ನಡೆಸಿಕೊಟ್ಟರು. ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಂಖ್ಯಾಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀ ಉಮೇಶ್ ಪೈ ವಂದಿಸಿದರು. ಕನ್ನಡ ಸಹ ಪ್ರಾಧ್ಯಾಪಕ ಡಾ. ಹೆಚ್.ಕೆ. ವೆಂಕಟೇಶ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply