ಸಮಸ್ಯೆಯನ್ನರಿತು ಅನುಭೂತಿಯಿಂದ ವರ್ತಿಸಿ- ಡಾ ಮಾನಸ

“ಮಕ್ಕಳನ್ನು ಸಾರ್ವಜನಿಕವಾಗಿ ಎಲ್ಲರೆದುರು ಟೀಕಿಸಬೇಡಿ. ಪದೇಪದೇ ಅವರ ತಪ್ಪು ಕಂಡುಹಿಡಿದು ನಿಂದಿಸಬೇಡಿ.ಅನ್ಯರೊಡನೆ ಹೋಲಿಸಿ ಹಳಿಯಬೇಡಿ.ಅವರ ಅವಧಾನ ಮತ್ತು ಸಾಮಾಜಿಕ ಕೌಶಲಗಳನ್ನು ಸುಧಾರಿಸಿ.ಸಮಸ್ಯಾ ಪರಿಹಾರ ಕೌಶಲಗಳನ್ನು ಕಲಿಸಿ. ತೀವ್ರ ಸ್ವರೂಪದ ಮಾನಸಿಕ ಸಮಸ್ಯೆಗಳು ಕಂಡುಬಂದಾಗ ಮನೋತಜ್ಞರ ಸಲಹೆಯಂತೆ ನಡೆದುಕೊಳ್ಳಿ” ಎಂದು ಡಾ ಎವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ ಮಾನಸ ನುಡಿದರು.ಅವರು ಈಚೆಗೆ ಉಡುಪಿಯ ಡಾ ಟಿಎಂಎ ಪೈ ಶಿಕ್ಷಣ ಕಾಲೇಜಿನಲ್ಲಿ ಪ್ರೊ.ಟಿ.ವಿಶ್ವನಾಥ್ ಸ್ಮಾರಕ ಉಪನ್ಯಾಸ ನೀಡುತ್ತಾ ಶಾಲಾ ಮಕ್ಕಳಲ್ಲಿ ಕಂಡುಬರುವ ಆತಂಕ,ಖಿನ್ನತೆ, ಕಲಿಕೆಯ ನ್ಯೂನತೆ,ಚಿತ್ತವಿಕಲತೆ,ಉನ್ಮಾದ- ಖಿನ್ನತೆ,ಸ್ವಲೀನತೆ,ಗೀಳು,ನಡವಳಿಕೆಯ ದೋಷಗಳು ಇವೇ ಮೊದಲಾದ ಮಾನಸಿಕ ಸಮಸ್ಯೆಗಳ ಹಿನ್ನೆಲೆ,ಲಕ್ಷಣಗಳು, ಕಾರಣಗಳು ಹಾಗೂ ಚಿಕಿತ್ಸೆಯ ವಿಧಗಳ ಮೇಲೆ ಬೆಳಕು ಚೆಲ್ಲಿದರಲ್ಲದೆ ವಿದ್ಯಾರ್ಥಿ ಶಿಕ್ಷಕರ ಹಲವಾರು ಸಂಶಯಗಳನ್ನು ಪರಿಹರಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಮನ್ವಯ ಅಧಿಕಾರಿ ಡಾ ಮಹಾಬಲೇಶ್ವರ ರಾವ್ ಮಾತನಾಡುತ್ತಾ ಶಿಕ್ಷಕರು ಮಕ್ಕಳ ಸಾಹಿತ್ಯ, ಮಕ್ಕಳ

ರಂಗಭೂಮಿ, ಮಕ್ಕಳ ಚಲನಚಿತ್ರ, ಮಕ್ಕಳ ಲಾಲನೆ ಪಾಲನೆ,ಮಕ್ಕಳ ಹಕ್ಕುಗಳು ಮುಂತಾಗಿ ಮಕ್ಕಳಿಗೆ ಸಂಬಂಧಪಟ್ಟ ಎಲ್ಲ ಸಂಗತಿಗಳನ್ನು ವಿವರವಾಗಿ ಅಧ್ಯಯನ ಮಾಡಬೇಕು ಎಂದು ಕರೆನೀಡಿದರು.ತೃತೀಯ ಸೆಮಿಸ್ಟರ್ ನ ಶಹನಾಜ್ ಶೇಖ್ ಸ್ವಾಗತ ಕೋರಿದರೆ,ಪ್ರತಿಮಾ ಅಭ್ಯಾಗತರನ್ನು ಸಭೆಗೆ ಪರಿಚಯಿಸಿದರು. ತೃತೀಯ ಸೆಮಿಸ್ಟರ್ ನ ಎಲ್ಸಿ ಸವಿತಾ ನಾಗರಾಜ್ ಧನ್ಯವಾದ ಸಮರ್ಪಿಸಿದರು.ಪ್ರಥಮ ಸೆಮಿಸ್ಟರ್ ನ ಮುರುಗೇಶ್ವರಿ ಹಾಗೂ ರೋಶ್ನಿ ರೋಡ ಸೋನ್ಸ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.

 
 
 
 
 
 
 
 
 
 
 

Leave a Reply