ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಹಾವಳಿ ಭೀಕರವಾಗಿದ್ದು, ಸೋಂಕಿನ ಪ್ರಮಾಣ ದೊಂದಿಗೆ ಕರೊನಾಕ್ಕೆ ಸಾವಿಗೀಡಾತ್ತಿರುವವರ ಸಂಖ್ಯೆಯೂ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಈ ನಡುವೆ ಗುರುವಾರವೊಂದೇ ದಿನ ರಾಜ್ಯದಲ್ಲಿ ಇಬ್ಬರು ಪತ್ರಕರ್ತರು ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ವಿಜಯಪುರ ಜಿಲ್ಲೆಯ ಪತ್ರಕರ್ತ ಜಾಫರ್ ಕಲಾದಗಿ (42) ಹಾಗೂ ಕೋಲಾರ ಜಿಲ್ಲೆಯ ಪತ್ರಕರ್ತ ಎ.ಎಂ. ವೆಂಕಟೇಶ್ ಕರೊನಾ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ. ‘ಬಿಜಾಪುರ ಮಿರರ್’ ಇಂಗ್ಲಿಷ್ ದಿನಪತ್ರಿಕೆ ನಡೆಸುತ್ತಿದ್ದ ಜಾಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಸಾವನ್ನಪ್ಪಿದರು. ಬಂಗಾರಪೇಟೆ ತಾಲೂಕಿನಲ್ಲಿ ಸ್ಥಳೀಯ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಮೃತ ಪತ್ರಕರ್ತರ ಆತ್ಮಕ್ಕೆ ಶಾಂತಿ ಸಿಗಲಿ, ಅವರಿಬ್ಬರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ದೇವರು ಕರುಣಿಸಲಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ ಸೂಚಿಸಿದೆ.